ಫ್ಲಾಪ್ ಆಪರೇಷನ್ ಡಾಕ್ಟರೇಟ್ ಯಡಿಯೂರಪ್ಪಗೆ ಕೊಡಬೇಕು: ಮಧು ಬಂಗಾರಪ್ಪ
ಶಿವಮೊಗ್ಗ, ಜನವರಿ 17: ಫ್ಲಾಪ್ ಆಪರೇಷನ್ ಗೆ ಡಾಕ್ಟರೇಟ್ ಕೊಡುವುದಾದರೆ ಅದನ್ನು ಯಡಿಯೂರಪ್ಪ ಅವರಿಗೆ ಕೊಡಬೇಕು ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ವ್ಯಂಗ್ಯ ಮಾಡಿದರು.
ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಜನರಿಗೆ ಸುಲಭವಾಗಿ ಸಿಗುತ್ತಿದ್ದು ಯಡಿಯೂರಪ್ಪ ರೀತಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕುಳಿತಿಲ್ಲ. ಯಡಿಯೂರಪ್ಪ ಎಷ್ಟೇ ತಿಪ್ಪರಲಾಗ ಹಾಕಿದರೂ ಸಿಎಂ ಆಗುವುದಿಲ್ಲ. ಯಡಿಯೂರಪ್ಪ ವಿರೋಧ ಪಕ್ಷದ ಘನತೆ ಅರಿತು ಅದನ್ನು ಕಾಪಾಡಲಿ ಎಂದರು.
ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ 9 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರನಾಗಿ ಒಮ್ಮೆಯೂ ಭೇಟಿ ನೀಡಿ ಸಾಂತ್ವಾನ ಹೇಳುವ ಮನಸ್ಥಿತಿ ಇಲ್ಲ ಯಡಿಯೂರಪ್ಪಗೆ ಇಲ್ಲ. ಅವರಿಗೆ ಮಂಗನ ಕಾಯಿಲೆ ಹರಡುವ ಉಣ್ಣೆ ಕಚ್ಚಿದಾಗ ಜನರ ನಿಜವಾದ ನೋವು ಏನೆಂಬುದು ಗೊತ್ತಾಗುತ್ತದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮಂಗನ ಕಾಯಿಲೆಗೆ ಬಿಜೆಪಿ ಪ್ರತಿಕ್ರಿಯೆಯೇ ಇಲ್ಲ
ಇತ್ತೀಚೆಗೆ ಹೊಸನಗರದಲ್ಲಿ ರೈತರೊಬ್ಬರು ಹೃದಯಘಾತದಿಂದ ಮೃತಪಟ್ಟಾಗ ಬಿಜೆಪಿ ಮುಖಂಡರು ಅಲ್ಲಿಯೇ ತುತ್ತೂರಿ ಊದಿದ್ದರು. ಆದರೆ ಇದೀಗ 9 ಮಂದಿ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಬಿಜೆಪಿಯವರ ಕಣ್ಣಿಗೆ ಇವರು ಕಾಣುವುಇದಲ್ಲವೇ, ಸತ್ತವರೇನು ರೈತರಲ್ಲವೇ ಎಂದು ಪ್ರಶ್ನಿಸಿದರು.

'ಆಪರೇಷನ್ ಕಮಲ ಪ್ರಜಾಪ್ರಭುತ್ವದ ಕೊಲೆ'
ಆಪರೇಷನ್ ಕಮಲ ಒಂದು ರೀತಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ. ಯಡಿಯೂರಪ್ಪ ಹಾಗೂ ಬಿಜೆಪಿಯ ಶಾಸಕರಿಗೆ ಮಾನ, ಮರ್ಯಾದೆ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋಗಿ ರೈತರ ಸಾಲ ಮನ್ನಾದ ಬಗ್ಗೆ ಮನವಿ ಸಲ್ಲಿಸಲಿ ಎಂದು ಅವರು ಸವಾಲು ಎಸೆದರು.

ಮೋದಿ ನಂ.1 ಸುಳ್ಳುಗಾರ: ಮಧು ಬಂಗಾರಪ್ಪ
ಪ್ರಧಾನಿ ನರೇಂದ್ರ ಮೋದಿ ನಂಬರ್ ಒನ್ ಸುಳ್ಳುಗಾರ. ಬಿಜೆಪಿಯವರಿಗೆ ಬುದ್ಧಿ ಕಲಿಸಲು ಆರ್ಎಸ್ಎಸ್ ನವರು ಇನ್ನಾದರೂ ಲಾಠಿ ಬಳಸಲಿ. ಜನರೂ ತರಾಟೆಗೆ ತೆಗೆದುಕೊಳ್ಳಲಿ ಎಂದು ಮಧು ಬಂಗಾರಪ್ಪ ಒತ್ತಾಯಿಸಿದರು.

'ಯಾರೇ ಅಭ್ಯರ್ಥಿ ಆದರೂ ಪ್ರಚಾರ'
ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷದ ವರಿಷ್ಠರು ಸೀಟು ಹಂಚಿಕೆ ಮತ್ತು ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಿದ್ದಾರೆ. ಎಂಪಿ ಸ್ಥಾನಕ್ಕೆ ಕಾಂಗ್ರೆಸ್ ನವರು ಅಪೇಕ್ಷೆಪಡುವುದು ತಪ್ಪಲ್ಲ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಯೇ ಆದರೂ, ನಾನು ಬಂದು ಪ್ರಚಾರ ಮಾಡುತ್ತೇನೆ ಎಂದರು.

ಉಪಚುನಾವಣೆಯಲ್ಲಿ ಉತ್ತಮ ಫಲಿತಾಂಶ
ಎಷ್ಟೇ ಆದರೂ ಮೂರನೇ ಸ್ಥಾನದಲ್ಲಿದ್ದ ನಮ್ಮ ಪಕ್ಷಕ್ಕೆ ಉತ್ತಮ ಫಲಿತಾಂಶ ಮತ್ತು ಬೆಂಬಲ ನೀಡಿದ್ದಾರೆ. ಜನವರಿ 26ರ ನಂತರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಒಟ್ಟಿಗೆ ಪ್ರಚಾರ ಕೈಗೊಳ್ಳಲಾಗುವುದು ಎಂದು ಸೊರಬ ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ.












Click it and Unblock the Notifications