ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ; ಒಪ್ಪಿಗೆ ಸಿಕ್ಕಿಲ್ಲ
ಶಿವಮೊಗ್ಗ, ಸೆಪ್ಟೆಂಬರ್ 16; "ತಾಳಗುಪ್ಪ- ಹೊನ್ನಾವರ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ 2011ರಲ್ಲಿ ರೈಲ್ವೆ ಇಲಾಖೆ ಸಮೀಕ್ಷೆ ನಡೆಸಿದೆ. ಬಳಿಕೆ ಯೋಜನೆ ಮಂಜೂರಾತಿಗಾಗಿ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು, ಅಲ್ಲಿಯೇ ಬಾಕಿ ಇದೆ" ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ವಿಧಾನ ಪರಿಷತ್ತಿನಲ್ಲಿ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ನ ಬಿ. ಕೆ. ಹರಿಪ್ರಸಾದ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, "ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ಯೋಜನೆಯನ್ನು ವೆಚ್ಚ ಹಂಚಿಕೆ ಆಧಾರದದಲ್ಲಿ ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಪ್ರಸ್ತಾವನೆ ಬಂದಿಲ್ಲ" ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗ; ಸೆಪ್ಟೆಂಬರ್ 1ರಿಂದ ಮತ್ತೊಂದು ರೈಲು, ವಿವರಗಳು
"82 ಕಿ. ಮೀ. ಉದ್ದದ ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ನಿರ್ಮಾಣವಾದರೆ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಈ ಯೋಜನೆಗೆ ಪರಿಸರವಾದಿಗಳ ವಿರೋಧ ಬರಬಹುದು" ಎಂದು ಸಚಿವರು ಹೇಳಿದರು.
ಮೈಸೂರು-ತಾಳಗುಪ್ಪ ಹೊಸ ರೈಲು; ವೇಳಾಪಟ್ಟಿ
"ಪರಿಸರ ಸಂಬಂಧಿ ತೊಡಕುಗಳಿಂದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ನೆನೆಗುದಿಗೆ ಬಿದ್ದಿದೆ. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಳ್ಳುವುದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪರಿಸರವಾದಿಗಳ ಜೊತೆ ಶೀಘ್ರದಲ್ಲಿಯೇ ಸಭೆ ನಡೆಸಲಾಗುತ್ತದೆ" ಎಂದು ಸೋಮಣ್ಣ ಉತ್ತರ ನೀಡಿದರು.
ತಾಳಗುಪ್ಪ ರೈಲು ನಿಲ್ದಾಣದಲ್ಲಿ ಪಾರ್ಸೆಲ್ ಸೇವಾ ಕೇಂದ್ರ
ಬಿ. ಕೆ. ಹರಿಪ್ರಸಾದ್ ಮಾತನಾಡಿ, "ಹೊನ್ನಾವರ-ತಾಳಗುಪ್ಪ ರೈಲು ಮಾರ್ಗ ಯೋಜನೆಯಿಂದ ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ಅನುಕೂಲವಾಗಲಿದೆ. ಆ ಭಾಗದ ಅಭಿವೃದ್ಧಿಗೆ ಸಹಾಯಕವಾಗಿರುವ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಹೆಚ್ಚು ಕಾಳಜಿವಹಿಸಬೇಕು" ಎಂದರು.
ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ; ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ತಾಳಗುಪ್ಪ ಮತ್ತು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರವನ್ನು ಸಂಪರ್ಕಿಸುವ ರೈಲು ಯೋಜನೆ ಇದಾಗಿದೆ. ಕೆಲವು ದಿನಗಳ ಹಿಂದೆ ಗೃಹ ಸಚಿವ ಆರಗ ಜ್ಞಾನೇಂದ್ರ ಈ ಯೋಜನೆ ಬಗ್ಗೆ ಕೊಂಕಣ ರೈಲ್ವೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು.
ಕೊಂಕಣ ರೈಲ್ವೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಗುಪ್ತ ಸಚಿವರ ಜೊತೆ ಯೋಜನೆ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದೆ. ಯೋಜನೆ ಅನುಷ್ಠಾನಗೊಂಡರೆ ಶಿವಮೊಗ್ಗ ಜಿಲ್ಲೆಯೂ ಕೊಂಕಣ ರೈಲ್ವೆ ಜಾಲಕ್ಕೆ ಸೇರುತ್ತದೆ ಎಂದು ಹೇಳಿದ್ದರು.
2016ರಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಸುರೇಶ್ ಪ್ರಭು 2,500 ಕೋಟಿ ವೆಚ್ಚದ ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ಯೋಜನೆ ಘೋಷಣೆ ಮಾಡಿದ್ದರು. ಈ ಯೋಜನೆ ಜಾರಿಗೊಂಡರೆ ತಾಳಗುಪ್ಪ-ಮಂಗಳೂರು, ಮಂಗಳೂರು-ಮುಂಬೈ ಮಾರ್ಗದ ಅಂತರ ಕಡಿಮೆಯಾಗಲಿದೆ.
ಕರಾವಳಿ ಮತ್ತು ಘಟ್ಟ ಪ್ರದೇಶಗಳನ್ನು ಬೆಸೆಯಲು ಕುಕ್ಕೆ ಸುಬ್ರಮಣ್ಯದಲ್ಲಿ ಮಾತ್ರ ರೈಲು ಮಾರ್ಗವಿದೆ. ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗ ನೆನೆಗುದಿಗೆ ಬಿದ್ದಿದೆ. ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ನಿರ್ಮಾಣವಾದರೆ ಕರಾವಳಿ- ಘಟ್ಟ ಪ್ರದೇಶ ಸಂಪರ್ಕಿಸಲು ಸಹಕಾರಿಯಾಗಲಿದೆ.
ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಪರಿಸರ ಇಲಾಖೆ ಅನುಮತಿ ಅಗತ್ಯವಿದೆ. ಇಲ್ಲಿ ರೈಲು ಅರಣ್ಯ ಪ್ರದೇಶದಲ್ಲಿ ಸುರಂಗ ಮಾರ್ಗದಲ್ಲಿ ಸಂಚಾರ ನಡೆಸಬೇಕಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ವೆಚ್ಚ ಹಂಚಿಕೆ ಆಧಾರದ ಮೇಲೆ ಯೋಜನೆ ಕೈಗೆತ್ತಿಕೊಳ್ಳಬಹುದಾಗಿದೆ.
ರೈಲ್ವೆ ಇಲಾಖೆ 50:50ರ ವೆಚ್ಚ ಹಂಚಿಕೆ ಆಧಾರದ ಮೇಲೆ ಯೋಜನೆ ಕೈಗೆತ್ತಿಕೊಳ್ಳಲು ಬಯಸಿದೆ. ರಾಜ್ಯ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯದ ಕಾರಣ ಯೋಜನೆಯ ಮಂಜೂರಾತಿಗಾಗಿ ರೈಲ್ವೆ ಮಂಡಳಿ ಇನ್ನೂ ಒಪ್ಪಿಗೆಯನ್ನು ಸಹ ನೀಡಿಲ್ಲ.
2010ರಲ್ಲಿ ರೈಲ್ವೆ ಇಲಾಖೆ ನಡೆಸಿದ ಪ್ರಾಥಮಿಕ ಸಮೀಕ್ಷೆಯಲ್ಲಿ 82.15 ಕಿ. ಮೀ. ಉದ್ದದ ರೈಲು ಮಾರ್ಗದಲ್ಲಿ 6 ನಿಲ್ದಾಣಗಳನ್ನು ನಿರ್ಮಿಸಲು ಯೋಜಿಲಸಾಗಿತ್ತು. ಈ ಮಾರ್ಗದಲ್ಲಿ ನಾಲ್ಕು ರೈಲನ್ನು ಓಡಿಸಿದರೆ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹ ಸಹಾಯಕವಾಗಲಿದೆ ಎಂದು ವರದಿ ಹೇಳಿತ್ತು.
ಪ್ರಾಥಮಿಕ ಸಮೀಕ್ಷೆಯಲ್ಲಿ ಯೋಜನೆಗೆ ಸುಮಾರು 1,511 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಲಸಾಗಿತ್ತು. ಈಗ ಯೋಜನೆಯ ವೆಚ್ಚ ಮೂರುಪಟ್ಟು ಹೆಚ್ಚಾಗಲಿದೆ. ಯೋಜನೆಗೆ ಚಾಲನೆ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.