Devdutt Padikkal: ಮೂರನೇ ಟೆಸ್ಟ್ನಿಂದ ಕೆಎಲ್ ರಾಹುಲ್ ಹೊರಕ್ಕೆ; ಮತ್ತೊಬ್ಬ ಕನ್ನಡಿಗನಿಗೆ ಅವಕಾಶ
ರಾಜ್ಕೋಟ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ರಮುಖ ಬ್ಯಾಟರ್ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ. ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಕೆಎಲ್ ರಾಹುಲ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.
ಹಿರಿಯ ಆಯ್ಕೆ ಸಮಿತಿ ಭಾರತ ತಂಡವನ್ನು ಪ್ರಕಟಿಸಿದ ಸಂದರ್ಭದಲ್ಲಿ "ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಭಾಗವಹಿಸುವಿಕೆಯು ಬಿಸಿಸಿಐ ವೈದ್ಯಕೀಯ ತಂಡದಿಂದ ಫಿಟ್ನೆಸ್ ಕ್ಲಿಯರೆನ್ಸ್ಗೆ ಒಳಪಟ್ಟಿರುತ್ತದೆ" ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿತ್ತು.

ಕೆಎಲ್ ರಾಹುಲ್ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲವಾದರೂ, ನಿರ್ಣಾಯಕ ಮೂರನೇ ಟೆಸ್ಟ್ಗೆ ಕಣಕ್ಕಿಳಿಯಲು ರವೀಂದ್ರ ಜಡೇಜಾಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ರಾಹುಲ್ ಲಭ್ಯತೆಯ ಕುರಿತು ಕರೆ ಮಾಡಲು ಇನ್ನೂ ಒಂದು ವಾರ ಕಾಲ ಅವರನ್ನು ಗಮನಿಸುವುದಾಗಿ ವೈದ್ಯಕೀಯ ತಂಡವು ಆಯ್ಕೆದಾರರಿಗೆ ತಿಳಿಸಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ತಿಳಿಸಿದೆ.
ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಬಲಭಾಗದ ಕ್ವಾಡ್ರೈಸ್ಪ್ ನೋವಿನಿಂದ ಬಳಲುತ್ತಿದ್ದ ರಾಹುಲ್ ಅವರು ವೈಜಾಗ್ನಲ್ಲಿ ನಡೆದ ಎರಡನೇ ಟೆಸ್ಟ್ನಿಂದ ಹೊರಗುಳಿದಿದ್ದರು.
ದೇವದತ್ ಪಡಿಕ್ಕಲ್ಗೆ ಅವಕಾಶ
ಆಟಗಾರರ ಗಾಯದ ಸಮಸ್ಯೆ ಭಾರತ ತಂಡದ ಮೇಲೆ ಪ್ರಭಾವ ಬೀರಿದೆ. ವಿರಾಟ್ ಕೊಹ್ಲಿ ಇಡೀ ಸರಣಿಯಿಂದ ಹೊರಗುಳಿಯುವುದು ಖಚಿತವಾಗಿದೆ. ಶ್ರೇಯಸ್ ಅಯ್ಯರ್ ಕಳಪೆ ಪ್ರದರ್ಶನ ನೀಡಿದ ನಂತರ ಅವರು ತಂಡದಲಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.
ಕೆಎಲ್ ರಾಹುಲ್ ಬದಲಿಗೆ ಕರ್ನಾಟಕದ ಮತ್ತೊಬ್ಬ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ತಿಳಿಸಿದೆ. ರಣಜಿ ಟ್ರೋಫಿ ಪಂದ್ಯದಲ್ಲಿ, ಪಡ್ಡಿಕಲ್ ಅವರು ತಮಿಳುನಾಡು ವಿರುದ್ಧ 151 ರನ್ ಗಳಿಸಿದ್ದರು. ಈ ಸಂದರ್ಭದಲ್ಲಿ ಮೈದಾನದಲ್ಲಿ ಆಯ್ಕೆಗಾರರ ಅಧ್ಯಕ್ಷ ಅಜಿತ್ ಅಗರ್ಕರ್ ಹಾಜರಿದ್ದರು. ಎಡಗೈ ಬ್ಯಾಟರ್ ಪಡಿಕ್ಕಲ್ ಅತ್ಯುತ್ತಮ ಫಾರ್ಮ್ನಲ್ಲಿರುವುದು ಅವರಿಗೆ ಭಾರತ ತಂಡದಲ್ಲಿ ಅವಕಾಶ ತಂದುಕೊಟ್ಟಿದೆ.
ದೇವದತ್ ಪಡಿಕ್ಕಲ್ ರಣಜಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ 193 ರನ್ ಗಳಿಸಿದ ನಂತರ, ಅವರು ಗೋವಾ ವಿರುದ್ಧ 103 ರನ್ ಗಳಿಸಿದರು. ಪಡಿಕ್ಕಲ್ ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಅನಧಿಕೃತ ಟೆಸ್ಟ್ಗಳಲ್ಲಿ ಭಾರತ ಎ ಪರ ತಮ್ಮ ಮೂರು ಇನ್ನಿಂಗ್ಸ್ಗಳಲ್ಲಿ 105, 65 ಮತ್ತು 21 ರನ್ ಗಳಿಸಿದ್ದರು.












Click it and Unblock the Notifications