ಮೋದಿ ಪ್ರಧಾನಿಯಾದರೆ ಸರ್ವ ಸಮಸ್ಯೆಗೆ ಪರಿಹಾರ
ಶಿವಮೊಗ್ಗ/ತರೀಕೆರೆ, ಮಾ.17: ಆರ್ಥಿಕವಾಗಿ, ಸಾಮಾಜಿಕವಾಗಿ ದೇಶವನ್ನು ದುಸ್ಥಿತಿಗೆ ದೂಡಿರುವ ಯುಪಿಎ ಸರ್ಕಾರದಿಂದ ಜನತೆಗೆ ಮುಕ್ತಿ ಸಿಗಬೇಕಿದೆ. ಸಮರ್ಥ ನಾಯಕತ್ವದ ಗುಣಗಳುಳ್ಳ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವುದರಿಂದ ಸರ್ವ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ತರೀಕೆರೆ ಎಂ.ಜಿ.ಹಾಲ್ ನಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಯಡಿಯೂರಪ್ಪ ಮಾತನಾಡಿದರು. ನಮ್ಮ ದೇಶಕ್ಕೆ ಸಮರ್ಥ ನಾಯಕತ್ವದ ಅಗತ್ಯವಿದೆ. ದೇಶದಲ್ಲಿ ಭ್ರಷ್ಟಾಚಾರ, ಆರ್ಥಿಕ ದುಸ್ಥಿತಿ, ಅತ್ಯಾಚಾರಗಳಂತಹ ಅನೇಕ ಚಟುವಟಿಕೆಗಳು ತಾಂಡವಾಡುತ್ತಿದೆ. ಈ ದೇಶಕ್ಕೆ ಉತ್ತಮ ಆಡಳಿತ ನೀಡಲು ಮೋದಿ ಸಮರ್ಥರಿದ್ದಾರೆ. ಈ ಕಾರಣಕ್ಕಾಗಿಯೇ ಮೋದಿ ಅವರ ಪರ ಕೋಟ್ಯಂತರ ಜನತೆ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬದುಕಿರುವ ಭಾವನೆಗಳಿಲ್ಲ. ರಾಜ್ಯದ ಸ್ಥಿತಿಯನ್ನು ಅಧೋಗತಿಗೆ ತಂದಿರುವ ಕಾಂಗ್ರೆಸ್ ರಾಜ್ಯದ ಜನತೆಗೆ ಮಾತ್ರವಲ್ಲ ದೇಶದ ಅಭಿವೃದ್ಧಿಗೂ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ, ದೇಶ ಸಂಧಿಗ್ಧ ಪರಿಸ್ಥಿತಿಯಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷಗಳು ಕಳೆದರೂ ದೇಶದ ಗಡಿ ಮತ್ತು ರಾಜ್ಯಗಳ ಭದ್ರತೆ ಸುರಕ್ಷಿತವಾಗಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸಾಧನೆ ನೋವು ತಂದಿದ್ದು, ದೇಶದ ಬಹುಭಾಗಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಚೀನಾ ಮತ್ತು ಬಾಂಗ್ಲಾ ನುಸುಳುಕೋರರು ದೇಶದೊಳಗೆ ನುಸುಳುತ್ತಿದ್ದರೂ ಸರಕಾರ ಕಣ್ಣು ಮುಚ್ಚಿ ಕುಳಿತಿದೆ. ದೇಶ ಅಪಾಯದಲ್ಲಿದ್ದು, ಬಾಂಬ್ ಸ್ಫೋಟದ ಭಯದಲ್ಲಿ ನಾವಿದ್ದೇವೆ. ದೇಶದ ಭದ್ರತೆ ಅಭದ್ರಗೊಳಿಸಲು ಅನ್ಯ ದೇಶದವರು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ. ಇಂತಹ ಸಂದಗ್ಧ ಪರಿಸ್ಥಿಯಿಂದ ದೇಶವನ್ನು ರಕ್ಷಿಸಲು ಮೋದಿಯವರ ನಾಯಕತ್ವ ಅಗತ್ಯವಿದೆ. ಗುಜರಾತ್ ಮಾದರಿಯಲ್ಲಿ ಈ ದೇಶ ಅಭಿವೃದ್ಧಿಯಾಗಬೇಕಾದರೆ ಈ ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿ ಅನಿವಾರ್ಯ ಎಂದರು. ಇನ್ನಷ್ಟು ವಿವರ ಮುಂದೆ ಓದಿ...
ಶೋಭಾ ಪರ ಶಾಸಕ ಜೀವರಾಜ್ ಮತಯಾಚನೆ
ಕಾಂಗ್ರೆಸ್ ಮುಳುಗುವ ಹಡಗು. ಅದರಲ್ಲಿ ಯಾರೂ ಉಳಿಯಲು ಸಾಧ್ಯವಿಲ್ಲ. ಕಾಂಗ್ರೆಸ್ ಈ ದೇಶ ಆಳಬಾರದು ಎಂಬುದನ್ನು ಜನತೆ ಈ ಚುನಾವಣೆಯ ಮೂಲಕ ಉತ್ತರ ನೀಡಲಿದ್ದಾರೆ. ತರೀಕೆರೆ ಕ್ಷೇತ್ರದ ಕಾರ್ಯಕರ್ತರ ಸಭೆ ನಮ್ಮಲ್ಲಿ ಗೆಲುವಿನ ನಿರೀಕ್ಷೆ ಮೂಡಿಸಿದೆ. ಆ ಗೆಲುವಿನ ಮೂಲಕ ಜಿಲ್ಲೆಯ ಜೀವಂತ ಸಮಸ್ಯೆಗಳಿಗೆ ದಿಟ್ಟ ಉತ್ತರ ನೀಡುವುದಾಗಿ ಮಾಜಿ ಸಚಿವ ಶಾಸಕ ಜೀವರಾಜ್ ಹೇಳಿದರು. ಶೋಭಾ ಅವರ ಪರ ಮತಯಾಚಿಸಿದರು.
ತರೀಕೆರೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ನಾಯಕರು
ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಶಾಸಕರಾದ ಡಿ.ಎಸ್.ಸುರೇಶ್, ಟಿ.ಎಚ್.ಶಿವಶಂಕರಪ್ಪ, ಜಿ.ಪಂ.ಸದಸ್ಯರುಗಳಾದ ಕೆ.ಆರ್.ಆನಂದಪ್ಪ, ಎಸ್.ಬಿ.ಆನಂದಪ್ಪ, ಎಂ.ಕೃಷ್ಣಮೂರ್ತಿ, ಕಲ್ಮರುಡಪ್ಪ ಸುಧಾ ಅಮೃತೇಶ್, ತಾ.ಪಂ. ಸದಸ್ಯರಾದ ಗೌರಮ್ಮನಾಗರಾಜ್, ದೀಪಾ ಉಮೇಶ್, ವಿಜಯಾನಾಯ್ಕ, ಬಿಜೆಪಿ ಮುಖಂಡರುಗಳಾದ ಆರ್.ದೇವಾನಂದ್, ಎನ್.ಮಂಜುನಾಥ್, ಎ.ಆರ್.ರಾಜಶೇಖರ್, ಚಂದ್ರಕಲಾ, ಅವಿನಾಶ್, ಕರುಕುಚ್ಚಿ ಮೋಹನ್, ಎಂ.ಆರ್.ಲೋಹಿತ್, ಭೋಜರಾಜ್, ಎಪಿಎಂಸಿ ಅಧ್ಯಕ್ಷ ಶಿವಕುಮಾರ್, ಮಂಜುನಾಥ್ ಮುಂತಾದವರಿದ್ದರು.
ಮಾರ್ನಿಂಗ್ ವಾಕ್ ನಲ್ಲೂ ಮತ ಯಾಚನೆ
ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾನುವಾರ ಬೆಳಗ್ಗೆ ಶಿವಮೊಗ್ಗದ ಕೊಳಚೆ ಕಾಲೋನಿಗಳಾದ ವಿನಾಯಕ ನಗರ, ಹನುಮಂತ ನಗರಗಳಲ್ಲಿ ಮಾರ್ನಿಂಗ್ ವಾಕ್ ಗೆ ತೆರಳಿ ಬೆಳ್ಳಂಬೆಳ್ಳಗೆ ಮತಯಾಚಿಸಿದರು.ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಬಿಜೆಪಿಗೇ ಮತ ಕೊಡಿ ಎಂದು ಕೋರಿದರು.
ರಾಜ್ಯದಲ್ಲಿ ಬಿಜೆಪಿಗೆ 20 ಕ್ಷೇತ್ರಗಳಲ್ಲಿ ಗೆಲುವು
ರಾಜ್ಯದಲ್ಲಿ ಬಿಜೆಪಿಗೆ 20 ಕ್ಷೇತ್ರಗಳಲ್ಲಿ ಗೆಲುವು ಖಚಿತ. ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಯೂ ಸಹ ಇದನ್ನೆ ಹೇಳಿದೆ. ಅಲ್ಲದೇ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ ಎಂದರು.
ಬಂಗಾರಪ್ಪ ಪುತ್ರಿ ಗೀತಾ ಸ್ಪರ್ಧೆ ಬಗ್ಗೆ
ತಮ್ಮ ಎದುರಾಳಿಯಾಗಿ ಬೇರೆ ಪಕ್ಷದಿಂದ ಯಾರು ನಿಲ್ಲುತ್ತಿದ್ದಾರೆ ಎಂದು ನಾನು ಚಿಂತಿಸುವುದಿಲ್ಲ. ಯಾರೇ ಎದುರಾಳಿ ಆದರೂ ತಮಗೆ ಭಯವಿಲ್ಲ. ಜಿಲ್ಲೆಯಾದ್ಯಂತ ನಡೆದಿರುವ ಅಭಿವೃದ್ಧಿ ಕಾರ್ಯ ಗಮನಿಸಿ ಜನತೆ ತಮ್ಮನ್ನು ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಯಡಿಯೂರಪ್ಪ ಜತೆಗಿದ್ದವರು
ಪ್ರಚಾರದಲ್ಲಿ ಬಿಜೆಪಿ ಮುಖಂಡರಾದ ಡಿ.ಎಸ್. ಅರುಣ್, ಮಹಾನಗರ ಪಾಲಿಕೆ ಸದಸ್ಯ ಸತೀಶ್, ನಗರಸಭೆ ಮಾಜಿ ಸದಸ್ಯ ಎಂ. ಶಂಕರ್, ಎಸ್.ಎಸ್. ಜ್ಯೋತಿಪ್ರಕಾಶ್, ಬಳ್ಳೇಕೆರೆ ಸಂತೋಷ್, ದಿವಾಕರ್, ಉಮೇಶ್, ರಾಜೇಶ್ ಕಾಮತ್, ಪುರುಷೋತ್ತಮ್, ಎನ್.ಜೆ. ರಾಜಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಮತಬ್ಯಾಂಕ್ ಪ್ರಕಾರ ಬಿಎಸ್ ವೈಗೆ ಸ್ವಲ್ಪ ಕಷ್ಟ
ಯಡಿಯೂರಪ್ಪ ವಿರುದ್ಧ ಸ್ಪರ್ಧೆಗೆ ನಿಂತಿರುವ ಗೀತಾ ಶಿವರಾಜ್ ಕುಮಾರ್ ಅವರಿಗೆ ಇದು ಮೊದಲ ಚುನಾವಣೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹಿರಿಯ ಪುತ್ರಿ, ವರನಟ ಡಾ. ರಾಜ್ ಕುಮಾರ್ ಪುತ್ರ ಶಿವರಾಜ್ ಕುಮಾರ್ ಪತ್ನಿ ಎನ್ನುವುದು ಗೀತಾಗೆ ವರದಾನವಾಗಲಿದೆ. ಶಿವಮೊಗ್ಗದಲ್ಲಿ ಬಹುಸಂಖ್ಯಾತ ಸಂಖ್ಯೆಯಲ್ಲಿರುವ ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಬಂಗಾರಪ್ಪ ಅವರ ಅಭಿಮಾನಿಗಳು ಬಹುಸಂಖ್ಯೆಯಲ್ಲಿದ್ದಾರೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಯಡಿಯೂರಪ್ಪ ಅವರಿಗೆ ಈ ಚುನಾವಣೆ ಅಷ್ಟು ಸುಲಭವಾಗಿಲ್ಲ. ಆದರೆ, ಜಿಲ್ಲೆಯ ಮತ್ತೊಬ್ಬ ಪ್ರಮುಖ ನಾಯಕ ಕೆಎಸ್ ಈಶ್ವರಪ್ಪ ಅವರು ಈ ಬಾರಿ ಯಡಿಯೂರಪ್ಪ ಪರ ಪ್ರಚಾರಕ್ಕೆ ಇಳಿಯುವುದರಿಂದ ಯಡಿಯೂರಪ್ಪಗೆ ಹೆಚ್ಚಿನ ಬಲ ಬಂದಿದೆ.