ಶಿವಮೊಗ್ಗ : ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಹೊಣೆ ಡಿಕೆ ಶಿವಕುಮಾರ್ ಹೆಗಲಿಗೆ!
Recommended Video

ಶಿವಮೊಗ್ಗ, ಮಾರ್ಚ್ 15 : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಸಾಧಿಸಬೇಕು ಎಂದು ಕಾಂಗ್ರೆಸ್-ಜೆಡಿಎಸ್ ಪಣ ತೊಟ್ಟಿವೆ. ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಕಾಂಗ್ರೆಸ್ನ ಚುನಾವಣಾ ಚಾಣಾಕ್ಯ ಡಿ.ಕೆ.ಶಿವಕುಮಾರ್ ಅವರ ಹೆಗಲಿಗೆ ವಹಿಸಲಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಾಲಿ ಸಂಸದರು ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ. ಈ ಬಾರಿಯ ಚುನಾವಣೆಯಲ್ಲಿಯೂ ಅವರೇ ಅಭ್ಯರ್ಥಿ. ಕಾಂಗ್ರೆಸ್ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು, ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿಯಲಿದ್ದಾರೆ.
2018ರ ನವೆಂಬರ್ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಮತ್ತು ಬಿ.ವೈ.ರಾಘವೇಂದ್ರ ಅವರು ಮುಖಾಮುಖಿಯಾಗಿದ್ದರು. ಬಿ.ವೈ.ರಾಘವೇಂದ್ರ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದ ಮಧು ಬಂಗಾರಪ್ಪ ಅವರು ಕೇವಲ 52,148 ಮತಗಳ ಅಂತರದಿಂದ ಸೋಲು ಕಂಡಿದ್ದರು.
ಈ ಬಾರಿ ಬಿ.ವೈ.ರಾಘವೇಂದ್ರ ಅವರನ್ನು ಕಟ್ಟಿ ಹಾಕುವ ಮೂಲಕ ಯಡಿಯೂರಪ್ಪ ಅವರಿಗೆ ಮುಖಭಂಗ ಉಂಟು ಮಾಡಬೇಕು ಎಂದು ಕಾಂಗ್ರೆಸ್-ಜೆಡಿಎಸ್ ತಂತ್ರ ರೂಪಿಸಿವೆ. ಅದಕ್ಕಾಗಿಯೇ ಡಿ.ಕೆ.ಶಿವಕುಮಾರ್ ಅವರಿಗೆ ಉಸ್ತುವಾರಿ ನೀಡಲಾಗಿದೆ.

ಎಚ್.ಡಿ.ಕುಮಾರಸ್ವಾಮಿ ಸಭೆ
ಗುರುವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ, ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸೇರಿದಂತೆ ಹಲವು ನಾಯಕರ ಜೊತೆ ಸಭೆ ನಡೆಸಿದರು. ಈ ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಉಸ್ತುವಾರಿ ವಹಿಸುವ ಕುರಿತು ಚರ್ಚೆ ನಡೆಯಿತು.

ಒಬ್ಬರೇ ಕಾಂಗ್ರೆಸ್ ಶಾಸಕರು
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ, ಸೊರಬ, ಸಾಗರ, ಶಿಕಾರಿಪುರ ಮತ್ತು ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಭದ್ರಾವತಿ (ಬಿ.ಕೆ.ಸಂಗಮೇಶ್) ಬಿಟ್ಟು ಬೇರೆ ಯಾವ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಇಲ್ಲ.

ಬಳ್ಳಾರಿಯಲ್ಲಿ ಜಾದೂ ಮಾಡಿದ್ದ ಡಿಕೆಶಿ
2018ರಲ್ಲಿ ನಡೆದ ಬಳ್ಳಾರಿ ಉಪ ಚುನಾವಣೆಯ ಹೊಣೆಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಲಾಗಿತ್ತು. ತಮ್ಮ ಕಾರ್ಯತಂತ್ರದ ಮೂಲಕ ಬಿ.ಶ್ರೀರಾಮುಲು ಅವರ ಕೋಟೆಯನ್ನು ಛಿದ್ರ ಮಾಡಿದ್ದ ಅವರು ಬಿಜೆಪಿ ಅಭ್ಯರ್ಥಿ ಜೆ.ಶಾಂತ ಅವರು 2.40 ಲಕ್ಷ ಮತಗಳ ಅಂತರದಿಂದ ಸೋಲುವಂತೆ ಮಾಡಿದ್ದರು. ಈ ಯಶಸ್ಸಿನ ಕಾರಣದಿಂದಲೇ ಅವರಿಗೆ ಶಿವಮೊಗ್ಗದ ಉಸ್ತುವಾರಿ ನೀಡಲಾಗಿದೆ.

ಅಪ್ಪ-ಮಕ್ಕಳಿಗೆ ಹಿನ್ನಡೆ ಉಂಟು ಮಾಡುವುದು
2009ರ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಬಿ.ವೈ.ರಾಘವೇಂದ್ರ ಅವರು, 2018ರ ಉಪ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಬಿಜೆಪಿ ಭದ್ರಕೋಟೆಯಾಗಿದೆ. ಇಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸುವ ಮೂಲಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖಭಂಗ ಉಂಟು ಮಾಡಲು ಕಾಂಗ್ರೆಸ್-ಜೆಡಿಎಸ್ ತಂತ್ರ ರೂಪಿಸುತ್ತಿವೆ.

ಜಾತಿ ಲೆಕ್ಕಾಚಾರ
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 2.70 ಲಕ್ಷ ಲಿಂಗಾಯತರು, 2.5 ಲಕ್ಷ ದಲಿತರು, 2 ಲಕ್ಷ ಈಡಿಗರು, 1.5 ಲಕ್ಷ ಬ್ರಾಹ್ಮಣರು, 1.30 ಲಕ್ಷ ಮುಸ್ಲಿಂಮರು, 60 ಸಾವಿರ ಕುರುಬ ಮತಗಳಿವೆ. ಮಧು ಬಂಗಾರಪ್ಪ ಅವರಿಗೆ ಈಡಿಗರು ಬೆಂಬಲ ನೀಡಲಿದ್ದಾರೆ. ಎಸ್.ಬಂಗಾರಪ್ಪ ಬಲ, ಕಾಂಗ್ರೆಸ್ ಬೆಂಬಲದಿಂದಾಗಿ ಅವರು ಗೆಲುವು ಸಾಧಿಸುವಂತೆ ಮಾಡುವುದು ಕಾಂಗ್ರೆಸ್ ತಂತ್ರವಾಗಿದೆ.












Click it and Unblock the Notifications