Shivamogga-Tirupati Train : ಶಿವಮೊಗ್ಗ-ತಿರುಪತಿ-ಚೆನ್ನೈ ರೈಲಿಗೆ ಹಸಿರು ನಿಶಾನೆ
ಶಿವಮೊಗ್ಗ, ಏಪ್ರಿಲ್ 18; ಮಲೆನಾಡು ಮತ್ತು ಮೆಟ್ರೋ ನಗರಿ ಚೆನ್ನೈ ಸಂಪರ್ಕಿಸುವ ಶಿವಮೊಗ್ಗ- ರೇಣಿಗುಂಟ (ತಿರುಪತಿ)-ಚೆನ್ನೈ ವಿಶೇಷ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಲಾಗಿದೆ. ವಾರಕ್ಕೆ ಎರಡು ದಿನ ಈ ರೈಲು ಸಂಚಾರ ನಡೆಸಲಿದೆ.
ಭಾನುವಾರ ಸಂಜೆ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ, ರೈಲ್ವೇ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಶೇ 60ರಷ್ಟು ಭೂ ಸ್ವಾಧೀನ ಪೂರ್ಣ; ರೈಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ, "ಬ್ರಿಟಿಷ್ ಕಾಲದ ರೈಲ್ವೆ ಮಾರ್ಗ ಹೊರತು ಈತನಕ ಶಿವಮೊಗ್ಗದಿಂದ ಯಾವುದೇ ಹೊಸ ಮಾರ್ಗಗಳು ಇರಲಿಲ್ಲ. ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು ರೈಲು ಮಾರ್ಗ ಸ್ವಾತಂತ್ರ್ಯ ನಂತರದ ಹೊಸ ರೈಲಿ ಮಾರ್ಗವಾಗಿದೆ" ಎಂದರು.
"ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಮಾರ್ಗದ ಶೇ 60ರಷ್ಟು ಭೂ ಸ್ವಾಧೀಣ ಪ್ರಕ್ರಿಯೆ ಪೂರ್ಣಗೊಂಡಿದೆ. ರೈತರಿಗೆ ಪರಿಹಾರದ ಹಣವನ್ನು ತಲುಪಿಸಲಾಗಿದೆ. ಈ ತಿಂಗಳ ಕೊನೆ ವೇಳೆಗೆ ಬಹುತೇಕ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ" ಎಂದು ಸಂಸದರು ಮಾಹಿತಿ ನೀಡಿದರು.
ಜನರಿಗೆ ಅನುಕೂಲ; ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಶಿವಮೊಗ್ಗದಿಂದ ವಾರಕ್ಕೆ ಎರಡು ದಿನ ರೇಣಿಗುಂಟಾ (ತಿರುಪತಿ ಸಮೀಪ) ಮಾರ್ಗವಾಗಿ ಚೆನ್ನೈಗೆ ಹೊಸ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಆರಂಭ ಮಾಡಿದೆ. ಇದರಿಂದಾಗಿ ತಿರುಪತಿಗೆ ಹೋಗುವ ಭಕ್ತರಿಗೆ, ಚೆನ್ನೈಗೆ ಪ್ರಯಾಣಿಸುವ ಜನರಿಗೆ ಅನುಕೂಲವಾಗಿದೆ.

ಈ ವಿಶೇಷ ಎಕ್ಸ್ಪ್ರೆಸ್ ರೈಲು ಮಲೆನಾಡು ಮತ್ತು ಮೆಟ್ರೋಪಾಲಿಟನ್ ನಗರವಾದ ಚೆನ್ನೈ ಮತ್ತು ಯಾತ್ರಾ ಕೇಂದ್ರವಾದ ತಿರುಪತಿ (ರೇಣಿಗುಂಟ)ಗೆ ನೇರ ಸಂಪರ್ಕವನ್ನು ಒದಗಿಸಲಿದೆ. ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿದ್ದ ರೈಲು ಸೇವೆಯನ್ನು ಪುನಃ ಆರಂಭಿಸಲು ಬಿ. ವೈ. ರಾಘವೇಂದ್ರ ಮನವಿ ಮಾಡಿದ್ದರು. ಇದಕ್ಕೆ ಇಲಾಖೆ ಒಪ್ಪಿಗೆ ನೀಡಿದೆ.

ಭಾರತೀಯ ರೈಲ್ವೆ ಪ್ರಾಯೋಗಿಕವಾಗಿ ಶಿವಮೊಗ್ಗ-ತಿರುಪತಿ-ಚೆನ್ನೈಗೆ ಸಂಪರ್ಕಿಸುವ ರೈಲು ಓಡಿಸುತ್ತಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ರೈಲು ಸೇವೆ ಖಾಯಂಗೊಳಿಸಲಾಗುತ್ತದೆ. ಜನರು ರೈಲು ಸೇವೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ವೇಳಾಪಟ್ಟಿ; ರೈಲು ಸಂಖ್ಯೆ 06223 ಏಪ್ರಿಲ್ 17 ರಿಂದ 28/06/2022 ರ ತನಕ ವಾರದಲ್ಲಿ ಎರಡು ದಿನ (ಪ್ರತಿ ಭಾನುವಾರ ಮತ್ತು ಮಂಗಳವಾರ) ಶಿವಮೊಗ್ಗದಿಂದ ಸಂಜೆ 7 ಗಂಟೆಗೆ ಹೊರಡಲಿದೆ. ರೇಣಿಗುಂಟಾ (ತಿರುಪತಿ) ಮಾರ್ಗವಾಗಿ ಪುರಚಿ ತಲೈವರ್ ಎಂ. ಜಿ. ಆರ್. ಚೆನ್ನೈ ಸೆಂಟ್ರಲ್ ನಿಲ್ದಾಣ ತಲುಪಲಿದೆ.
ರೈಲು ಸಂಖ್ಯೆ 06224 ಏಪ್ರಿಲ್ 18 ರಿಂದ 29/06/2022 ರ ತನಕ ಪ್ರತಿ ಸೋಮವಾರ ಮತ್ತು ಬುಧವಾರ ಪುರಚಿ ತಲೈವರ್ ಎಂ. ಜಿ. ಆರ್. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಸಂಜೆ 7.55ಕ್ಕೆ ಹೊರಟು ರೇಣಿಗುಂಟ (ತಿರುಪತಿ) ಮಾರ್ಗವಾಗಿ ಶಿವಮೊಗ್ಗ ಟೌನ್ ತಲುಪುತ್ತದೆ.
ನಿಲ್ದಾಣಗಳು; ಈ ರೈಲು ಶಿವಮೊಗ್ಗ, ಭದ್ರಾವತಿ, ತರೀಕೆರೆ, ಬೀರೂರು, ಅಜ್ಜಂಪುರ, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ರಾಯದುರ್ಗ, ಬಳ್ಳಾರಿ, ಗುಂತಕಲ್, ತಾಡಿಪತ್ರಿ, ಗುತ್ತಿ, ಯರ್ರಗುಂಟ್ಲ, ಕಡಪ, ರಾಯಪೇಟೆ, ರೇಣಿಗುಂಟ, ಅರಕೋಣಂ, ಪರೆಂಬೂರು, ಚೆನ್ನೈ ಮಾರ್ಗವಾಗಿ ಸಂಚಾರ ನಡೆಸಲಿದೆ.
ಈ ರೈಲು ಎರಡು ಎಸ್. ಎಲ್. ಆರ್. ಡಿ., 4 ಸಾಮಾನ್ಯ ಕೋಚ್ಗಳು, 6 ಸ್ಲೀಪರ್ ಕೋಚ್ಗಳು, 1 ಎರಡನೆಯ ದರ್ಜೆ ಹವಾ ನಿಯಂತ್ರಿತ ಮತ್ತು 1 ಮೂರನೆಯ ದರ್ಜೆ ಹವಾ ನಿಯಂತ್ರಿತ ಕೋಚ್ಗಳನ್ನು ಒಳಗೊಂಡಿದೆ.












Click it and Unblock the Notifications