ಕೋವಿಡ್ ಜೊತೆ ಡೆಂಗ್ಯೂ ಭೀತಿ; ಸಾಗರದಲ್ಲಿ 24 ಪ್ರಕರಣ ಪತ್ತೆ
ಶಿವಮೊಗ್ಗ, ಜೂನ್ 10; ಕೊರೊನಾ ಆತಂಕದ ನಡುವೆ ಸಾಗರದಲ್ಲಿ ಡೆಂಗ್ಯೂ ಭೀತಿ ಎದುರಾಗಿದೆ. ದಿನೇ ದಿನೇ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಶಾಸಕ ಹಾಲಪ್ಪ ಸೂಚಿಸಿದ್ದಾರೆ.
ಡೆಂಗ್ಯೂ ನಿಯಂತ್ರಣ ಸಂಬಂಧ ಸಾಗರ ನಗರಸಭೆ ರಂಗಮಂದಿರ ಆವರಣದಲ್ಲಿ ಶಾಸಕ ಹರತಾಳು ಹಾಲಪ್ಪ ಅಧಿಕಾರಿಗಳ ಸಭೆ ನಡೆಸಿದರು. ತಕ್ಷಣದಿಂದ ಡೆಂಗ್ಯೂ ನಿಯಂತ್ರಣ ಮತ್ತು ಜಾಗೃತಿ ಕಾರ್ಯ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, "ತಾಲೂಕಿನಲ್ಲಿ ಕಳೆದ ತಿಂಗಳು 10 ಡೆಂಗ್ಯೂ ಪ್ರಕರಣ ಪತ್ತೆಯಾಗಿತ್ತು. ಜೂನ್ ತಿಂಗಳಲ್ಲಿ ಈಗಾಗಲೇ 24 ಕೇಸ್ಗಳು ಗೊತ್ತಾಗಿವೆ. ಹಲವರು ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಪ್ರಕರಣಗಳ ನಿಖರ ಮಾಹಿತಿ ತಿಳಿಯುತ್ತಿಲ್ಲ" ಎಂದರು.

"ಖಾಸಗಿ ಆಸ್ಪತ್ರೆ, ಲ್ಯಾಬ್ಗಳಿಂದಲೂ ಡೆಂಗ್ಯೂ ಪ್ರಕರಣಕ್ಕೆ ಚಿಕಿತ್ಸೆ ಪಡೆದವರ ವಿವರ ಸಂಗ್ರಹಿಸಬೇಕು. ಸ್ಥಳೀಯ ಆಡಳಿತದ ಜೊತೆಗೆ ಆರೋಗ್ಯ ಇಲಾಖೆ ಕೈಜೋಡಿಸಿ, ಡೆಂಗ್ಯೂ ಕುರಿತು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಬೇಕು" ಎಂದರು.
"ಮಳೆಗಾಲ ಶುರುವಾಗುತ್ತಿದ್ದು, ಅಲ್ಲಲ್ಲಿ ನೀರು ನಿಲ್ಲಲಿದೆ. ಇದರಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗಲಿದೆ. ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಜನರು ಕೂಡ ಈ ಬಗ್ಗೆ ಜಾಗೃತರಾಗುವಂತೆ ಮಾಡಬೇಕು" ಎಂದು ಶಾಸಕ ಹಾಲಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಇಬ್ಬರಿಗೆ ಡೆಂಗ್ಯೂ ಜೊತೆ ಕೋವಿಡ್; 24 ಪ್ರಕರಣಗಳಲ್ಲಿ ಇಬ್ಬರಿಗೆ ಡೆಂಗ್ಯೂ ಜೊತೆಗೆ ಕೋವಿಡ್ ದೃಢಪಟ್ಟಿದೆ ಎಂದು ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ ಸಭೆಯಲ್ಲಿ ಮಾಹಿತಿ ನೀಡಿದರು. ಗಾಂಧಿ ನಗರ, ವಿನೋಬನಗರ, ಎಸ್. ಎನ್. ನಗರ, ಸೂರನಗದ್ದೆ, ಸೊರಬ ತಾಲೂಕಿನ ಕ್ಯಾಸನೂರು ಸೇರಿದಂತೆ ಇನ್ನಿತರ ಭಾಗದಲ್ಲಿ ಡೆಂಗ್ಯೂ ಪೀಡತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಂಗ್ಯೂಗೆ ಸಕಾಲದಲ್ಲಿ ಚಿಕಿತ್ಸೆ ಲಭ್ಯವಿದೆ. ಜನರು ಭೀತಿಗೊಳ್ಳುವ ಆತಂಕವಿಲ್ಲ. ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಫಾಗಿಂಗ್ ಇಲ್ಲ, ದ್ರಾವಣ ಸಿಂಪಡಣೆ; ಸಾಗರ ಪಟ್ಟಣದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ. ಫಾಗಿಂಗ್ ಮಾಡುವುದು ಕ್ಯಾನ್ಸರ್ ಕಾರಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ಫಾಗಿಂಗ್ ಬದಲು ಮೆಲಾಥಿಯಾನ್ ದ್ರಾವಣ ಸಿಂಪಡಣೆ ಮಾಡಲಾಗುತ್ತದೆ. ಅಲ್ಲದೆ ಜಾಗೃತಿಯನ್ನೂ ಮೂಡಿಸಲಾಗುತ್ತದೆ ಎಂದು ನಗರ ಸಭೆ ಪೌರಾಯುಕ್ತ ಹೆಚ್. ಕೆ. ನಾಗಪ್ಪ ಸಭೆಗೆ ತಿಳಿಸಿದರು.












Click it and Unblock the Notifications