ವಿ. ಐ. ಎಸ್. ಎಲ್. ಪುನಶ್ಚೇತನ; ಹಣಕಾಸು ಸಚಿವರಿಗೆ ಮನವಿ
ಶಿವಮೊಗ್ಗ, ಮಾರ್ಚ್ 10; ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿ. ಐ. ಎಸ್. ಎಲ್. ) ಯನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿಯನ್ನು ಸಲ್ಲಿಸಲಾಗಿದೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ದೆಹಲಿಯಲ್ಲಿ ಹಣಕಾಸು ಸಚಿವರನ್ನು ಭೇಟಿ ಮಾಡಿದರು. ಜಿಲ್ಲೆಯ ವಿವಿಧ ಆದ್ಯತಾ ಕ್ಷೇತ್ರಗಳಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸುವ ಮೂಲಕ ಹೆಚ್ಚಿನ ಯುವಜನರಿಗೆ ಉದ್ಯೋಗಾವಕಾ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಸ್ತುತ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್ಎಲ್) ಸ್ಥಗಿತಗೊಂಡಿದೆ. ಕಾರ್ಖಾನೆಯು ಹೆಚ್ಚಿನ ಮೌಲ್ಯವುಳ್ಳ ಆತ್ಯಾಧುನಿಕ ತಂತ್ರಜ್ಞಾನಾಧಾರಿತ ಉಕ್ಕನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹಣಕಾಸು ಸಚಿವರಿಗೆ ವಿವರಣೆ ನೀಡಿದ್ದಾರೆ.

ಈ ಕೈಗಾರಿಕೆಯನ್ನು ಲಾಭದಾಯಕವಾಗಿ ನಡೆಸಲು ಇನ್ನಷ್ಟು ಅತ್ಯಾಧುನಿಕವಾದ ಯಂತ್ರೋಪಕರಣಗಳು ಸೇರಿದಂತೆ ವಿವಿಧ ಅವಶ್ಯಕ ಸೌಲಭ್ಯಗಳನ್ನು ಒದಗಿಸುವ ಅಗತ್ಯವಿದೆ ಎಂದು ರಾಘವೇಂದ್ರ ಅವರು ವಿವರಣೆ ಕೊಟ್ಟಿದ್ದಾರೆ.
ಮಧ್ಯಮ ಹಾಗೂ ದೀರ್ಘಕಾಲದ ಅವಧಿಯಲ್ಲಿ, ಉಕ್ಕು ಉತ್ಪಾದನೆಯ ಪ್ರಕ್ರಿಯೆಯನ್ನು ಆಧುನಿಕ ವ್ಯವಸ್ಥೆಗೆ ಪೂಕರವಾಗಿ ನವೀಕರಿಸಿ, ಸಿಂಟರ್ ಪ್ಲಾಂಟ್, ಕೋಕ್ ಓವನ್ ಹಾಗೂ ಆಧುನೀಕರಿಸಿದ ಸ್ಟೀಲ್ ಕರಗುವ ಘಟಕದ ಸೌಲಭ್ಯಗಳನ್ನು ನೀಡುವುದರ ಮೂಲಕ ಪ್ರತಿಸ್ಪರ್ಧಿಗಳಲ್ಲಿ ಲಭ್ಯವಿರುವ ಮಟ್ಟಕ್ಕೆ ಘಟಕವನ್ನು ಕೊಂಡೊಯ್ಯುವ ಅಗತ್ಯವಿದೆ ಎಂದು ಹೇಳಿದ್ದಾರೆ.
"ಖಾಸಗಿ ಬಂಡವಾಳ ಆಕರ್ಷಿಸಿ ವಿ. ಐ. ಎಸ್. ಎಲ್ ಅನ್ನು ಪುನರ್ ಆರಂಭ ಮಾಡಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿಕೊಂಡಿದ್ದು, ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ" ಎಂದು ರಾಘವೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಲ್. ಇ. ಡಿ. ಬಲ್ಬ್, ಟೆಕ್ಸ್ಟೈಲ್ ಪಾರ್ಕ್, ಆಹಾರ ಸಂಸ್ಕರಣಾ ಘಟಕಗಳು ಮತ್ತು ಇ. ಎಸ್. ಡಿ. ಎಂ. ಕೈಗಾರಿಕಾ ಕೇಂದ್ರಗಳ ಮುಖಾಂತರ ಉದ್ಯೋಗ ಅವಕಾಶಗಳನ್ನು ಸೃಷ್ಟಿ ಮಾಡಲೂ ಸಹ ಮನವಿ ಮಾಡಿಕೊಳ್ಳಲಾಗಿದೆ.












Click it and Unblock the Notifications