ಬ್ಯಾಂಕುಗಳ ಕಂತು ಮರುಪಾವತಿ ಅವಧಿ ವಿಸ್ತರಣೆ
ಶಿವಮೊಗ್ಗ, ಮೇ 6: ಶಿವಮೊಗ್ಗ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ, ಸಹಕಾರ ಬ್ಯಾಂಕ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಶಿವಮೊಗ್ಗ ಹಾಗೂ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಲ್ಲಿ(ಪಿ.ಎಲ್.ಡಿ.ಬಿ) ರೈತ ಸದಸ್ಯರ 3 ಲಕ್ಷ ರೂ. ಗಳವರೆಗೆ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ವಿತರಿಸಿರುವ ಯೋಜನೆ, ಶೇ.3 ರ ಬಡ್ಡಿದರದಲ್ಲಿ 10 ಲಕ್ಷ ರುಪಾಯಿಗಳವರೆಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಸಂಬಂಧಿತ ಸಾಲಗಳ ಮರುಪಾವತಿ ಅವಧಿ ವಿಸ್ತರಿಸಲಾಗಿದೆ.
Recommended Video
ಸ್ವಸಹಾಯ ಗುಂಪಿನ ಕಾಯಕ ಯೋಜನೆಯ ಸದಸ್ಯರುಗಳು 2020 ರ ಮಾರ್ಚ್ 31 ರವರೆಗೆ ಪಾವತಿಸಬೇಕಾದ ಕಂತುಗಳ ಮರುಪಾವತಿ ಅವಧಿಯನ್ನು 2020 ಜೂನ್ 30 ರವರೆಗೆ ವಿಸ್ತರಿಸಲಾಗಿದೆ.
ರೈತ ಸದಸ್ಯರುಗಳು ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ವೈರಸ್ ಸೋಂಕಿನ ಪರಿಣಾಮದಿಂದ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿಯಲ್ಲಿ ಕರ್ನಾಟಕ ಲೇವಾದೇವಿದಾರರ ಕಾಯ್ದೆ ಹಾಗೂ ಕರ್ನಾಟಕ ಪಾನ್ ಬ್ರೋಕರ್ಸ್ ಅಧಿನಿಯಮ 1961 ಹಾಗೂ 1982 ರ ಚೀಟಿ ನಿಧಿ ಕಾಯ್ದೆಯಡಿಯಲ್ಲಿ ನೀಡಿರುವ ಸಾಲ/ ಕಂತುಗಳ ವಸೂಲಿಯ ಬಗ್ಗೆ ಕಿರುಕುಳ ಅಥವಾ ತೊಂದರೆ ನೀಡಬಾರದೆಂದು ಹಾಗೂ ಹೆಚ್ಚಿನ ಬಡ್ಡಿದರವನ್ನು ವಸೂಲು ಮಾಡಬಾರದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.