ಕೆಪಿಸಿಸಿ ಸಾರಥಿ ಡಿಕೆಶಿ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಒಳ ಜಗಳ
ರಾಮನಗರ, ಜುಲೈ 31: ಕೆಪಿಸಿಸಿ ಸಾರಥಿ ಡಿ.ಕೆ. ಶಿವಕುಮಾರ್ ತವರು ಜಿಲ್ಲೆ ರಾಮನಗರ ಕಾಂಗ್ರೆಸ್ ಮುಖಂಡರ ಒಳ ಜಗಳ ಬೀದಿಗೆ ಬಂದಿದೆ. ಅದರಲ್ಲೂ ಡಿಕೆ ಸಹೋದರರ ಅಪ್ತ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಅವರನ್ನು ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಪರಾಜಿತ ಅಭ್ಯರ್ಥಿಗಳು ಆಗ್ರಹಿಸಿದರು.
ರಾಮನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ 2ನೇ ವಾರ್ಡ್ನ ಪರಾಜಿತ ಅಭ್ಯರ್ಥಿ ಶಿವಕುಮಾರಸ್ವಾಮಿ, 23ನೇ ವಾರ್ಡ್ನ ಪ್ಯಾರಿ ಫಯಾಜ್ ಹಾಗೂ 24ನೇ ವಾರ್ಡ್ ಅಭ್ಯರ್ಥಿ ಸಯೀದಾ ಬಾನು ಪತಿ ಫಯಾಜ್ ಪಾಷಾ ಪಕ್ಷ ವಿರೋಧಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ದೆಹಲಿವರೆಗೂ ತೆರಳಲು ತಯಾರಿರುವುದಾಗಿ ಎಚ್ಚರಿಕೆ ನೀಡಿದರು.
2ನೇ ವಾರ್ಡ್ನ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಶಿವಕುಮಾರಸ್ವಾಮಿ ಮಾತನಾಡಿ, "2ನೇ ವಾರ್ಡ್ನಿಂದ ಸ್ಪರ್ಧಿಸಲು ನಮ್ಮ ನಾಯಕರು ನನಗೆ ಬಿ ಫಾರ್ಮ್ ನೀಡಿದ್ದರು. ಆದರೆ, ರಾಮನಗರ ವಿಧಾನಸಭಾ ಕ್ಷೇತ್ರದ 2018ರ ಪರಾಜಿತ ಅಭ್ಯರ್ಥಿ ಇಕ್ಬಾಲ್ ಹುಸೇನ್, ನಗರಸಭೆ ಮಾಜಿ ಸದಸ್ಯ ಡಿ.ಕೆ.ಶಿವಕುಮಾರ್, ಮಾಜಿ ಅಧ್ಯಕ್ಷೆ ರತ್ನಮ್ಮ ಪತಿ ಪಾಪಣ್ಣ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ,'' ಎಂದು ಆರೋಪಿಸಿದರು.

ವಿರೋಧಿ ಅಭ್ಯರ್ಥಿಗಳಿಗೆ 5 ರಿಂದ 8 ಲಕ್ಷ ರೂ.
"ಪಕ್ಷ ವಿರೋಧಿ ಚಟುವಟಿಕೆ ನಡೆಸಿ ನನ್ನ ಸೋಲಿಗೆ ಕಾರಣರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧ್ಯಕ್ಷರು ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ ಮತ್ತಿತರರಿಗೆ ದೂರು ನೀಡಿದ್ದೇನೆ. ಆದರೆ ಸಾಕ್ಷಾಧಾರ ಕೊರತೆಯ ನೆಪವೊಡ್ಡಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ,'' ಎಂದರು.
"ರಾಮನಗರ ನಗರಸಭೆ ಚುನಾವಣೆಯಲ್ಲಿ 2, 5, 21, 23, 24, ಮತ್ತು 27ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ವಿರೋಧಿ ಅಭ್ಯರ್ಥಿಗಳಿಗೆ 5 ರಿಂದ 8 ಲಕ್ಷ ರೂಪಾಯಿಗಳವರೆಗೆ ನೀಡಲಾಗಿದೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಇದೀಗ ಇಕ್ಬಾಲ್ ನಡೆಯನ್ನು ನೋಡಿದರೆ ನಮ್ಮ ಆರೋಪ ಸತ್ಯ,'' ಎಂದು ಸಾಬೀತಾಗುತ್ತಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂಬ ಗುರಿ
"ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಮಹದಾಸೆಯಿಂದ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂಬ ಗುರಿಯೊಂದಿಗೆ ಹಗಲಿರುಳು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಆದರೆ, ಇಕ್ಬಾಲ್ ಹುಸೇನ್ ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಮೂಲಕ ಪಕ್ಷದಲ್ಲಿ ಒಗ್ಗಟ್ಟನ್ನು ಒಡೆಯುತ್ತಿದ್ದಾರೆ.''
"ಇಕ್ಬಾಲ್ ಹುಸೇನ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದಕ್ಕೆ ಆಡಿಯೋ, ವಿಡಿಯೋ ರೆಕಾರ್ಡ್ಗಳು, ಭಾವಚಿತ್ರಗಳು ಸೇರಿದಂತೆ ಹಲವಾರು ಸಾಕ್ಷಿಗಳು ಲಭ್ಯವಾಗಿವೆ. ಅವುಗಳನ್ನು ಪಕ್ಷದ ಶಿಸ್ತು ಸಮಿತಿಯ ಮುಂದೆ ಹಾಜರುಪಡಿಸಲಾಗುವುದು,'' ಎಂದರು.

ಪಕ್ಷದಲ್ಲಿ ಗುಂಪುಗಾರಿಕೆ ಸೃಷ್ಟಿ
"ಪಕ್ಷದಲ್ಲಿ ಗುಂಪುಗಾರಿಕೆ ಸೃಷ್ಟಿಸುತ್ತಿದ್ದಾರೆ. ಜಾತಿ ವೈಮನಸ್ಯ ಬಿತ್ತುತ್ತಿರುವ ಇಕ್ಬಾಲ್ ಹುಸೇನ್ರನ್ನು ಉಚ್ಛಾಟಿಸುವಂತೆ ಶಿಸ್ತು ಸಮಿತಿ ಅಧ್ಯಕ್ಷರಾದ ರೆಹಮಾನ್ ಖಾನ್ರನ್ನು ಆಗ್ರಹಿಸುತ್ತೇವೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಸಾಕ್ಷ್ಯಾಧಾರಗಳನ್ನು ದೆಹಲಿವರೆಗೂ ಕೊಂಡೊಯ್ದು ಹೋರಾಟ ಮಾಡಲಾಗುವುದು,'' ಎಂದು ರಾಜ್ಯ ನಾಯಕರಿಗೆ ಎಚ್ಚರಿಕೆ ನೀಡಿದರು.
23ನೇ ವಾರ್ಡ್ನ ಪರಾಜಿತ ಅಭ್ಯರ್ಥಿ ಪ್ಯಾರಿ ಫಯಾಜ್ ಮಾತನಾಡಿ, "ಸ್ವಜಾತಿ ಹಾಗೂ ಸ್ವಪಕ್ಷೀಯ ಅಭ್ಯರ್ಥಿಯನ್ನೇ ಸೋಲಿಸಲು ಸಂಚು ನಡೆಸಿರುವ ಇಕ್ಬಾಲ್ ಹುಸೇನ್ ಒಬ್ಬ ಮೀರ್ ಸಾದಿಕ್,'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಕ್ಬಾಲ್ ಹುಸೇನ್ ವಿರುದ್ಧ ಕ್ರಮ
"ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿರುವ ಇಕ್ಬಾಲ್ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಮ್ಮೆಲ್ಲಾ ನಾಯಕರಿಗೂ ದೂರು ನೀಡಿದ್ದೇನೆ. ಒಂದು ವೇಳೆ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ,'' ಎಂದು ಪರಾಜಿತ ಅಭ್ಯರ್ಥಿ ಪ್ಯಾರಿ ಪಯಾಜ್ ಎಚ್ಚರಿಸಿದರು.
ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷ ಸಂಘಟಿಸುವ ಬದಲಾಗಿ ಇಕ್ಬಾಲ್ ಹುಸೇನ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ಪಕ್ಷದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಪಕ್ಷವನ್ನು ಸಂಘಟಿಸುವ ಬದಲಾಗಿ ಹಾಳು ಮಾಡುತ್ತಿದ್ದಾರೆ. ಪಕ್ಷದ ಉಳಿವಿಗಾಗಿ ಇಕ್ಬಾಲ್ ಹುಸೇನ್ರನ್ನು ಕೂಡಲೇ ಉಚ್ಛಾಟಿಸಬೇಕು ಎಂದು ಮುಖಂಡರು ವರಿಷ್ಠರನ್ನು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹರೀಶ್, ಶಿವಲಿಂಗಯ್ಯ, ಸನಾವುಲ್ಲಾ, ಜಾವೇದ್ ಖಾನ್, ಚಂದ್ರಶೇಖರ್, ಇಲಿಯಾಸ್ ಪಾಷಾ ಮತ್ತಿತರರು ಇದ್ದರು.












Click it and Unblock the Notifications