ಬಿಜೆಪಿ ಪ್ರಚಾರಕ್ಕೆ ಹೋದರೆ ಜನ ಉಗಿಯುತ್ತಾರೆ; ಅಧ್ಯಕ್ಷನ ರಾಜೀನಾಮೆ
ಶಿವಮೊಗ್ಗ, ಆಗಸ್ಟ್ 26; ಬಿಜೆಪಿ ಪರ ಪ್ರಚಾರಕ್ಕೆ ಹೋದರೆ ಜನ ಉಗಿಯುತ್ತಾರೆ ಎಂದು ಹೇಳಿರುವ ಬೂತ್ ಮಟ್ಟದ ಅಧ್ಯಕ್ಷರೊಬ್ಬರು ನಡು ರಸ್ತೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಶಿವಮೊಗ್ಗದ ಅಶೋಕನಗರದಲ್ಲಿ ಈ ಘಟನೆ ನಡೆದಿದೆ.
ಮನೆ ಬಳಿಗೆ ಬಂದಿದ್ದ ಬಿಜೆಪಿ ಮುಖಂಡರನ್ನು ಬಾಗಿಲಲ್ಲೇ ನಿಲ್ಲಿಸಿದ ಬೂತ್ ಅಧ್ಯಕ್ಷ ಎಲ್.ಶೇಖರ್ ರಾಜೀನಾಮೆ ಪತ್ರ ಕೈಗಿಟ್ಟಿದ್ದಾರೆ. ಅಲ್ಲದೇ ಇನ್ನು ಮುಂದೆ ತಾವು ಪಕ್ಷದ ಪರವಾಗಿ ಪ್ರಚಾರ ನಡೆಸಲು ಅಸಾಧ್ಯ ಅಂತಲೂ ಕಡ್ಡಿ ಮುರಿದ ಹಾಗೆ ಹೇಳಿ ಕಳುಹಿಸಿದ್ದಾರೆ.
ನಾಮಫಲಕ ಅಭಿಯಾನದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ನಾಮಫಲಕ ವಿತರಣೆ ಮಾಡಲು ಬೂತ್ ಅಧ್ಯಕ್ಷರಾದ ಎಲ್. ಶೇಖರ್ ಮನೆಗೆ ಬಂದಿದ್ದರು. ಈ ವೇಳೆ ರಾಜೀನಾಮೆ ಪತ್ರ ನೀಡಿರುವ ಬೂತ್ ಅಧ್ಯಕ್ಷರು, ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜೀನಾಮೆ ಪತ್ರದಲ್ಲೂ ಸಕಾರಣವನ್ನು ವಿವರಿಸಿದ್ದಾರೆ.

ರಾಜೀನಾಮೆ ಪತ್ರ; ಪ್ರತಿ ಬೂತ್ ಹಂತದಲ್ಲೂ ಬಿಜೆಪಿ ಕಮಿಟಿ ರಚಿಸಿದೆ. ಶಿವಮೊಗ್ಗದ ಅಶೋಕನಗರದ ಬೂತ್ ಕಮಿಟಿಯೊಂದಕ್ಕೆ ಎಲ್. ಶೇಖರ್ ಅಧ್ಯಕ್ಷರಾಗಿದ್ದರು. ಇವರ ಮನೆ ಮುಂದ ಬೂತ್ ಅಧ್ಯಕ್ಷರು ಎಂದು ನಾಮಫಲಕ ಅಂಟಿಸಲು ಬಿಜೆಪಿ ಮುಖಂಡರು ತೆರಳಿದ್ದರು. ಆಗ ತಮ್ಮ ರಾಜೀನಾಮೆ ಪತ್ರ ಹಸ್ತಾಂತರಿಸಿದ್ದು, ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಎಲ್. ಶೇಖರ್ ನೀಡಿರುವ ರಾಜೀನಾಮೆ ಪತ್ರದಲ್ಲಿ ಬಿಜೆಪಿ ಸರ್ಕಾರದ ಇತ್ತೀಚಿನ ಬೆಳವಣಿಗೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷ ಜನಪರ ಸರ್ಕಾರ ನೀಡಲಿದೆ ಎಂದು ನಂಬಿದ್ದೆ. ಆದರೆ ಈಗ ಗೃಹೋಪಯೋಗಿ ವಸ್ತುಗಳು, ಅಡುಗೆ ಅನಿಲ, ವಿದ್ಯುತ್, ಪೆಟ್ರೋಲ್, ಡಿಸೇಲ್ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದರಿಂದ ಜನ ಸಾಮಾನ್ಯರು ಜೀವನ ನಡೆಸುವುದೆ ಕಷ್ಟಕರವಾಗಿದೆ.
ಹೀಗಿರುವಾಗ ಪಕ್ಷದ ಪರವಾಗಿ ಜನರಲ್ಲಿ ಪಕ್ಷದ ಬಗ್ಗೆ ಅರಿವು ಮೂಡಿಸಿ ಮಾತನಾಡಲು ಮೌನವಾಗಿರುವೆ. ಕಾರಣವೇನೆಂದರೆ ಪ್ರಸ್ತುತ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಹಾಗೂ ಸ್ಥಳೀಯ ಪಾಲಿಕೆಯವರೆಗೂ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿದೆ.
ಇಂತಹ ಸಂದರ್ಭದಲ್ಲಿ ಪಕ್ಷದ ಪರವಾಗಿ ಅರಿವು ಮೂಡಿಸಲು ಜನರ ಬಳಿಗೆ ಹೋದರೆ ಉಗಿಯುತ್ತಾರೆ. ಇದರಿಂದ ಮನನೊಂದು ರಾಜೀನಾಮೆ ನೀಡುತ್ತಿದ್ದೇನೆ ಎಂದು ಎಲ್. ಶೇಖರ್ ಪತ್ರದಲ್ಲಿ ಬರೆದಿದ್ದಾರೆ.

ಬೂತ್ ಅಧ್ಯಕ್ಷರದ್ದು ದೊಡ್ಡ ಜವಾಬ್ದಾರಿ; ರಾಜೀನಾಮೆ ಕುರಿತು ಒನ್ ಇಂಡಿಯಾ ಕನ್ನಡದ ಜೊತೆ ದೂರವಾಣಿ ಮೂಲಕ ಮಾತನಾಡಿದ ಎಲ್. ಶೇಖರ್, "ಪಕ್ಷದಲ್ಲಿ ಬೂತ್ ಅಧ್ಯಕ್ಷರದ್ದು ಪ್ರಮುಖ ಜವಾಬ್ದಾರಿಯಾಗಿದೆ. ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳೇ ಜನರ ಬಳಿಗೆ ಹೋಗುವುದು. ಎಲ್ಲರೂ ಈಗ ನಮಗೆ ಬಯ್ಯುತ್ತಿದ್ದಾರೆ. ಹಾಗಾಗಿ ಬೇಜಾರಾಗಿ ನಾನು ರಾಜೀನಾಮೆ ಕೊಟ್ಟಿದ್ದೇನೆ. ಬೇರೆ ಸಂದರ್ಭ ಅಥವಾ ಬೇರೆ ಜಾಗದಲ್ಲಿ ರಾಜೀನಾಮೆ ಕೊಟ್ಟಿದ್ದರೆ ನಾಲ್ಕು ಜನಕ್ಕೆ ವಿಚಾರ ತಿಳಿಯುತ್ತಿರಲಿಲ್ಲ. ಅಲ್ಲದೆ ನನ್ನಿಂದಾಗಿ ಬೇರೆಯವರು ವಿಚಾರ ತಿಳಿಯುವಂತಾಗಲಿ ಅನ್ನುವ ಉದ್ದೇಶದಿಂದ ಮನೆ ಬಾಗಿಲಿಗೆ ಮುಖಂಡರು ಬಂದಾಗ ರಾಜೀನಾಮೆ ನೀಡಿದ್ದೇನೆ" ಎಂದು ಹೇಳಿದರು.
ಅಗತ್ಯ ವಸ್ತುಗಳು, ತೈಲೋತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಕಾರ್ಯಕರ್ತರು ತಳ ಹಂತದಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಲು ಕಷ್ಟಪಡುವಂತಾಗಿದೆ. ಶೇಖರ್ ನಡೆ ಶಿವಮೊಗ್ಗ ನಗರ ಬಿಜೆಪಿಯೊಳಗೆ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆಯು ವ್ಯಕ್ತವಾಗಿದೆ.












Click it and Unblock the Notifications