ಆನಂದ್ ಸಿಂಗ್-ಕಂಪ್ಲಿ ಗಣೇಶ್ ಹೊಡೆದಾಟ: ಚಾರ್ಜ್ಶೀಟ್ ಸಲ್ಲಿಕೆ
ರಾಮನಗರ, ಡಿಸೆಂಬರ್ 14: ಸಮ್ಮಿಶ್ರ ಸರ್ಕಾರದ ರೆಸಾರ್ಟ್ ವಾಸ್ತವ್ಯದ ವೇಳೆ ಶಾಸಕರಾದ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ಅವರ ಹೊಡೆದಾಟ ಪ್ರಕರಣದ ಕುರಿತು ಬಿಡದಿ ಪೊಲೀಸರು 30 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಚಾರ್ಜ್ಶೀಟ್ನಲ್ಲಿ ಗಲಾಟೆ ಸಂದರ್ಭದಲ್ಲಿ ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿದ್ದ 41 ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಈ ವೇಳೆ ಆನಂದ್ ಸಿಂಗ್ ಮತ್ತು ಕಂಪ್ಲಿಗಣೇಶ್ ಇಬ್ಬರೂ ಮದ್ಯಪಾನ ಮಾಡಿದ್ದರು ಎಂದು ಹೇಳಲಾಗಿದೆ.
ಕುಡಿದ ಮತ್ತಿನಲ್ಲಿದ್ದ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ಇಬ್ಬರೂ ಕುತ್ತಿಗೆ ಪಟ್ಟಿ ಹಿಡಿದು ಕೂಗಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಜ. 16ರಂದು ರೆಸಾರ್ಟ್ನಲ್ಲಿ ಶಾಸಕರ ದಂಡು ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಈ ಗಲಾಟೆ ನಡೆದಿತ್ತು. ಆಗ ಕಂಪ್ಲಿ ಗಣೇಶ್ ಅವರು ಬಾಟಲಿಯಿಂದ ಆನಂದ್ ಸಿಂಗ್ ಅವರಿಗೆ ಹೊಡೆದಿದ್ದರು ಎನ್ನಲಾಗಿದೆ. ಇದರಿಂದ ಆನಂದ್ ಸಿಂಗ್ ಕಣ್ಣು ಮತ್ತು ತಲೆಭಾಗಕ್ಕೆ ಪೆಟ್ಟಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆ ನಂತರ ಕಂಪ್ಲಿ ಗಣೇಶ್ ನಾಪತ್ತೆಯಾಗಿದ್ದರು. ಅವರಿಗಾಗಿ ಪೊಲೀಸರು ಅಕ್ಕಪಕ್ಕದ ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದರು. ಒಂದು ತಿಂಗಳ ಬಳಿಕ ಫೆ. 20ರಂದು ಅವರನ್ನು ಗುಜರಾತ್ನಲ್ಲಿ ಬಂಧಿಸಿ ಕರೆತರಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಏಪ್ರಿಲ್ 24ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು.












Click it and Unblock the Notifications