ಖೇಲೋ ಇಂಡಿಯಾ; ಶಿವಮೊಗ್ಗಕ್ಕೆ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ
ಶಿವಮೊಗ್ಗ, ಡಿಸೆಂಬರ್ 16; " ಶಿವಮೊಗ್ಗ ನಗರದ ಹೊರವಲಯದ ತ್ಯಾವರೆಕೊಪ್ಪದ ಬಳಿಯಲ್ಲಿ ನೂತನ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಲಿದೆ" ಎಂದು ಬಿಜೆಪಿ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಬಳಿಯಲ್ಲಿ ನೂತನ ಕ್ರೀಡಾಂಗಣ ನಿರ್ಮಾಣವಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರ ಹಣಕಾಸಿನ ನೆರವು ನೀಡಲಿದೆ" ಎಂದು ತಿಳಿಸಿದರು.
"ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ನೂತನ ಕ್ರೀಡಾಂಗಣ ನಿರ್ಮಾಣವಾಗಲಿದೆ. ಅಥ್ಲೆಟಿಕ್ಸ್, ಫುಟ್ ಬಾಲ್, ವಾಲಿ ಬಾಲ್, ಹಾಕಿ, ಜ್ಯೂಡೋ, ಕುಸ್ತಿ, ಕಬ್ಬಡಿ ಮತ್ತು ಖೋಖೋ ಕ್ರೀಡೆಗಳಿಗೆ ಇಲ್ಲಿ ಅವಕಾಶ ನೀಡಲಾಗುತ್ತದೆ" ಎಂದರು.

"ಶಿವಮೊಗ್ಗ ನಗರದಲ್ಲಿರುವ ನೆಹರೂ ಕ್ರೀಡಾಂಗಣದಲ್ಲಿ ಹಾಕಿ ಕೋರ್ಟ್ ರಚನೆ ಕುರಿತು ಆಕ್ಷೇಪಣೆಗಳಿತ್ತು. ಆದರೆ, ಇದರ ಕುರಿತು ಪರಿಶೀಲಿಸಿ ಸಮಸ್ಯೆಗಳನ್ನು ಪರಿಹಾರ ಮಾಡಲಾಗಿದೆ. ಇಲ್ಲಿಯೇ ಜ್ಯೂನಿಯರ್ ಹಾಕಿ ಮೈದಾನ ಹಾಗೂ ತ್ಯಾವರೆಕೊಪ್ಪದಲ್ಲಿ ಸೀನಿಯರ್ ಹಾಕಿ ಮೈದಾನ ನಿರ್ಮಾಣವಾಗಲಿದೆ" ಎಂದು ರಾಘವೇಂದ್ರ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಖೇಲೋ ಇಂಡಿಯಾ ಎಂಬ ಕಾರ್ಯಕ್ರಮ ರೂಪಿಸಿದೆ. ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡುವುದು, ತರಬೇತಿ ನೀಡುವುದು ಯೋಜನೆಯ ಉದ್ದೇಶವಾಗಿದೆ.












Click it and Unblock the Notifications