ಹುಟ್ಟು ಹಬ್ಬದಂದು ತ್ಯಾವರೆಕೊಪ್ಪದಲ್ಲಿ ಪ್ರಾಣಿಗಳನ್ನು ದತ್ತು ಪಡೆಯಿರಿ
ಶಿವಮೊಗ್ಗ, ನವೆಂಬರ್ 19 : ನಿಮ್ಮ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಿಕೊಳ್ಳಬೇಕು ಎಂಬ ಆಸೆ ಇದೆಯೇ?. ಹಾಗಾದರೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಬಂದು ಒಂದು ದಿನದ ಮಟ್ಟಿಗೆ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಿ.
ಹೌದು..ಕೆಲವೇ ದಿನಗಳಲ್ಲಿ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಪ್ರಾಣಿಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಶಿವಮೊಗ್ಗ ನಗರದಿಂದ ಸುಮಾರು 10 ಕಿ.ಮೀ.ದೂರದಲ್ಲಿರುವ ಧಾಮಕ್ಕೆ ಜನರು ಭೇಟಿ ನೀಡಬಹುದು.
ರಾಜ್ಯದಲ್ಲಿಯೇ ಮೊದಲ ಬಾರಿಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಹುಟ್ಟು ಹಬ್ಬದ ದಿನ ಪ್ರಾಣಿಗಳನ್ನು ದತ್ತು ಪಡೆಯುವ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರಿಂದಾಗಿ ಧಾಮದ ಆದಾಯವೂ ಹೆಚ್ಚಳವಾಗುವ ನಿರೀಕ್ಷೆಇದೆ.

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ 7 ಬಂಗ್ಲಾ ಹುಲಿಗಳು, 4 ಏಷ್ಯಾದ ಸಿಂಹಗಳು, 18 ಚಿರತೆಗಳು, 200 ಜಿಂಕೆಗಳು ಸೇರಿದಂತೆ ವಿವಿಧ ಪ್ರಾಣಿಗಳಿವೆ. ಜನರು ಬೇಕಾದ ಪ್ರಾಣಿಯನ್ನು ಒಂದು ದಿನದ ಮಟ್ಟಿಗೆ ದತ್ತು ಪಡೆಯಬಹುದಾಗಿದೆ.
ದತ್ತು ಪಡೆದ ಪ್ರಾಣಿಯ ಒಂದು ದಿನದ ಆಹಾರ, ವೈದ್ಯಕೀಯ ವೆಚ್ಚ, ಉಸ್ತುವಾರಿ ವೆಚ್ಚವನ್ನು ಜನರು ಪಾವತಿ ಮಾಡಿ ದಿನದ ಮಟ್ಟಿಗೆ ಪ್ರಾಣಿಯನ್ನು ದತ್ತು ಪಡೆಯಬಹುದಾಗಿದೆ. ದತ್ತು ಪಡೆದವರ ಚಿತ್ರ ಮತ್ತು ಹೆಸರನ್ನು ಸಿಂಹಧಾಮದಲ್ಲಿ ಪ್ರಕಟಿಸಲಾಗುತ್ತದೆ.
ಸುಮಾರು 250 ಎಕರೆ ಪ್ರದೇಶದಲ್ಲಿ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮವಿದೆ. ಪ್ರತಿನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲೂ ಶಾಲಾ ಮಕ್ಕಳು ಹೆಚ್ಚಾಗಿ ಆಗಮಿಸುತ್ತಾರೆ.
ಹುಟ್ಟು ಹಬ್ಬದ ದತ್ತು ಯೋಜನೆಯಿಂದ ಜನರನ್ನು ಹೆಚ್ಚಾಗಿ ಆಕರ್ಷಿಸುವ ಜೊತೆಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಆದಾಯವೂ ಹೆಚ್ಚಾಗುವ ನಿರೀಕ್ಷೆ ಇದೆ. ದತ್ತು ಯೋಜನೆಯ ದರ ಎಷ್ಟು ಎಂದು ಶೀಘ್ರದಲ್ಲಿಯೇ ಅಂತಿಮಗೊಳಿಸಲಾಗುತ್ತದೆ.
ಪ್ರಸ್ತುತ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ವಾರ್ಷಿಕ ಆದಾಯ 1.82 ಕೋಟಿ ಯಿಂದ 2 ಕೋಟಿ ತನಕವಿದೆ. ಧಾಮದಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಈ ಆದಾಯ ಸಾಕಾಗುವುದಿಲ್ಲ.












Click it and Unblock the Notifications