ಶಿವಮೊಗ್ಗ ಎಸ್ಪಿ ಕಚೇರಿಯಿಂದ ಆನೆ ದಂತ ನಾಪತ್ತೆ!
ಶಿವಮೊಗ್ಗ, ನವೆಂಬರ್ 29 : ಶಿವಮೊಗ್ಗದ ಎಸ್ಪಿ ಕಚೇರಿಯಿಂದ ಆನೆದಂತವೊಂದು ಕಳುವಾಗಿದೆ ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದ ಬಗ್ಗೆ ಇಲಾಖಾ ಮಟ್ಟದಲ್ಲಿ ತನಿಖೆ ಆರಂಭವಾಗಲಿದೆ.
2011ರ ಫೆಬ್ರವರಿ ತನಕ ಆನೆ ದಂತ ಎಸ್ಪಿ ಕಚೇರಿಯಲ್ಲಿತ್ತು. ಈಗ ಅದು ಕಳುವಾಗಿರುವ ಸುದ್ದಿ ಸಂಚಲನಕ್ಕೆ ಕಾರಣವಾಗಿದೆ. 2011ರ ನಂತರ ನಾಲ್ವರು ಎಸ್ಪಿಗಳು ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ದಂತದ ವಿಚಾರ ಯಾರ ಗಮನಕ್ಕೂ ಬಾರಲಿಲ್ಲವೇ?.

ಕೆಲವು ದಿನಗಳ ಹಿಂದೆ ಎಸ್ಪಿ ಕಚೇರಿ ಮುಂಭಾಗದಲ್ಲಿದ್ದ ಶಿಲಾ ಶಾಸನಗಳನ್ನು ಕುವೆಂಪು ವಿವಿ ಪ್ರಾಕ್ತನ ಶಾಸ್ತ್ರ ವಿಭಾಗಕ್ಕೆ ಕಳುಹಿಸಲು ಪಟ್ಟಿ ಮಾಡಲಾಗುತ್ತಿತ್ತು. ಆಗ ಸಿಬ್ಬಂದಿಯೊಬ್ಬರು ಆನೆದಂತವನ್ನು ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದರು.
ಆಗ ಎಸ್ಪಿ ಕಚೇರಿಯಲ್ಲಿ ಆನೆದಂತವಿತ್ತು ಎಂಬುದು ಹಲವರ ಅರಿವಿಗೆ ಬಂದಿದೆ. ಆನೆ ದಂತ ಕಳುವಾಗಿದೆ ಎಂಬ ವಿಷಯ ಅರಿತ ಎಸ್ಪಿ ಅಭಿನವ್ ಖರೆ ನವೀಕರಣ ಕಾರ್ಯ ನಡೆಯುತ್ತಿರುವ ಗೋದಾಮು ಸೇರಿ ಎಲ್ಲಾ ಕಡೆ ಹುಡುಕಿದ್ದಾರೆ. ಆದರೆ, ದಂತ ಮಾತ್ರ ಪತ್ತೆಯಾಗಿಲ್ಲ.
ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಎಸ್ಪಿ ಅಭಿನವ್ ಖರೆ ಅವರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಮತ್ತು ಇಲಾಖಾ ತನಿಖೆಗೆ ಆದೇಶ ನೀಡಿದ್ದಾರೆ. ತನಿಖೆ ಆರಂಭವಾದರೆ ಎಸ್ಪಿ ಕಚೇರಿಯಲ್ಲಿನ ಎಲ್ಲಾ ಸಿಬ್ಬಂದಿಗಳ ವಿಚಾರಣೆ ನಡೆಯುವುದಂತೂ ಖಚಿತ.












Click it and Unblock the Notifications