ಅರಣ್ಯ ವಾಸಿಗಳ ಹಕ್ಕು; ಲೋಕಸಭೆಯಲ್ಲಿ ಬಿ. ವೈ. ರಾಘವೇಂದ್ರ ಮಾತು
ಶಿವಮೊಗ್ಗ, ಡಿಸೆಂಬರ್ 14; ಲೋಕಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಸಾಂಪ್ರದಾಯಿಕ ಅರಣ್ಯವಾಸಿಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳ ಬಗ್ಗೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಶೂನ್ಯ ವೇಳೆಯಲ್ಲಿ ಸಂಸತ್ತಿನ ಗಮನ ಸೆಳೆದರು. ಸರ್ಕಾರದ ಮುಂದೆ ಬೇಡಿಕೆಯನ್ನು ಮಂಡಿಸಿದರು.
ಅರಣ್ಯವನ್ನು ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿರುವ ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಕುರಿತು ವಿಚಾರವನ್ನು ಮಂಡನೆ ಮಾಡಿದರು. ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಮಂಜೂರು ಮಾಡಲು ಕಾಯ್ದೆಗೆ ಸೂಕ್ತ ತಿದ್ದುಪಡಿಯನ್ನು ತರಲು ಮನವಿ ಮಾಡಿದರು.
ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳು (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯ್ದೆ 2006 (2007 ರ ಸಂ.2) ಮತ್ತು ನಿಯಮಗಳು 2008 (ತಿದ್ದುಪಡಿ 2012) ಅರಣ್ಯ ಹಕ್ಕುಗಳನ್ನು ಗುರುತಿಸಲು ಮತ್ತು ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿಗೊಳಿಸಲಾಗಿದೆ. ಅರಣ್ಯದಲ್ಲಿ ವಾಸಿಸುವ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳು ಅಂತಹ ಕಾಡುಗಳಲ್ಲಿ ತಲೆಮಾರುಗಳಿಂದ ವಾಸಿಸುತ್ತಿದ್ದಾರೆ. ಆದರೆ ಅವರ ಹಕ್ಕುಗಳನ್ನು ದಾಖಲಿಸಲು ಸಾಧ್ಯವಾಗಲಿಲ್ಲ, ಅವರ ಜೀವನೋಪಾಯಕ್ಕಾಗಿ ಭೂಮಿಯನ್ನು ಬಳಸಿಕೊಳ್ಳುವಲ್ಲಿ ಅರಣ್ಯ ಇಲಾಖೆಯ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಭೂಮಿಯ ಹಕ್ಕನ್ನು ಖಾತರಿಪಡಿಸುವುದು ಮುಖ್ಯ ಉದ್ದೇಶವಾಗಿತ್ತು.

ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಅರಣ್ಯ ಭೂಮಿ ಮತ್ತು ಅವರ ವಾಸಕ್ಕೆ ಸಂಬಂಧಿಸಿದಂತ ಅರಣ್ಯ ಬುಡಕಟ್ಟುಗಳು ಮತ್ತು ಇತರ ಸ್ಥಳೀಯ ಬುಡಕಟ್ಟುಗಳ ಅರಣ್ಯ ಮಾನ್ಯತೆ ಮತ್ತು ವಿನಿಯೋಗ ಮೇಲಿನ ನಿಬಂಧನೆಯ ಪ್ರಕಾರ 13ನೇ ಡಿಸೆಂಬರ್ 2005 ರ ಮೊದಲು ಅರಣ್ಯ ಫಾರ್ಮ್ನ ಷರತ್ತುಗಳಿಗೆ ಒಳಪಟ್ಟು ಅಂತಹ ಎಲ್ಲಾ ಬುಡಕಟ್ಟುಗಳು ಅಥವಾ ಬುಡಕಟ್ಟು ಸಮುದಾಯಗಳಿಗೆ ಮಂಜೂರು ಮಾಡಲಾಗುವುದು.
ಅರಣ್ಯ ಹಕ್ಕು ಕಾಯಿದೆಯ ಅನುಷ್ಠಾನ, ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ಅರ್ಜಿದಾರರಿಗೆ ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಅರಣ್ಯ ಭೂಮಿಯನ್ನು ಮಂಜೂರು ಮಾಡಲು, 2005 ರ ಡಿಸೆಂಬರ್ 13 ಕ್ಕಿಂತ ಮೊದಲು 3 ತಲೆಮಾರುಗಳ ಸಾಕ್ಷಿ/ ದಾಖಲೆಗಳನ್ನು ಸಲ್ಲಿಸಬೇಕಾಗಿರುತ್ತದೆ ಎಂದು ಸಂಸದರು ಹೇಳಿದರು.
"ನಾನು ಶಿವಮೊಗ್ಗ ಕ್ಷೇತ್ರದ ಸಂಸದನಾಗಿದ್ದು, ನನ್ನ ಲೋಕಸಭಾ ಕ್ಷೇತ್ರದಲ್ಲಿ ಶೇ 50 ಕ್ಕಿಂತ ಹೆಚ್ಚು ಭೂಮಿ ಅರಣ್ಯದಿಂದ ಕೂಡಿದೆ. ಪಶ್ಚಿಮ ಘಟ್ಟಗಳ ಪ್ರಮುಖ ಪ್ರದೇಶವು ನನ್ನ ಕ್ಷೇತ್ರದಲ್ಲಿ ಬರುತ್ತದೆ. ಸಾವಿರಕ್ಕೂ ಹೆಚ್ಚು ಹಳ್ಳಿಗಳು ಮತ್ತು ಕುಗ್ರಾಮಗಳು ಕಾಡಿನಲ್ಲಿ ಅಥವಾ ಕಾಡಿನ ಅಂಚಿನಲ್ಲಿವೆ. ಅರಣ್ಯ ವಾಸಿಗರು ತಮ್ಮ ಜೀವನೋಪಾಯಕ್ಕಾಗಿ ಮುಖ್ಯವಾಗಿ ಅರಣ್ಯವನ್ನು ಅವಲಂಬಿಸಿದ್ದಾರೆ. ಅರಣ್ಯ ವಾಸಿಗರಿಗೆ, ಅರಣ್ಯ ಮತ್ತು ವನ್ಯಜೀವಿಗಳ ನಡುವೆ ಸಹ ಜೀವನದ ಸಂಬಂಧವಿದೆ. ವಾಸ್ತವಿಕವಾಗಿ ಈ ಅರಣ್ಯ ವಾಸಿಗಳು ತಮ್ಮ ಜೀವನಪಾಯಕ್ಕಾಗಿ ಅರಣ್ಯವನ್ನು ಪೂಜಿಸುವುದು ಮತ್ತು ರಕ್ಷಿಸುವುದು ಸಂಪ್ರದಾಯವಾಗಿದೆ" ಎಂದರು.
"ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಅಂಕಿ ಅಂಶದ ಪ್ರಕಾರ ರಾಜ್ಯಾದ್ಯಂತ 2.94 ಲಕ್ಷ ಅರ್ಜಿಗಳಲ್ಲಿ 1.89 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ನನ್ನ ಕ್ಷೇತ್ರದಲ್ಲಿ ಅಂದರೆ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 97,075 ಅರ್ಜಿಗಳು ಬಂದಿದ್ದು, 32,245 ಅರ್ಜಿಗಳು ತಿರಸ್ಕೃತಗೊಂಡಿದ್ದು, ಇದುವರೆಗೆ 2,444 ಹಕ್ಕುಪತ್ರಗಳನ್ನು ವಿತರಿಸಲಾಗಿದೆ" ಎಂದು ಮಾಹಿತಿ ನೀಡಿದರು.
"13ನೇ ಡಿಸೆಂಬರ್ 2005ಕ್ಕಿಂತ ಮೊದಲು ಮೂರು ತಲೆಮಾರುಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ ಎಂದು ಸಾಬೀತುಪಡಿಸಲು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳ ಅರ್ಜಿದಾರರಿಂದ ಅಧಿಕೃತ ದಾಖಲೆಗಳನ್ನು ಒದಗಿಸುವಲ್ಲಿನ ತೊಂದರೆಯಿಂದಾಗಿ ನಿರಾಕರಣೆಯ ಪ್ರಮಾಣ ಜಾಸ್ತಿಯಾಗಿದೆ. ಸಂಸತ್ತಿನ ನನ್ನ ಅನೇಕ ಸ್ನೇಹಿತರು ಸಹ ಅದೇ ಕಷ್ಟವನ್ನು ಅನುಭವಿಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ" ಎಂದು ಕಲಾಪದ ಗಮನ ಸೆಳೆದರು.
"ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರು ಇದನ್ನು ಪರಿಶೀಲಿಸಲು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳಿಗೆ ಅವರು ಅರ್ಜಿ ಸಲ್ಲಿಸಿದ ದಿನಾಂಕದ ಪೂರ್ವದಲ್ಲಿ 25 ವರ್ಷಗಳಿಂದ (ಒಂದು ತಲೆಮಾರು) ವಾಸಿಸುತ್ತಿರುವುದನ್ನು ಪರಿಗಣಿಸಿ ಅವರಿಗೆ ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಭೂಮಿ ಮಂಜೂರು ಮಾಡಲು ಕಾಯ್ದೆಗೆ ಸೂಕ್ತ ತಿದ್ದುಪಡಿಯನ್ನು ತರಲು ನಾನು ಗೌರವಪೂರ್ವಕವಾಗಿ ಮನವಿ ಮಾಡುತ್ತಿದ್ದೇನೆ" ಎಂದರು.












Click it and Unblock the Notifications