ನೋಡ ಬನ್ನಿ ಶಿವಮೊಗ್ಗದ ಮಾರಿಕಾಂಬ ಜಾತ್ರೆಯ ಸೊಬಗು
ಶಿವಮೊಗ್ಗ, ಫೆಬ್ರವರಿ 20: ನಗರ ದೇವತೆ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಇಂದು (ಫೆ.20) ಬೆಳಗಿನ ಜಾವ ಚಾಲನೆ ದೊರೆತಿದೆ. ಇಂದಿನಿಂದ 5 ದಿನಗಳ ಕಾಲ ವೈಭವದಿಂದ ಮಾರಿಕಾಂಬ ದೇವಿ ಜಾತ್ರೆ ನಡೆಯಲಿದ್ದು, ಅಪಾರ ಸಂಖ್ಯೆ ಭಕ್ತರು ಬೆಳಿಗ್ಗೆಯಿಂದಲೇ ದೇವಿಯ ದರ್ಶನ ಪಡೆದುಕೊಂಡಿದ್ದಾರೆ.
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯ ಆಡಳಿತ ಮಂಡಳಿಯಿಂದ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ 2 ವರ್ಷಗಳಿಗೊಮ್ಮೆ ನಗರದಲ್ಲಿ ಅದ್ದೂರಿಯಾಗಿ ನಡೆಯುವ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಮೊಗ್ಗ ನಗರ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.
ಗಾಂಧಿಬಜಾರಿನಲ್ಲಿ
ದೇವಿಯನ್ನು
ಸ್ಥಾಪಿಸಿದ್ದು
ಬಿ.ಬಿ.ರಸ್ತೆಯಲ್ಲಿನ
ಬ್ರಾಹ್ಮಣರ
ಸಮಾಜದ
ನಾಡಿಗರ
ಕುಟುಂಬದವರು
ಮೊದಲ
ಪೂಜೆ
ನೆರವೇರಿಸುವ
ಮೂಲಕ
ಜಾತ್ರಾ
ಮಹೋತ್ಸವ
ಆರಂಭಗೊಂಡಿತು.
ದೇವಿಯ
ದರ್ಶನಕ್ಕೆ
ಆಗಮಿಸಿದ
ಸಾವಿರಾರು
ಮುತ್ತೈದೆಯರು
ಶ್ರೀ
ಮಾರಿಕಾಂಬೆಗೆ
ಉಡಿ
ತುಂಬಿ
ಪೂಜೆ
ಸಲ್ಲಿಸಿದರು.
ಮಂಗಳವಾದ್ಯದೊಂದಿಗೆ ಮೆರವಣಿಗೆ
ಮಂಗಳವಾರ ರಾತ್ರಿ 10 ಗಂಟೆಯವರೆಗೂ ನಾಗರೀಕರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ನಂತರ ಉಪ್ಪಾರ ಸಮಾಜದವರು ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಮೆರವಣಿಗೆಯ ಮೂಲಕ ಕೋಟೆ ರಸ್ತೆಯಲ್ಲಿರುವ ಮಾರಿ ಗದ್ದುಗೆಯವರೆಗೂ ತರಲಿದ್ದಾರೆ. ಆಗ ದೇವಿಯನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗಂಗಮತಸ್ಥ ಸಮಾಜದವರು ಪೂಜೆ ಸಲ್ಲಿಸಲಿದ್ದಾರೆ.
ಜಾನಪದ ತಂಡಗಳು ಭಾಗಿ
ಫೆ.21ರ ಬೆಳಿಗ್ಗೆ 4 ಗಂಟೆಗೆ ಹರಿಜನ ಸಮಾಜದವರು ಬೇವಿನ ಉಡಿಗೆಯೊಂದಿಗೆ ಪೂಜೆ ಸಲ್ಲಿಸಿದ ನಂತರ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಕುರುಬ, ಉಪ್ಪಾರ, ಮಡಿವಾಳ ಸಮಾಜ ದವರು ಸರದಿಯಂತೆ 4 ದಿನಗಳ ಕಾಲ ಗದ್ದುಗೆಯಲ್ಲಿ ಅಮ್ಮನವರಿಗೆ ಪೂಜೆ ಸಲ್ಲಿಸುತ್ತಾರೆ ಎಂದರು. ಫೆ.24ರ ಶನಿವಾರ ರಾತ್ರಿ 9 ಗಂಟೆಗೆ ಮಾರಿಕಾಂಬೆಯನ್ನು ವನಪ್ರವೇಶಕ್ಕೆ ಕಳುಹಿಸಿಕೊಡುವ ಕಾರ್ಯಕ್ರಮವಿರುತ್ತದೆ. ಆ ದಿನ ಉತ್ಸವ ನಡೆಯಲಿದ್ದು ವಿವಿಧ ಜಾನಪದ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.
ವಿಜೇತರಿಗೆ 2 ಬೆಳ್ಳಿಗದೆ
ಈ ಮಾರಿಕಾಂಬ ಜಾತ್ರೆಯಲ್ಲಿ ಕುಸ್ತಿಗೆ ತನ್ನದೇ ಆದ ಇತಿಹಾಸವಿದೆ. ಇತ್ತೀಚಿನ ದಿನಗಳಲ್ಲಿ ಕುಸ್ತಿ ಒಂದು ಕ್ರೀಡೆಯಿಂದ ಹೊರಗುಳಿದಿದ್ದು ಮರೆಯಾಗುತ್ತಿದೆ. ರಾಜಮಹಾರಾಜರ ಕಾಲದಿಂದ ಪ್ರಸಿದ್ದಿಯಾಗಿದ್ದ ಈ ಕ್ರೀಡೆಯನ್ನು ಇಂತಹ ಹಬ್ಬದ ನೆಪದಲ್ಲಾದರೂ ಉಳಿಸಿಕೊಂಡು ಬರುತ್ತಿರುವುದು ಶಿವಮೊಗ್ಗ ಮಾರಿ ಜಾತ್ರೆಯ ವಿಶೇಷವಾಗಿದೆ. ಈ ಹಬ್ಬದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನಡೆಯುತ್ತದೆ.
ರಾಜ್ಯಮಟ್ಟದ ಬಯಲು ಕುಸ್ತಿ ಈ ಬಾರಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಫೆ.23 ರಿಂದ 25ರವರೆಗೆ ಪ್ರತಿ ದಿನ ಮಧ್ಯಾಹ್ನ 3ಗಂಟೆಗೆ ನಡೆಯಲಿದೆ. ವಿಜೇತರಿಗೆ 2 ಬೆಳ್ಳಿಗದೆ ಬಹುಮಾನವಾಗಿ ನೀಡಲಾಗುತ್ತದೆ.
2 ವರ್ಷಕ್ಕೊಮ್ಮೆ ಪೂಜೆ
ನಗರದ ಮಾರಿಕಾಂಬ ಜಾತ್ರೆಗೆ ಇತಿಹಾಸವಿದ್ದು, ಮಾರಿ ಹಬ್ಬವು ಮಲೆನಾಡಿನಲ್ಲಿಯೇ ಹೆಸರುವಾಸಿಯಾಗಿದೆ. ಶಿವಪ್ಪ ನಾಯಕರು ಕೂಡ ಇಲ್ಲಿನ ಮಾರಿಕಾಂಬೆಗೆ ಪೂಜೆ ಸಲ್ಲಿಸಿ ಯುದ್ದಕ್ಕೆ ಹೊರಡುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಇಂತಹ ಮಾರಿಕಾಂಬ ಜಾತ್ರೆ ಯನ್ನು ಮಾರಿಕಾಂಬಸೇವಾ ಸಮಿತಿಯು 1976ರಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದೆ. ಪ್ರತಿ 2 ವರ್ಷಗಳಿಗೊಮ್ಮೆ ಆಯೋಜಿಸುವ ಜಾತ್ರೆಗೆ ನಿಗದಿ ಪಡಿಸಿದ ದಿನದಂದು ಬೆಳಿಗ್ಗೆ ಬಿ.ಬಿ. ರಸ್ತೆಯಲ್ಲಿರುವ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ.
ಮಡಿಲಕ್ಕಿ ತುಂಬುವ ನೀರೆಯರು
ಗಾಂಧಿ ಬಜಾರಿನ ತವರು ಮನೆಯಲ್ಲಿ ದೇವಿಗೆ ಉಡಿ ತುಂಬಿ ಪೂಜೆ ಸಲ್ಲಿಸಲಾಗುತ್ತದೆ. ಆ ದಿನ ರಾತ್ರಿ 10 ಗಂಟೆಯವರೆಗೂ ಮಹಿಳೆ ಯರು ಮಡ್ಲಕ್ಕಿ ನೀಡಿ ಪೂಜೆ ಸಲ್ಲಿಸುತ್ತಾರೆ. ನಂತರ ಮಾರಿ ಕಾಂಬೆಯನ್ನು ರಥದಲ್ಲಿ ಕೂರಿಸಿ ಮೆರವ ಣಿಗೆೆಯನ್ನು ಮಾಡುತ್ತಾರೆ. ಉಪ್ಪಾರ ಸಮಾಜದವರು, ಗಂಗಾಮತಸ್ಥ ಸಮಾಜದವರು ದೇವಿಗೆ ವಿಶೇಷ ವಾಗಿ ಪೂಜೆ ಸಲ್ಲಿಸುತ್ತಾರೆ. ಒಟ್ಟಾರೆ ಎಲ್ಲ ಸಮಾಜದವರು ಒಗ್ಗಟ್ಟಾಗಿ ಆಚರಿಸುವ ಹಬ್ಬವಿದು.