"ಮಿಣಿಮಿಣಿ ಪೌಡರ್' ಹೇಳಿಕೆ ಟ್ರೋಲ್ ಮಾಡಿದ್ದಕ್ಕೆ ಎಚ್ಡಿಕೆ ಸಿಡಿಮಿಡಿ
Recommended Video
ರಾಮನಗರ, ಜನವರಿ 27: ಇತ್ತೀಚಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳೂರು ಸ್ಪೋಟಕದ ಬಗ್ಗೆ ಮಾತನಾಡುವಾಗ, "ಮಿಣಿಮಿಣಿ ಪೌಡರ್' ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಅಗುವುದರ ಜೊತೆಗೆ ಅದನ್ನು ವಿವಿಧ ರೀತಿಯಲ್ಲಿ ಟ್ರೋಲ್ ಮಾಡಲಾಗಿತ್ತು.
ಇಂದು ರಾಮನಗರದ ಚನ್ನಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಮಿಣಿಮಿಣಿ ಹೇಳಿಕೆಯನ್ನು ಟ್ರೋಲ್ ಮಾಡಿರುವ ಬಿಜೆಪಿ ಕಾರ್ಯಕರ್ತರದು ವಿಕೃತ ಮನೋಭಾವ ಎಂದು ಸಿಡಿಮಿಡಿಗೊಂಡರು.
ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅವರವರ ಅಸಹ್ಯಕರ ಆಲೋಚನೆಗಳನ್ನು ವ್ಯಕ್ತಪಡಿಸಿದ್ದಾರೆ, ನನ್ನ ಹೇಳಿಕೆಯನ್ನು ಕೀಳಾಗಿ ಬಿಂಬಿಸಿದ್ದಾರೆ. ಇದು ಬಿಜೆಪಿ ಪಕ್ಷದವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಒಂದು ಪತ್ರಿಕೆಯಲ್ಲಿ ವರದಿಯಾಗಿದ್ದರ ಬಗ್ಗೆ ನಾನು "ಮಿಣಿಮಿಣಿ ಪೌಡರ್' ಹೇಳಿಕೆ ನೀಡಿದ್ದೇನೆ, ನಾನು ನನ್ನ ಜೀವನದಲ್ಲಿ ತಪ್ಪುಗಳನ್ನು ಮಾಡಿಲ್ಲ. ತಪ್ಪು ಮಾಡಿದ್ದರೆ ಓಪನ್ ಆಗಿ ನಾನೇ ಮುಕ್ತವಾಗಿ ಹೇಳುತ್ತೇನೆ ಎಂದರು.
ಸೋಶಿಯಲ್ ಮೀಡಿಯಾದಲ್ಲಿ ಮಿಣಿಮಿಣಿ ಹೇಳಿಕೆಯನ್ನು ವೈರಲ್ ಮಾಡಿ, ಟ್ರೋಲ್ ಮಾಡಿರುವುದು ಬಿಜೆಪಿ ಅಭಿಮಾನಿಗಳೇ ಅಂತಾ ಗೊತ್ತಿದೆ. ನಾನು ಏನು ಎಂದು ರಾಜ್ಯದ ಜನಕ್ಕೆ ಗೊತ್ತಿದೆ, ನನಗೆ ಬಿಜೆಪಿಯವರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಹೇಳಿದರು.
ಅಧಿಕಾರ ನಡೆಸುವ ಸರ್ಕಾರಗಳು ಇಂತಹ ವಿಚಾರಗಳಿಗೆ ಪ್ರಚಾರ ಕೊಡಬಾರದು, ಎಲ್ಲಿ ಟೈಟ್ ಮಾಡಬೇಕೋ, ಅಲ್ಲಿ ಟೈಟ್ ಮಾಡಬೇಕು.
ಸರ್ಕಾರದಲ್ಲಿಯೇ ಲೋಪದೋಷಗಳಿದ್ದಾವೆ, ಅವರ ಲೋಪದೋಷಗಳನ್ನು ಮುಚ್ಚಿಕೊಳ್ಳಲು ಇಂತಹದ್ದಕ್ಕೆಲ್ಲಾ ಪ್ರಚಾರ ಕೊಡುತ್ತಿದ್ದಾರೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications