ಶಿವಮೊಗ್ಗದ ಸೆಂಟ್ರಲ್ ಜೈಲ್ನಲ್ಲಿ ಕೈದಿ ಮೇಲೆ ಸಹ ಕೈದಿಗಳಿಂದ ಹಲ್ಲೆ; ಹೈಡ್ರಾಮಾ
ಶಿವಮೊಗ್ಗ, ಜುಲೈ 29: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬನ ಮೇಲೆ ಸಹ ಕೈದಿಗಳೇ ಹಲ್ಲೆ ಮಾಡಿದ್ದಾರೆ. ಈ ನಡುವೆ ಹಲ್ಲೆಗೊಳಗಾದ ಕೈದಿ ಕೊಲೆಯಾಗಿದ್ದಾನೆ ಎಂದು ಸುದ್ದಿ ಹಬ್ಬಿದ್ದರಿಂದ ಜೈಲು ಗೇಟ್ ಮುಂದೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಏನಿದು ಕೇಸ್? ಹಲ್ಲೆಗೇನು ಕಾರಣ?
ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿದ್ದ ಸಲ್ಮಾನ್ ಎಂಬಾತನನ್ನು ಬುಧವಾರ ಸಂಜೆ ಜೈಲಿಗೆ ತಂದು ಬಿಡಲಾಗಿತ್ತು. ಗುರುವಾರ ಬೆಳಗ್ಗೆ ಸಲ್ಮಾನ್ ಮೇಲೆ ಸಹ ಕೈದಿಗಳಾದ ಸೂಳೆಬೈಲಿನ ಗೌಸ್, ಸಲೀಂ ಮತು ಸುಕ್ಕಾ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಜೈಲು ಸಿಬ್ಬಂದಿಯೇ ಗಲಾಟೆ ಬಿಡಿಸಿ, ಸಲ್ಮಾನ್ನನ್ನು ರಕ್ಷಿಸಿದ್ದಾರೆ.

ಕೊಲೆ ಅಂತಾ ಹಬ್ಬಿತು ಸುದ್ದಿ
ಸಲ್ಮಾನ್ನನ್ನು ಜೈಲಿನಲ್ಲಿ ಕೊಲೆ ಮಾಡಲಾಗಿದೆ ಎಂದು ಹೊರಗೆ ಸುದ್ದಿ ಹಬ್ಬಿದೆ. ಸಲ್ಮಾನ್ ಕಡೆಯವರಿಗೂ ಈ ವಿಚಾರ ತಲುಪಿದ್ದು, ಕೆಲವರು ತುಂಗಾ ನಗರ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು. ಇನ್ನು ಕೆಲವರು ಕೇಂದ್ರ ಕಾರಾಗೃಹದ ಬಳಿಗೆ ತೆರಳಿದ್ದರು. ಇದರಿಂದ ಜೈಲು ಗೇಟ್ ಮುಂದೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ತುಂಗಾ ನಗರ ಠಾಣೆ ಪೊಲೀಸರು ಜೈಲು ಗೇಟ್ ಮುಂದೆ ನಿಂತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.

ಯಾರಿದು ಸಲ್ಮಾನ್?
ಹಂದಿ ಅಣ್ಣಿ ಸಹೋದರನ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ಸಲ್ಮಾನ್ ಕೂಡ ಒಬ್ಬ. ಈತನ ವಿರುದ್ಧ ಹಾಫ್ ಮರ್ಡರ್ ಕೇಸ್ಗಳು ಕೂಡ ಇವೆ. ಗಾಂಜಾ ಮಾರಾಟ ಸಂಬಂಧವು ದೂರುಗಳಿವೆ. ಇದೆ ಕಾರಣಕ್ಕೆ ಈತ ಬುಧವಾರ ಜೈಲು ಸೇರಬೇಕಾಯಿತು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಸಲ್ಮಾನ್ ಮೇಲೆ ಹಲ್ಲೆಯಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications