ಚಿತ್ರಗಳು : ಶಿವಮೊಗ್ಗದಲ್ಲಿ ಕುಮಾರಪರ್ವ ಯಾತ್ರೆ, ಜನಸಾಗರ
Recommended Video

ಶಿವಮೊಗ್ಗ, ನವೆಂಬರ್ 9 : 'ನೀವು ನಮಗೆ ಬೆಂಬಲ ಕೊಡಿ ಸ್ವಂತ ಬಲದಿಂದ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ 24ಗಂಟೆಯಲ್ಲಿ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುತ್ತೇನೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
'ಕುಮಾರಪರ್ವ' ಯಾತ್ರೆ ಮೂಲಕ ರಾಜ್ಯ ಪ್ರವಾಸ ಮಾಡುತ್ತಿರುವ ಎಚ್.ಡಿ.ಕುಮಾರಸ್ವಾಮಿ ಶಿವಮೊಗ್ಗದ ಎನ್ಇಎಸ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಬುಧವಾರ ಸಂಜೆ ಮಾತನಾಡಿದರು.
ಸೊರಬ ಶಾಸಕ ಮಧು ಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ, ಭದ್ರಾವತಿ ಶಾಸಕ ಅಪ್ಪಾಜಿ ಗೌಡ ನೇತೃತ್ವದಲ್ಲಿ ಕುಬಟೂರಿನಿಂದ ಶಿವಮೊಗ್ಗದ ತನಕ ನಡೆದ ಬೃಹತ್ ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು.
ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಶಿವಮೊಗ್ಗ ತಾಲೂಕಿನ ಬುಳ್ಳಾಪುರ ಗ್ರಾಮದ ರೈತರ ಜೊತೆ ಸಂವಾದ ನಡೆಸಿದರು. ರೈತ ಕರಿಬಸಪ್ಪನವರ ಮನೆಯಲ್ಲಿ ಊಟ ಮುಗಿಸಿ, ವಾಸ್ತವ್ಯ ಹೂಡಿದರು.
ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಮಧುಬಂಗಾರಪ್ಪ, ಶಾರದಾ ಪೂರ್ಯನಾಯ್ಕ, ಅಪ್ಪಾಜಿ ಗೌಡ, ಕೋನ ರೆಡ್ಡಿ, ಪಾಲಿಕೆ ಮೇಯರ್ ಏಳುಮಲೈ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ ಸಂಪುಟ : ಎಚ್.ಡಿ.ಕುಮಾರಸ್ವಾಮಿ ರಾಜ್ಯ ಪ್ರವಾಸ

ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ
'ಇಲ್ಲಿನ ವಿಐಎಸ್ಎಲ್ ಕಾರ್ಮಿಕರು ಇನ್ನು ಆರು ತಿಂಗಳು ಸಹಿಸಿಕೊಳ್ಳಿ. ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾರ್ಖಾನೆಯ ಎಲ್ಲಾ ಸಮಸ್ಯೆ ಬಗೆಹರಿಸುತ್ತೇನೆ' ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಕಣ್ಣೀರು ಒರೆಸುವ ಶಕ್ತಿ ಇದೆ
'ನನಗೆ ಹಣ ಮಾಡುವ ಹುಚ್ಚಿಲ್ಲ. ಆದರೆ, ರಾಜ್ಯದ ಜನರ ಕಣ್ಣೀರು ಒರೆಸುವ ಶಕ್ತಿ ಇದೆ. ಈ ಶಕ್ತಿಗೆ ನಿಮ್ಮ ಸಹಕಾರವಿದ್ದಾಗ ಮಾತ್ರ ನನಗೆ ಬಲ ತುಂಬಲು ಸಾಧ್ಯ. ಶಿವಮೊಗ್ಗ ಜಿಲ್ಲೆಯಲ್ಲಿ ಏತ ನೀರಾವರಿ ಸಮಸ್ಯೆ ಇದೆ. ಎರಡು ಲಕ್ಷದ ಬಜೆಟ್ ಮಂಡಿಸುವ ಸರ್ಕಾರ ಒಂದು ಸಾವಿರ ಕೋಟಿಯನ್ನು ಯೋಜನೆಗೆ ಏಕೆ ಕೊಡುವುದಿಲ್ಲ?' ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಉತ್ತರಿಸಬೇಕಿದೆ
'ರಾಷ್ಟ್ರೀಯ ಪಕ್ಷಗಳ ನಿಲುವನ್ನು ಜನರು ಅರ್ಥಮಾಡಿಕೊಂಡು ಮುಂದಿನ ಚುನಾವಣೆಯಲ್ಲಿ ಉತ್ತರಿಸಬೇಕಿದೆ. ಪ್ರಾದೇಶಿಕ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಬಲತುಂಬಿ. ರೈತ ಪರವಾದ ಸರ್ಕಾರವನ್ನು ನಾವು ಮಾಡುತ್ತೇವೆ' ಎಂದರು.

ಎಷ್ಟು ಬಾರಿ ಮಾತು ಬದಲಾಯಿಸುತ್ತೀರಿ?
'ಯಡ್ಡಿಯೂರಪ್ಪ ಅವರು ಕೆಜೆಪಿ ಪಕ್ಷ ಉದ್ಘಾಟಿಸಿದಾಗ ಬಿಜೆಪಿಯಲ್ಲಿದ್ದಾಗ ನಮ್ಮ ಪಕ್ಷದ ಜನರೇ ಮುಖ್ಯ ಮಂತ್ರಿಯಾಗಲು ತಡೆದಿದ್ದರು ಎಂದಿದ್ದಾರೆ. ತುಮಕೂರಿನಲ್ಲಿ ನಡೆದ ಯಾತ್ರೆಯಲ್ಲಿ ಯಡ್ಡಿಯೂರಪ್ಪನವರು ಅಪ್ಪ-ಮಕ್ಕಳು ತಡೆದರು ಅಂತ ಹೇಳಿದ್ದಾರೆ. ಹಾಗಾದರೆ ಯಾವುದು ಸತ್ಯ? ಎಷ್ಟುಬಾರಿ ಮಾತು ಬದಲಾಯಿಸುತ್ತೀರಿ?' ಎಂದು ಪ್ರಶ್ನಿಸಿದರು.

ಸಾಲ ಮನ್ನಾ ಏಕೆ ಮಾಡಿಲ್ಲ
'ನಾನು ಮುಖ್ಯಮಂತ್ರಿಯಾದಾಗ ನಲವತ್ತು ಸಾವಿರ ಕೋಟಿ ಬಜೆಟ್ ಇತ್ತು. ಇಪ್ಪತ್ತು ದಿನಗಳಲ್ಲಿ ಎರಡುವರೆ ಸಾವಿರ ಕೋಟಿ ರೂ. ರೈತರ ಸಾಲಮನ್ನ ಮಾಡಿದ್ದೇವೆ. ಆದರೆ, ಸಿದ್ದರಾಮಯ್ಯ ನವರ ಸರ್ಕಾರ ಇನ್ನೂ ಸಾಲ ಮನ್ನಾ ಮಾಡಿಲ್ಲ' ಎಂದು ವಾಗ್ದಾಳಿ ನಡೆಸಿದರು.

ಸಾಲ ಮನ್ನಾ ಅಸಾಧ್ಯವೆಂದಿದ್ದಾರೆ
'ಇದುವರೆಗೆ ಸಿದ್ದರಾಮಯ್ಯ ಸರ್ಕಾರ ಸಾಲ ಮಾಡಿದ್ದೇ ಸಾಧನೆ ಎಂದ ಕುಮಾರಸ್ವಾಮಿ ಪ್ರತಿ ಮನುಷ್ಯನ ತಲೆಮೇಲೆ 50 ಸಾವಿರ ರೂ ಸಾಲ ಮಾಡಿದಂತೆ ಆಗಿದೆ. ಪ್ರಧಾನಿ ಮೋದಿ ಅವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದರು. ಆದರೆ, ಈಗ ಸಾಲ ಮನ್ನಾ ಅಸಾಧ್ಯವೆಂದಿದ್ದಾರೆ. ಇದೆನಾ ನಿಮ್ಮ ನಿಲವು?' ಎಂದರು.

ಸರ್ಕಾರ ರೈತನಿಗೆ ಬೆಂಬಲವಾಗಿ ನಿಲ್ಲಬೇಕು
'ಕೃಷಿ ನೀತಿ ಬದಲಾಯಿಸಿದಾಗ ಮಾತ್ರ ರೈತನ ಬದುಕು ಹಸನಾಗಿಸಲು ಸಾಧ್ಯ. ಅದಕ್ಕೆ ಸರ್ಕಾರ ರೈತನಿಗೆ ಬೆಂಬಲವಾಗಿ ನಿಲ್ಲಬೇಕು' ಎಂದು ಹೇಳಿದರು.

ವೃದ್ಧರು, ಅಂಗವಿಕಲರಿಗೆ ನೆರವು
'ಜೆಡಿಎಸ್ ಅಧಿಕಾರಕ್ಕೆ ಬಂದರೆ ವೃದ್ಧರಿಗೆ ಪ್ರತಿ ತಿಂಗಳಿಗೆ 5 ಸಾವಿರ ರೂ.ನೀಡಲಿದೆ. ಪೌಷ್ಠಿಕ ಆಹಾರಕ್ಕಾಗಿ ಗರ್ಭಿಣಿಯರಿಗೆ ಪ್ರತಿ ತಿಂಗಳಿಗೆ 6 ಸಾವಿರ ರೂ ಮಾಶಾಸನ, ಅಂಗವಿಕಲ ಹಾಗೂ ವಿಧವೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡಲು ಸಿದ್ಧರಿದ್ದೇವೆ' ಎಂದು ಕುಮಾರಸ್ವಾಮಿ ಹೇಳಿದರು.

ಬುಳ್ಳಾಪುರ ಗ್ರಾಮದಲ್ಲಿ ವಾಸ್ತವ್ಯ
ಬುಧವಾರ ರಾತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಿವಮೊಗ್ಗ ತಾಲೂಕಿನ ಬುಳ್ಳಾಪುರ ಗ್ರಾಮದ ರೈತ ಕರಿಬಸಪ್ಪನವರ ಮನೆಯಲ್ಲಿ ವಾಸ್ತವ್ಯ ಹೂಡಿದರು. ಕುಮಾರಸ್ವಾಮಿ ಅವರು ಊಟಕ್ಕಾಗಿ ಅಕ್ಕಿ ಮತ್ತು ರಾಗಿ ರೊಟ್ಟಿ, ಸೊಪ್ಪು ಪಲ್ಯ, ಕೊಸಂಬರಿ, ಒಣಮಣಸಿನ ಕಾಯಿ ಚಟ್ನಿ. ಪುಳಿಯೊಗರೆ, ಅನ್ನ-ಸಾಂಬಾರು ಸೇವಿಸಿದರು.












Click it and Unblock the Notifications