ಶಿವಮೊಗ್ಗ ಅರಣ್ಯಾಧಿಕಾರಿಗಳಿಂದ ಆನೆ ದಂತ, ಚಿರತೆ ಉಗುರು ವಶ
ಶಿವಮೊಗ್ಗ, ಜನವರಿ 25: ಅರಣ್ಯ ಇಲಾಖೆ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ಮಾಡಿ ಒಂದು ಆನೆ ದಂತ ಹಾಗೂ ಚಿರತೆ ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ.
ಅರಣ್ಯ ಸಂಚಾರಿ ದಳದ ಡಿಎಫ್ಒ ನಾಗರಾಜ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಚಿಕ್ಕಮಗಳೂರು ತಾಲ್ಲೂಕಿನ ನಾಲೂರು ಗ್ರಾಮದಲ್ಲಿ ಒಂದು ಆನೆ ದಂತವನ್ನು ವಶಪಡಿಸಿಕೊಳ್ಳಲಾಗಿದೆ.
ತೀರ್ಥಹಳ್ಳಿಯಲ್ಲಿ ಆನೆ ದಂತ ಕಳ್ಳತನ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ತೀರ್ಥಹಳ್ಳಿ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ.

ಅಚ್ಚರಿ ಎಂದರೆ ಈ ದಂತಗಳು ತೀರ್ಥಹಳ್ಳಿಯ ಪುರಾತನ ಮಠಗಳಲ್ಲಿ ಒಂದಾದ ಭೀಮನಕಟ್ಟೆಯು ಶ್ರೀ ಭೀಮಸೇತು ಮುನಿವೃಂದ ಮಠಕ್ಕೆ ಸೇರಿದ್ದು ಎನ್ನಲಾಗಿದೆ.
ಅಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ರಾಜ ಗೋಪಾಲ ಬಲ್ಲಾಳ ಎಂಬಾತ ನಾರಾಯಣ ಎಂಬುವವರ ಜತೆ ಸೇರಿ ಈ ದಂತವನ್ನು ಮಾರಾಟ ಮಾಡಲು ಆರಗಕ್ಕೆ ತಂದಿಟ್ಟಿದ್ದರು. ಈ ವೇಳೆ 4 ಲಕ್ಷಕ್ಕೆ ದಂತ ಮಾರಾಟ ಮಾಡಲು ಯತ್ನಿಸಿದ್ದು, 2 ಲಕ್ಷಕ್ಕೆ ವ್ಯವಹಾರ ಕುದುರಿತ್ತು ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಭೀಮನಕಟ್ಟೆಯಲ್ಲಿ ಹಿರಿಯ ಶ್ರೀಗಳು ನಿಧನರಾದ ಬಳಿಕ ಕುಂದಾಪುರ ಮೂಲದ ರಘುವರೇಂದ್ರ ಕಿರಿಯ ಶ್ರೀಗಳು ಮಠದ ಅಧಿಕಾರ ವಹಿಸಿಕೊಂಡು ಮಠದ ಅಭಿವೃದ್ಧಿಗೆ ಮುಂದಾಗಿದ್ದರು. ಆದರೆ ಅಲ್ಲೇ ಕೆಲಸ ಮಾಡಿಕೊಂಡಿದ್ದ ಬಲ್ಲಾಳ ಅಂಡ್ ಗ್ಯಾಂಗ್ ದಂತ ಸೇರಿದಂತೆ ಮಠದ ಅನೇಕ ವಸ್ತುಗಳನ್ನು ಕದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆದರೆ ತನಿಖೆಯಿಂದಷ್ಟೆ ಸತ್ಯ ಹೊರಬರಬೇಕಿದೆ.ಭೀಮನಕಟ್ಟೆ ಮಠದಲ್ಲಿ ಸುಮಾರು 200 ವರ್ಷದ ಹಿಂದೆ ಶ್ರೀಪತಿ ಎಂಬ ಪಟ್ಟದಾನೆ ಇತ್ತು. ಈ ಆನೆ ಮೃತಪಟ್ಟ ನಂತರ 2 ದಂತಗಳು ಮಠದಲ್ಲಿದ್ದವು. ಜತೆಗೆ ಮಠದಲ್ಲಿ ಇತರೆ ಬೆಲೆ ಬಾಳುವ ವಸ್ತುಗಳೂ ಇದ್ದವು.
ಆದರೆ ಕೆಲವರು ಇದನ್ನು ಕದ್ದು ಸಾಗಣೆ ಮಾಡಿದ್ದರು. ಇದೀಗ ಈ ಪ್ರಕರಣ ಬಯಲಾಗಿದೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ಅದೇ ರೀತಿ ಸಾಗರ ತಾಲೂಕಿನ ತುಮುರಿ ಗ್ರಾಮದಲ್ಲಿ ಹದಿಮೂರು ಚಿರತೆ ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ. ಚಿರತೆ ಉಗುರು ಸಂಗ್ರಹಿಸಿದ್ದ ದೇವರಾಜ, ಉದಯಕುಮಾರ್, ಸುಧಾಕರ ಮತ್ತು ನವೀನ ಎಂಬುವವರನ್ನು ಬಂಧಿಸಲಾಗಿದೆ.

ಡಿಸಿಎಫ್ ನಾಗರಾಜ್, ಎಸಿಎಫ್ ಬಾಲಚಂದ್ರ, ಅರಣ್ಯ ಅಧಿಕಾರಿಗಳಾದ ಸಂಜಯ, ರೇವಣ್ಣ ಸಿದ್ದಯ್ಯ, ಹಿರೇಮಠ ಹನುಮಂತರಾಯ, ಮಹದೇವ, ಎಲ್ಲಪ್ಪ ಅವರು ದಾಳಿ ಮಾಡಿದ್ದಾರೆ. ಎಲ್ಲ ಆರೋಪಿಗಳನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.












Click it and Unblock the Notifications