ಯಡಿಯೂರಪ್ಪನವರಿಗೆ ಅಗ್ನಿ ಪರೀಕ್ಷೆ, ಮೈತ್ರಿ ಪಕ್ಷಗಳಿಗೆ ಹುಲಿ 'ಶಿಕಾರಿ'

ಕರ್ನಾಟಕ ರಾಜಕಾರಣದಲ್ಲಿ ಬೇರು ಮಟ್ಟದಿಂದ ರಾಜಕಾರಣ ಮಾಡುತ್ತಾ ಬಂದು, ತಮ್ಮದೇ ಛಾಪು ಮೂಡಿಸಿದ ಕೆಲವೇ ರಾಜಕಾರಣಿಗಳ ಪೈಕಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ಒಬ್ಬರು ಎಂಬುದು ನಿರ್ವಿವಾದ. ಆದರೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಸನ್ನಿವೇಶದಿಂದ ಮೊದಲುಗೊಂಡು, ಕೆಜೆಪಿ ಪಕ್ಷ ಕಟ್ಟಿದ್ದು, ಆ ನಂತರ ಬಿಜೆಪಿಗೆ ಹಿಂತಿರುಗಿದ್ದು... ಇಂಥ ಬೆಳವಣಿಗೆಗಳು ಅವರ ವರ್ಚಸ್ಸನ್ನು ಕುಗ್ಗಿಸಿತು.

ಒಂದು ಪಕ್ಷದಿಂದ ಹೊರಗೆ ಹೋಗಿ, ಹೊಸ ಪಕ್ಷ ಸ್ಥಾಪನೆ ಮಾಡಿ, ಅದು ಬರಕತ್ತಾಗದೆ ಮೂಲ ಪಕ್ಷಕ್ಕೆ ಹಿಂತಿರುಗಿದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಹಾಗೆ ವಾಪಸಾದ ನಂತರವೂ ಯಶಸ್ಸು ಕಂಡವರು ಇದ್ದಾರೆ. ಆದರೆ ಅದೆಲ್ಲ ವಯಸ್ಸು ಹಾಗೂ ಅವಕಾಶ ಇರುವ ಸಂದರ್ಭದಲ್ಲಿ ಮಾತ್ರ. ಯಡಿಯೂರಪ್ಪ ಅವರ ಸಂಗತಿಯೇ ಬೇರೆ.

ಮೈಸೂರು ದಸರಾ - ವಿಶೇಷ ಪುರವಣಿ

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಲಿದ್ದು, ಅದರ ಕಾವು ಅದಾಗಲೇ ಶುರುವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರವಿದು. ಅಲ್ಲಿ ಸ್ಪರ್ಧೆಗೆ ಇಳಿದಿರುವುದು ಬಿ.ವೈ.ರಾಘವೇಂದ್ರ; ಯಡಿಯೂರಪ್ಪ ಅವರ ಮಗ. ಇನ್ನು ನಾಲ್ಕೈದು ತಿಂಗಳಿಗೆ ಮತ್ತೆ ಸಾರ್ವತ್ರಿಕ ಲೋಕಸಭೆ ಚುನಾವಣೆ ನಡೆಯುತ್ತದೆ. ಅಷ್ಟು ಸಮಯಕ್ಕಾಗಿ ಉಪ ಚುನಾವಣೆ ನಡೆಯುವುದು ಮುಖ್ಯವಾಗಿ ಬಿಜೆಪಿಗೆ ಬೇಡ.

ಇದೇ ಮಾತನ್ನು ಸ್ವತಃ ಯಡಿಯೂರಪ್ಪ ಕೂಡ ಹೇಳಿದ್ದಾರೆ. ಏಕೆ, ಯಾವ ಕಾರಣಕ್ಕಾಗಿ ಈ ಮಾತನ್ನು ಹೇಳಿದರು ಎಂಬುದು ಬಹಳ ಆಸಕ್ತಿಕರವಾದ ಸಂಗತಿ. ಈ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗಂತೂ ಸಾಕಷ್ಟು ಬೆವರು ಹರಿಯಲಿಕ್ಕಿದೆ. ಅದಿರಲಿ, ಈ ಉಪ ಚುನಾವಣೆಯಲ್ಲಿನ ಸವಾಲುಗಳೇನು ಅಂತ ತಿಳಿಯಲು ಮುಂದೆ ಓದಿ.

ಒಮ್ಮೆ ಸಂಸತ್, ಮತ್ತೊಮ್ಮೆ ವಿಧಾನಸಭೆ ಎಂಬ ಬೇಸರ

ಒಮ್ಮೆ ಸಂಸತ್, ಮತ್ತೊಮ್ಮೆ ವಿಧಾನಸಭೆ ಎಂಬ ಬೇಸರ

ಯಡಿಯೂರಪ್ಪ ಅವರು ಈಗ ಜನರ ಮುಂದೆ ತಾವೇ ಮಾಡಿದ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಜತೆಗೆ ಕೇಂದ್ರ ಸರಕಾರದ ಸಾಧನೆಗಳನ್ನೂ ಹೇಳಬೇಕಾದ ಅನಿವಾರ್ಯ ಸ್ಥಿತಿ ಎದುರಿಸುತ್ತಿದ್ದಾರೆ. ಒಲ್ಲದ ಮನಸ್ಸಿಂದ ಸಂಸದರಾದ ಯಡಿಯೂರಪ್ಪನವರು, ನನಗೆ ದೆಹಲಿ ರಾಜಕೀಯ ಒಗ್ಗುವುದಿಲ್ಲ ಎಂದು ಯಾವಾಗಲೋ ಹೇಳಿದ್ದಾರೆ. ತಾವು ಸಂಸದರಾದ ನಂತರವೂ ಬಹಳ ಸಮಯ ಈ ಹಿಂದಿನ ಕಾಂಗ್ರೆಸ್ ಸರಕಾರದ ವಿರುದ್ಧ ಕತ್ತಿ ಝಳಪಿಸಲು ರಾಜ್ಯ ಸುತ್ತಾಡಿದ್ದಾರೆಯೇ ಹೊರತು ಸಂಸದರಾಗಿ ಅವರ ಕಾರ್ಯ ನಿರ್ವಹಣೆ ಅಂಥ ಪರಿಣಾಮಕಾರಿಯೇನೂ ಆಗಿರಲಿಲ್ಲ. ಇನ್ನು ಒಮ್ಮೆ ಸಂಸತ್ ಗೆ, ಮತ್ತೊಮ್ಮೆ ವಿಧಾನಸಭೆಗೆ ಸ್ಪರ್ಧೆ ಮಾಡುವ ರಾಜಕಾರಣಿಗಳ ಬಗ್ಗೆ ಜನರಿಗೂ ಒಂದು ಬೇಸರ ಇರುತ್ತದೆ. ಅನಗತ್ಯವಾಗಿ ಚುನಾವಣೆ ಹೇರಿದರು ಎಂಬ ಸಿಟ್ಟು ಸಹ ಸಹಜವಾಗಿಯೇ ಇರುತ್ತದೆ. ಈ ರೀತಿ ತೆರವಾಗುವ ಸ್ಥಾನದಿಂದ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಸಿಗುತ್ತದೆ ಎಂಬುದಿದ್ದರೆ ಸಂಘಟನೆ ಮಟ್ಟದ ಕಾರ್ಯಕರ್ತರಿಗೆ ಹುರುಪು-ಉತ್ಸಾಹ ಇರುತ್ತದೆ. ಆದರೆ ಇಲ್ಲಿ ಯಡಿಯೂರಪ್ಪ ಅವರ ಮಗ ರಾಘವೇಂದ್ರ ಕಣದಲ್ಲಿದ್ದಾರೆ.

ಯಾವ ಮುಖ ಇಟ್ಟುಕೊಂಡು ಮತ ಕೇಳ್ತಾರೆ?

ಯಾವ ಮುಖ ಇಟ್ಟುಕೊಂಡು ಮತ ಕೇಳ್ತಾರೆ?

ಇನ್ನು ಯಾವುದೇ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದರೂ ಹಿಂದೆ ಆಯ್ಕೆಯಾಗಿದ್ದ ಸಂಸದರ ಕಾರ್ಯ ವೈಖರಿಯ ಮೌಲ್ಯಮಾಪನದ ಜತೆಗೆ ಅದೇ ಪಕ್ಷವು ಅಧಿಕಾರದಲ್ಲಿದ್ದರೆ ಅಂದರೆ ರಾಜ್ಯ ಅಥವಾ ಕೇಂದ್ರದಲ್ಲಿ ಆ ಸರಕಾರದ ಸಾಧನೆ ಕೂಡ ಬಹಳ ಮುಖ್ಯ ಆಗಿರುತ್ತದೆ. ಪೆಟ್ರೋಲ್ ಬೆಲೆ ಹೊತ್ತಿ ಉರಿಯುತ್ತಿದೆ. ಡಾಲರ್ ವಿರುದ್ಧ ರುಪಾಯಿ ಪಾತಾಳ ತಲುಪಿದೆ. ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ವಿಪಕ್ಷಗಳು ಟೀಕಾ ಪ್ರಹಾರವನ್ನೇ ನಡೆಸುತ್ತಿವೆ. ವಿಪಕ್ಷಗಳಿರಲಿ ಬಿಜೆಪಿಯಲ್ಲೇ ಇದ್ದ ಯಶವಂತ್ ಸಿನ್ಹಾ ಅಂಥವರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು ಕರ್ನಾಟಕದಲ್ಲೇ ಬೇರು ಹೊಂದಿರುವ ಎಚ್ ಎಎಲ್ ನಿಂದ ಅವಕಾಶ ಕಿತ್ತು, ರಿಲಯನ್ಸ್ ಡಿಫೆನ್ಸ್ ನಂಥ ಕಂಪನಿಗೆ ಅವಕಾಶ ಕೊಡಲಾಗಿದೆ. ಇದನ್ನು ಸೂಚಿಸಿದ್ದು ಭಾರತ ಸರಕಾರವೇ ಎಂದು ಫ್ರಾನ್ಸ್ ಸರಕಾರದ ಹಿಂದಿನ ಅಧ್ಯಕ್ಷರೇ ಹೇಳಿದ್ದಾರೆ. ಇಷ್ಟೆಲ್ಲ ರಂಕಲು ಜತೆಗೆ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ. ಇಂಥ ಸನ್ನಿವೇಶದಲ್ಲಿ ಲೋಕಸಭೆ ಚುನಾವಣೆಗೆ ಯಾವ ಮುಖವಿಟ್ಟುಕೊಂಡು ಮತ ಕೇಳಲು ಸಾಧ್ಯವಾಗುತ್ತದೆ.

ವಿರೋಧಿಗಳಿಗೆ ಯಡಿಯೂರಪ್ಪ ಉತ್ತರ ಕೊಡಬಲ್ಲರಾ?

ವಿರೋಧಿಗಳಿಗೆ ಯಡಿಯೂರಪ್ಪ ಉತ್ತರ ಕೊಡಬಲ್ಲರಾ?

ಯಡಿಯೂರಪ್ಪನವರು ಸೋಮವಾರ ಮಾಧ್ಯಮಗಳ ಎದುರು ಮಾತನಾಡುವಾಗ ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ಮಹತ್ತರವಾದ ರಾಜಕೀಯ ಬೆಳವಣಿಗೆ ಆಗುತ್ತದೆ, ನೋಡ್ತಿರಿ ಎಂದಿದ್ದರು. ಇಂಥ ಹಲವು ಮಾತುಗಳು ಯಡಿಯೂರಪ್ಪ ಅವರು ಆಡಿ, ಆ ನಂತರ ಗೇಲಿಗೊಳಗಾದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಹೇಗಾದರೂ ಮಾಡಿ, ತನ್ನ ವರ್ಚಸ್ಸು ಉಳಿಸಿಕೊಳ್ಳಲೇಬೇಕು ಎಂದು ಹೆಣಗುವಂತೆ ಕಾಣುತ್ತಿರುವ ಅವರಲ್ಲಿ ಮುಂಚಿನ ಅಂದರೆ ವಿಪಕ್ಷ ನಾಯಕರಾಗಿದ್ದಾಗ ಇದ್ದ ಗಟ್ಟಿತನ ಕಾಣುತ್ತಿಲ್ಲ. ಕರ್ನಾಟಕದಲ್ಲಿರುವ ಆಡಳಿತಾರೂಢ ಮೈತ್ರಿ ಸರಕಾರದ ವಿರುದ್ಧ ಏನು ಆರೋಪ ಮಾಡುತ್ತಾರೆ? ಇವರದು ಕುಟುಂಬ ರಾಜಕಾರಣ ಅನ್ನಲಿಕ್ಕೆ ಸಾಧ್ಯವಾ? ಸ್ವತಃ ತಮ್ಮ ಮಗನನ್ನು ಚುನಾವಣೆಗೆ ಇಳಿಸಿದ್ದಾರೆ. ಯಾವುದಾದರೂ ಹಗರಣದ ಬಗ್ಗೆ ತನಿಖೆಗೆ ಆಗ್ರಹಿಸಬಹುದಾ? ಮೊದಲು ನಿಮ್ಮ ಪ್ರಧಾನಿಗಳಿಂದ ರಫೇಲ್ ಖರೀದಿ ಅವ್ಯವಹಾರ ಆರೋಪದ ತನಿಖೆ ಮಾಡಿಸಿ ಎನ್ನಬಹುದು. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಸರಕಾರ ಏನು ಮಾಡ್ತಿದೆ? ಡಾಲರ್ ವಿರುದ್ಧ ಕುಸಿದಿರುವ ರುಪಾಯಿ ಹೇಗೆ ಮೇಲೆತ್ತುತ್ತೀರಿ ಎಂದೆಲ್ಲ ಪ್ರಶ್ನಿಸಿದರೆ ಸದ್ಯದ ಸನ್ನಿವೇಶದಲ್ಲಿ ಯಡಿಯೂರಪ್ಪ ಏನಂತ ಉತ್ತರ ಕೊಡುತ್ತಾರೆ?

ಲಿಂಗಾಯತ ವರ್ಸಸ್ ಹಿಂದುಳಿದ ವರ್ಗದವರು

ಲಿಂಗಾಯತ ವರ್ಸಸ್ ಹಿಂದುಳಿದ ವರ್ಗದವರು

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಹಿಡಿತವನ್ನು ತಳ್ಳಿಹಾಕಲು ಯಾರಿಗೆ ಆಗಲಿ ಈಗಲೂ ಸಾಧ್ಯವಿಲ್ಲ. ಆದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದು ಮಧು ಬಂಗಾರಪ್ಪ. ಈ ಹಣಾಹಣಿಯನ್ನು ಲಿಂಗಾಯತ ವರ್ಸಸ್ ಹಿಂದುಳಿದ ವರ್ಗದವರು ಅಂತ ತೆಗೆದುಕೊಂಡರೆ ಈಡಿಗ ಸಮುದಾಯದ ಮಧು ಬಂಗಾರಪ್ಪ ಅವರಿಗೆ ಹೆಚ್ಚು ಪ್ಲಸ್ ಗಳು ಕಾಣುತ್ತಿವೆ. ಕಾಂಗ್ರೆಸ್-ಜೆಡಿಎಸ್ ನ ಸಾಂಪ್ರದಾಯಿಕ ಮತಗಳು ಒಡೆಯದಂತೆ ನೋಡಿಕೊಂಡರೆ ಸಾಕು, ಬಿಜೆಪಿ ಏದುಸಿರು ಬಿಡಬೇಕಾಗುತ್ತದೆ. ಇನ್ನು ಕೇಂದ್ರ ಸರಕಾರದ ಬಗ್ಗೆ ಇರುವ ಅಸಮಾಧಾನವು ಆಕ್ರೋಶವಾಗಿ ಬದಲಾದರೆ ಉಸಿರು ಕಟ್ಟಿದಂತಾಗುತ್ತದೆ. ಇನ್ನು ನಾಲ್ಕೈದು ತಿಂಗಳಿಗೆ ಮತ್ತೆ ಚುನಾವಣೆ ಅಲ್ಲವಾ? ಒಂದೇ ಕುಟುಂಬದಿಂದ ಇಬ್ಬರನ್ನು (ಬಂಗಾರಪ್ಪ, ಗೀತಾ ಶಿವರಾಜಕುಮಾರ್) ಸೋಲಿಸಿದ್ದೇವೆ. ಈ ಸಲ ಆ ಕುಟುಂಬದ ಒಬ್ಬರನ್ನು ಗೆಲ್ಲಿಸೋಣ ಅಂತ ಮತದಾರರು ಯೋಚಿಸಿಬಿಟ್ಟರೆ ಅಲ್ಲಿಗೆ ಮುಗಿಯಿತು. ಆದರೆ ಕಾಂಗ್ರೆಸ್-ಜೆಡಿಎಸ್ ಜತೆಯಾಗಿ ಕೆಲಸ ಮಾಡುವುದು ಅಷ್ಟು ಸಲೀಸಲ್ಲ. ಈ ಮೈತ್ರಿಯ ಬಗ್ಗೆ ಅಸಮಾಧಾನ ಇರುವವರಿಗೆ ಈ ಉಪಚುನಾವಣೆಯನ್ನು ಮಧು ಬಂಗಾರಪ್ಪ ಸೋಲುವುದು ಬೇಕು. ಹಾಗಾದಲ್ಲಿ ಮುಂದೆ ಅಂಥ ಪ್ರಯತ್ನ ಮಾಡುವುದಿಲ್ಲ ಅಂತಲೂ ಇರುತ್ತದೆ. ಒಟ್ಟಾರೆ ನೋಡಿದಾಗ ಇದು ಯಡಿಯೂರಪ್ಪನವರಿಗೆ ಪರೀಕ್ಷೆ, ಜೆಡಿಎಸ್-ಕಾಂಗ್ರೆಸ್ ಗೆ ಬಲಶಾಲಿ ಹುಲಿಯೊಂದರ 'ಶಿಕಾರಿ'.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+