ರಾಮನಗರದಲ್ಲಿ ಕೊರೊನಾ ವೈರಸ್ ಗೆ 2ನೇ ಬಲಿ; ಟೊಯೊಟಾ ಕಂಪನಿ ಸಿಬ್ಬಂದಿಗೂ ಸೋಂಕು
ರಾಮನಗರ, ಜೂನ್ 17: ಜಿಲ್ಲೆಯಲ್ಲಿ ಕೊರೊನಾ ಸೋಂಕು ಎರಡನೇ ಬಲಿ ಪಡೆದಿದೆ. ಜೊತೆಗೆ ಇಬ್ಬರು ಟೊಯೊಟಾ ಕಂಪನಿ ಸಿಬ್ಬಂದಿಗೆ ಸೋಂಕು ತಗುಲಿದ್ದು, ಸಂಜೆ ವೇಳೆಗೆ ಮತ್ತಷ್ಟು ಪಾಸಿಟಿವ್ ವರದಿ ಬರುವ ಸಾಧ್ಯತೆ ಇದೆ.
Recommended Video
ಕನಕಪುರ ಟೌನ್ ನ 90 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ನಾಲ್ಕು ದಿನಗಳ ಹಿಂದೆ ಎದೆ ನೋವು ಎಂದು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಶವ ಪರೀಕ್ಷೆಗೂ ಮುನ್ನ ಪರೀಕ್ಷಿಸಿದಾಗ ಅವರಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ಸೋಮವಾರ ಬಿಡದಿಯ 54 ವರ್ಷ ವ್ಯಕ್ತಿಯೊಬ್ಬರು ಕೊರೊನಾದಿಂದಾಗಿ ಮೃತಪಟ್ಟಿದ್ದರು. ಇದರಿಂದ ಸೋಂಕಿಗೆ ಬಲಿಯಾದ ಸಂಖ್ಯೆ ಜಿಲ್ಲೆಲ್ಲಿ ಎರಡಕ್ಕೆ ಏರಿದೆ. ಬಿಡದಿಯಲ್ಲಿ ಮತ್ತೆರಡು ಕೊರೊನಾ ವೈರಸ್ ಕೇಸ್ ಪತ್ತೆಯಾಗಿದೆ. ಅಲ್ಲಿನ ಕೈಗಾರಿಕಾ ಪ್ರದೇಶದ ಟೊಯೊಟಾ ಮೋಟಾರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಮಂಡ್ಯದ ಓರ್ವ ವ್ಯಕ್ತಿ ಹಾಗೂ ಬೆಂಗಳೂರಿನ ಆಡುಗೋಡಿ ಮೂಲದ ವ್ಯಕ್ತಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಹಿನ್ನಲೆ ಟೊಯೊಟಾ ಕಂಪನಿಯನ್ನು ಒಂದು ದಿನದ ಮಟ್ಟಿಗೆ ಮುಚ್ಚಲಾಗಿದೆ.

ನಿನ್ನೆ ಅವರ ಜೊತೆ ಕೆಲಸ ಮಾಡಿದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಿರುವ ಅಧಿಕಾರಿಗಳು ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆಹಚ್ಚುತ್ತಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಸಂಜೆ ವೇಳೆಗೆ ನಾಲ್ಕಕ್ಕೂ ಹೆಚ್ಚು ಕೊರೊನಾ ವೈರಸ್ ಪಾಸಿಟಿವ್ ವರದಿಯಾಗುವ ಸಾಧ್ಯತೆಯಿದ್ದು, ಇದೀಗ ಸೋಂಕಿತರ ಸಂಖ್ಯೆ 28ಕ್ಕೆ ಏರಿಯಾಗಿದೆ.












Click it and Unblock the Notifications