ಖಾಸಗಿ ಲೇಔಟ್ ನಿರ್ಮಾಣಕ್ಕೆ ಬಲಿಯಾಯ್ತು ಮಾಗಡಿಯ ಬೃಹತ್ ಆಲದ ಮರ
ಮಾಗಡಿ, ಜನವರಿ 25: ಖಾಸಗಿ ಲೇಔಟ್ ನಿರ್ಮಾಣಕ್ಕೆ ಬೃಹತ್ ಆಲದ ಮರವೊಂದನ್ನು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಕುದೂರು- ಸೋಲೂರು ಹೆದ್ದಾರಿಯಲ್ಲಿ ನಡೆದಿದೆ. ಅದರಲ್ಲೂ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಬೆಳೆಸಿರುವ ಸಾಲು ಮರಗಳ ಒಂದು ಕಿ.ಮೀ ಸನಿಹದಲ್ಲೇ ಈ ಆಲದ ಮರ ಇತ್ತು.
ಮರಗಳನ್ನು ಮಕ್ಕಳಂತೆ ಪೋಷಿಸಿ ನಾಡಿಗೆ ಮರ ಬೆಳೆಸುವಂತೆ ಸಂದೇಶ ನೀಡಿದ ಸಾಲುಮರದ ತಿಮ್ಮಕ್ಕ ಬೆಳೆಸಿರುವ ಸಾಲು ಮರಗಳಿಂದ ಒಂದು ಕಿ.ಮೀ ಸನಿಹದಲ್ಲಿದ್ದ, ರಸ್ತೆ ಬದಿಯಲ್ಲಿದ್ದ 50 ವರ್ಷಗಳಷ್ಟು ಹಳೆಯದಾದ ಬೃಹತ್ ಆಲದ ಮರವನ್ನು ಲೇಔಟ್ ನಿರ್ಮಾಣಕ್ಕೆ ತೊಂದರೆಯಾಗುತ್ತದೆ ಎಂದು ಮರ ಕಡಿದಿದ್ದಾರೆ. ಮರ ಕಡಿದವರ ವಿರುದ್ಧ ಗ್ರಾಮಸ್ಥರು ಮತ್ತು ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಿದರು.

ಖಾಸಗಿ ಲೇಔಟ್ ನಿರ್ಮಾಣಕ್ಕೆ ಅಡ್ಡವಾಗಿದ್ದ 50 ವರ್ಷದ ಪುರಾತನ ಬೃಹತ್ ಆಲದ ಮರವನ್ನು ಗ್ರಾಮ ಸೇವಕ ಭೈರಪ್ಪ ಎಂಬುವರು ರಾತ್ರೋರಾತ್ರಿ ಕಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಕುದೂರು ಗ್ರಾಮ ಪಂಚಾಯತಿಯ ಆಸ್ತಿಯಾದ ಈ ಆಲದ ಮರವನ್ನು ಕಡಿಯಲು ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಪಡೆದಿಲ್ಲ ಎನ್ನಲಾಗಿದೆ.

ಮರ ಕಡಿದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಜನರು ಮರದ ದಿಮ್ಮಿಗಳನ್ನು ಬೇರೆ ಕಡೆ ಸಾಗಿಸಲು ಅವಕಾಶ ನೀಡದೆ ತಡೆಯೊಡ್ಡಿದರು. ಗ್ರಾಮ ಸೇವಕ ಭೈರಪ್ಪ ವಿರುದ್ಧ ಸಂಬಂಧಪಟ್ಟ ಅಧಿಕಾರಿಗೆ ದೂರು ಕೊಡಲು ಗ್ರಾಮಸ್ಥರು ಮತ್ತು ಪರಿಸರ ಪ್ರೇಮಿಗಳು ನಿರ್ಧರಿಸಿದ್ದಾರೆ.












Click it and Unblock the Notifications