ಎಡೆಬಿಡದೆ ಸುರಿಯುತ್ತಿರುವ ಮಳೆಗೆ ದಿಢೀರ್ ಕುಸಿದ ಮಾವಿನ ಬೆಲೆ
ರಾಮನಗರ, ಜೂನ್.05: ಈ ಬಾರಿ ರಾಜ್ಯದಲ್ಲೇ ಮಾವಿನ ಫಸಲು ಬಹಳ ಜೋರಾಗಿಯೇ ಬಂದಿದೆ. ಆದರೆ ಒಂದು ದಿನ ಬಿಡುವು ಕೊಡದೇ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆದ ಮಾವಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ಬೀದಿ ಬೀದಿಗಳಲ್ಲಿ ಮಾವಿನ ಹಣ್ಣನ್ನು ಸುರಿಯಲಾಗಿದೆ.
ಇದರಿಂದಾಗಿ ಮಾವು ಬೆಳೆಯುವ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿರುವ ರಾಮನಗರದಲ್ಲಿ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಮಾವು ಬೆಳೆಯುವುದರಲ್ಲಿ ಕೋಲಾರ ಮೊದಲನೇ ಸ್ಥಾನದಲ್ಲಿದ್ದರೆ, ರೇಷ್ಮೆನಗರಿ ರಾಮನಗರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ.
ರೈತರ ಬಗ್ಗೆ ಭಾಷಣ ಬಿಗಿಯುವ ಶಾಸಕರಿಗೆ ಕೃಷಿ, ನೀರಾವರಿ ಬೇಡ್ವಾ, PWDನೇ ಬೇಕಾ?
ಇನ್ನು ಈ ಬಾರಿ ಜಿಲ್ಲೆಯಲ್ಲಿ ಮಾವು ಬೆಳೆಗಾರರ ಶ್ರಮಕ್ಕೆ ಉತ್ತಮವಾದ ಫಸಲು ಸಹ ಬಂದಿದೆ. ಆದರೆ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಾವಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.
ಈ ಬಾರಿ ಸುರಿದ ಮಳೆಗೆ ಮಾವಿನ ಫಸಲು ಪ್ರತಿ ವರ್ಷಕ್ಕಿಂತಲೂ ಹೆಚ್ಚಾಗಿ, ಚೆನ್ನಾಗಿಯೇ ಬಂತು. ಆದರೆ ಬೆಳೆಯ ಪ್ರಮಾಣ ಜಾಸ್ತಿಯಾದ ಪರಿಣಾಮ ಮಾರುಕಟ್ಟೆಯಲ್ಲಿ ಮಾವಿಗೆ ಬೆಂಬಲ ಬೆಲೆಸಿಗುತ್ತಿಲ್ಲ.
ಹಾಗೇ ಮಳೆಯಿಂದಾಗಿ ಮಾವಿನ ಕಾಯಿ ಬೇಗನೆ ಹಣ್ಣಾಗಿ ಕೊಳೆಯುತ್ತಿರುವುದರಿಂದ ಟನ್ಗಟ್ಟಲೆ ಬೆಳೆದ ಮಾವಿಗೆ ನ್ಯಾಯಬೆಲೆ ಸಿಗದಿರುವುದಕ್ಕೆ ರೈತರು ತಾವು ಬೆಳೆದ ಮಾವಿನಣ್ಣನ್ನ ಬೀದಿಯಲ್ಲೇ ಸುರಿದು ಹೋಗುತ್ತಿದ್ದಾರೆ.
ಮಾವು ಮೇಳಕ್ಕೂ ಕಂಟಕ ತಂದೊಡ್ಡಿತು ನಿಪಾಹ್ ವೈರಸ್
ಇನ್ನು ಈ ಬಾರಿಯ ಮಾವು ಬರಿ ನೀರು ತುಂಬಿಕೊಂಡು ದಪ್ಪವಾಗಿದೆ. ರುಚಿಯಾಗಿರದ ಕಾರಣ ಗ್ರಾಹಕರು ಮಾವನ್ನು ಕೊಳ್ಳುವಲ್ಲಿ ಹಿಂದೆ ಸರಿದಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಾದಾಮಿ ಕೆ.ಜಿ.ಗೆ 8 ರೂಪಾಯಿಯಾದರೆ, ಸೇಂದೂರಾ ಕೇವಲ 4 ರೂಪಾಯಿ, ತೋತಾಪುರಿ 3 ರೂಪಾಯಿಯಾಗಿದೆ. ಇದರಿಂದಾಗಿ ಮಾವು ಬೆಳೆಗಾರರು ಸಂಪೂರ್ಣವಾಗಿ ನೆಲಕಚ್ಚಿದ್ದಾರೆ. ಈ ಬಾರಿ ರಾಮನಗರ ಜಿಲ್ಲೆಯವರೇ ಆದ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಈ ಕೂಡಲೇ ಮಾವು ಬೆಳೆಗಾರರಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಮಾವು ಬೆಳೆಗಾರರು ಆಗ್ರಹಿಸಿದ್ದಾರೆ.
ರಾಮನಗರ ಮಾವು ಬೆಳೆಯುವುದರಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದ್ದರೂ ಇಲ್ಲೊಂದು ಮಾವು ಸಂಸ್ಕರಣಾ ಘಟಕ, ಮಾವಿನಣ್ಣಿನ ರಸ ಸಂಸ್ಕರಣಾ ಘಟಕವಿಲ್ಲ, ಹಾಗಾಗಿ ಈ ಅವಧಿಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ರಾಮನಗರ ಜಿಲ್ಲೆಗೆ ಈ ಎರಡು ಘಟಕಗಳನ್ನ ಸ್ಥಾಪಿಸುವ ಮೂಲಕ ಮಾವು ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಒಟ್ಟಾರೆ ಪ್ರತಿಬಾರಿ ಮಳೆಯಿಲ್ಲದೆ ಮಾವು ಬೆಳೆ ಸರಿಯಾಗಿ ಬರಲಿಲ್ಲ ಎನ್ನುತ್ತಿದ್ದ ರೈತರು, ಈ ಬಾರಿ ಮಳೆಯೇ ನಮ್ಮ ಒಳ್ಳೆಯ ಫಸಲನ್ನ ಕಿತ್ತುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.