ಕೊಡಚಾದ್ರಿ ಚಾರಣ ಮಾಡುವವರಿಗೆ ಸಿಹಿ ಸುದ್ದಿ
ಶಿವಮೊಗ್ಗ, ಜೂನ್ 29 : ಕೊಡಚಾದ್ರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಂತಸದ ಸುದ್ದಿ. ಬೆಟ್ಟ ಹತ್ತಿ ಪ್ರಕೃತಿ ಸೌಂದರ್ಯ ಸವಿಯಲು ಇನ್ನು ಕಷ್ಟಪಡಬೇಕಿಲ್ಲ. ಕೇವಲ 15 ನಿಮಿಷದಲ್ಲಿ ಕೊಡಚಾದ್ರಿ ಬೆಟ್ಟದ ತುದಿಯಲ್ಲಿ ನೀವು ನಿಲ್ಲಬಹುದು.
Recommended Video
ಚಾರಣ ಇಷ್ಟ ಪಡುವವರನ್ನು ಕೊಡಚಾದ್ರಿ ಬೆಟ್ಟ ಕೈ ಬೀಸಿ ಕರೆಯುತ್ತದೆ. ಈ ಬಾರಿ ಲಾಕ್ ಡೌನ್ ಪರಿಣಾಮ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಹಲವು ಜನರು ಕೊಡಚಾದ್ರಿ ಬೆಟ್ಟ ಹತ್ತುವ ಅವಕಾಶ ಕಳೆದುಕೊಂಡಿದ್ದಾರೆ.
ಕೊಡಚಾದ್ರಿಯಿಂದ ಕಾಣುವ ಪ್ರಕೃತಿ ಸೌಂದರ್ಯ ಸುಂದರ. ಆದರೆ ಬೆಟ್ಟದ ಮೇಲೆರುವುದು ದೊಡ್ಡ ಸಾಹಸ. ಅನುಭವಿ ಗೈಡ್ ಅಥವ ಬೆಟ್ಟದ ಬುಡದಲ್ಲಿ ಸಿಗುವ ಜೀಪ್ ಮೊರೆ ಹೋಗಬೇಕು. ಅನುಭವ ಇಲ್ಲದೇ ವಾಹನ ಚಾಲನೆ ಮಾಡಲು ಹೋದರೆ ಪ್ರಪಾತಕ್ಕೆ ಬೀಳಬೇಕಾಗುತ್ತದೆ.

ಬೆಟ್ಟ ಏರಲು ಇರುವ ಕಡಿದಾದ ರಸ್ತೆಗಳನ್ನು ಅಗಲಗೊಳಿಸುವ ಪ್ರಸ್ತಾಪಕ್ಕೆ ಹಿಂದೆ ವಿರೋಧ ವ್ಯಕ್ತವಾಗಿತ್ತು. ಕಾಡಿನ ನಾಶ ಮತ್ತು ಪರಿಸರ ಸೌಂದರ್ಯಕ್ಕೆ ಧಕ್ಕೆ ಆಗಲಿದೆ ಎಂಬ ಕಾರಣ ಈ ಪ್ರಸ್ತಾಪ ಅಲ್ಲಿಗೆ ನಿಂತಿತ್ತು. ಬೆಟ್ಟವೇರಲು ಪ್ರವಾಸಿಗರ ತೊಂದರೆ ಹಾಗೆಯೇ ಮುಂದುವರೆದಿತ್ತು.
ಪ್ರಸ್ತುತ ಕೊಡಚಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣದ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಹಲವು ಇಲಾಖೆಗಳಲ್ಲಿ ಈ ಯೋಜನೆ ಕುರಿತು ಕೆಲಸಗಳು ನಡೆಯುತ್ತಿವೆ. ರೋಪ್ ವೇ ಯೋಜನೆ ಪೂರ್ಣಗೊಂಡರೆ ಬೆಟ್ಟದ ಬುಡದಿಂದ 15 ನಿಮಿಷದಲ್ಲಿ ಸರ್ವಜ್ಞ ಪೀಠ ತಲುಪಬಹುದಾಗಿದೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ರೋಪ್ ವೇ ನಿರ್ಮಾಣ ಯೋಜನೆಯ ಪ್ರಸ್ತಾವನೆ ರಚನೆ ಮಾಡಿದ್ದು, ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹಲವು ಇಲಾಖೆಗಳ ಜೊತೆಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಈ ಯೋಜನೆಯಿಂದ ಹೆಚ್ಚಿನ ಅರಣ್ಯ ನಾಶವಾಗುವುದಿಲ್ಲ.
ರೋಪ್ ವೇ ನಿರ್ಮಾಣವಾದರೆ ಬೆಟ್ಟ ಏರಲು ಸಹಾಯಕವಾಗುವ ಜೊತೆಗೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ. ಈ ಯೋಜನೆಯಿಂದಾಗಿ ಹೆಚ್ಚು ಜನರು ಆಗಮಿಸಿ ಬೆಟ್ಟದ ಮೇಲಿನ ಪರಿಸರ ಹಾಳಾಗಬಾರದು ಎಂದು ಸಹ ಪರಿಸರವಾದಿಗಳು ಕಾಳಜಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications