ರಾಯಚೂರು ಜಿಲ್ಲೆಯ 178 ಗ್ರಾಮ ಪಂಚಾಯತಿಗಳ ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆಗೆ ಮೀಸಲು ಪ್ರಕಟ, ಸದಸ್ಯರು ನಾಪತ್ತೆ
ರಾಯಚೂರು, ಜುಲೈ, 27: ಜಿಲ್ಲೆಯ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಮೀಸಲು ಪ್ರಕಟವಾಗಿದ್ದೇ ತಡ ಕೆಲ ಗ್ರಾ.ಪಂ.ಗಳ ಸದಸ್ಯರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.
ಶಾಸಕರು ಮಾರ್ಗ ಹಾಕಿ ಕೊಟ್ಟಿರುವ ರೆಸಾರ್ಟ್ ರಾಜಕಾರಣಕ್ಕೆ ಇಲ್ಲವೇ ಪುಕ್ಕಟೆಯಾಗಿ ಧಾರ್ಮಿಕ ಕೇಂದ್ರ , ಪ್ರವಾಸಿ ತಾಣಗಳಲ್ಲಿ ಮೋಜು ಮಸ್ತಿ ಮಾಡಲು ಹೋಗಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯ 7 ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಈ ಬಾರಿ ಸಾಮಾನ್ಯ ಸ್ಥಾನಕ್ಕೆ ಹೆಚ್ಚು ಮೀಸಲಾತಿ ಸಿಕ್ಕಿದ್ದು, ಅಧ್ಯಕ್ಷ ಸ್ಥಾನ ಪಡೆಯಲು ಕೆಲವರು ಗ್ರಾಮ ಪಂಚಾಯತಿ ಸದಸ್ಯರನ್ನು ಧಾರ್ಮಿಕ ಕೇಂದ್ರ , ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಿದ್ದಾರೆ. ಅವರ ಖರ್ಚು ವೆಚ್ಚವನ್ನೆಲ್ಲ ಅಧ್ಯಕ್ಷ ಆಕಾಂಕ್ಷಿಗಳು ಭರಿಸುತ್ತಿದ್ದರೆ ಎನ್ನಲಾಗಿದೆ.

ಮತ್ತೆ ಕೆಲ ಆಕಾಂಕ್ಷಿಗಳು ಸ್ಥಳೀಯವಾಗಿ ಪ್ರಸಿದ್ಧಿ ಪಡೆದಿರುವ ಬಲಿಷ್ಠ ದೇವರ ಮೊರೆ ಹೋಗಿ ಸದಸ್ಯರಿಂದ ಆಣೆ ಪ್ರಮಾಣ ಮಾಡಿಸಿ ಚುನಾವಣೆಯಲ್ಲಿ ತಮ್ಮನ್ನು ಕೈ ಬಿಡುವುದಿಲ್ಲ ಎಂಬ ಬಗ್ಗೆ ಭರವಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ಮುಂಗಡ ಹಣ ನೀಡಿ ಉಳಿದದ್ದನ್ನು ನಂತರ ಕೊಡುವುದಾಗಿ ಹೇಳಿ ಅಧ್ಯಕ್ಷ ಸ್ಥಾನ ಪಡೆಯಲು ಕಸರತ್ತು ನಡೆಸಿರುವುದು ಕಂಡುಬಂದಿದೆ. ಆಣೆ ಪ್ರಮಾಣ ಮಾಡಿಸಿದ ಧೈರ್ಯದಲ್ಲಿ ಕೆಲ ಸದಸ್ಯರನ್ನು ಸಾರ್ವಜನಿಕವಾಗಿ ಮುಕ್ತವಾಗಿ ಬಿಟ್ಟಿದ್ದರೆ ಕೆಲವರನ್ನು ಪ್ರವಾಸಕ್ಕೆ ಕರೆದೊಯ್ದಿದ್ದಾರೆ.
ಮತ್ತೆ ಕೆಲವರು ಪ್ರತಿಸ್ಪರ್ಧಿ ಯಾವ ಸಂದರ್ಭದಲ್ಲಿ ಯಾವ ದಾಳ ಉರುಳಿಸಬಹುದು ಎಂಬ ಆತಂಕದಲ್ಲಿದ್ದಾರೆ. ಇನ್ನೂ ಕೆಲವರು ನನಗೆ ಬೆಂಬಲ ಸೂಚಿಸಬೇಕು ಎಂದು ದೇಗುಲಗಳಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ಜಿಲ್ಲೆಯ 178 ಗ್ರಾಮ ಪಂಚಾಯತಿಗಳಿಗೆ ಮೀಸಲು ಪ್ರಕಟಿಸಿದ್ದು, ಕೇವಲ ಸಿಂಧನೂರು ತಾಲೂಕಿನ ಗಾಂಧಿನಗರ ಗ್ರಾಮ ಪಂಚಾಯತಿ ಮಾತ್ರ ಹಿಂದುಳಿದ ವರ್ಗದವರಿಗೆ ಮೀಸಲು ನೀಡಲಾಗಿದೆ. ಉಳಿದ ಕಡೆ ಆದ್ಯತೆ ಮೇರೆಗೆ ಮೀಸಲಾತಿ ಪ್ರಕಟಿಸಲಾಗಿದ್ದು, ಅಧ್ಯಕ್ಷ ಉಪಾಧ್ಯಕ್ಷ ಗಾದಿಗೆ ಒಳಗೊಳಗೆ ಕಸರತ್ತು ನಡೆದಿದೆ.
ಅಧ್ಯಕ್ಷ ಗದ್ದಿಗೆ ಮೇಲೆ ಕಣ್ಣಿಟ್ಟಿರುವ ಸದಸ್ಯರು ಪ್ರವಾಸದ ಖರ್ಚು ವೆಚ್ಚ ನೋಡಿಕೊಳ್ಳುತ್ತಿದ್ದು, ಪ್ರವಾಸಕ್ಕೆ ತೆರಳಿದ ಸದಸ್ಯರು ಹಾಗೂ ಮಹಿಳಾ ಸದಸ್ಯರ ಸಂಬಂಧಿಕರ ಮೊಬೈಲ್ಗಳು ಎರಡು-ಮೂರು ದಿನಗಳಿಂದ ನಾಟ್ ರಿಚೆಬಲ್ ಬರುತ್ತಿದ್ದು, ಎಲ್ಲ ಸದಸ್ಯರ ಒಗ್ಗಟ್ಟು ಕಾಪಾಡಿಕೊಂಡು ಎದುರಾಳಿ ತಂಡಕ್ಕೆ ಸಿಗದಂತೆ ನೋಡಿಕೊಳ್ಳುವ ಜಾಣತನದ ನಡೆಯನ್ನು ಕೆಲವೆಡೆ ಅನುಸರಿಸಲಾಗುತ್ತಿದೆ.
ಇನ್ನು ಮಹಿಳಾ ಸದಸ್ಯರ ಗಂಡಂದಿರು ಕೂಡ ಪ್ರವಾಸ ಭಾಗ್ಯ ಪಡೆದಿದ್ದು, ಎದುರಾಳಿ ತಂಡದಲ್ಲಿರುವ ಮಹಿಳಾ ಸದಸ್ಯರು ತಮ್ಮ ಪತಿಯ ಅಪ್ಪಣೆಯಂತೆ ಪ್ರವಾಸದಲ್ಲಿರುವವರ ಕಡೆ ಗುರುತಿಸಿಕೊಂಡು ಮಹಿಳಾ ಸದಸ್ಯರಿಗೆ ಸಂಖ್ಯಾಬಲದ ಕೊರತೆ ಸರಿಪಡಿಸಿಕೊಳ್ಳಲು ಕಿರಿಕಿರಿ ಶುರುವಿಟ್ಟು ಕೊಂಡಿದ್ದಾರೆ. ಅಲ್ಲದೆ ಅವರ ಸಂಬಂಧಿಕರ ಮೆನಯವರಿಗೆ ಅವರ ಕೊಟ್ಟ ಹಣಕ್ಕಿಂತ ಒಂದೆರಡು ಪಟ್ಟು ಜಾಸ್ತಿ ಕೊಡುವುದಾಗಿ ಭರವಸೆ ನೀಡುತ್ತಿರುವುದು ಗೋಚರಿಸಿದೆ. ಒಟ್ಟಾರೆ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲು ತೀವ್ರ ಲಾಬಿಗಳು ನಡೆದಿವೆ.
ಜಿಲ್ಲೆಯ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲು ಪ್ರಕಟ ಮಾಡಿದ್ದೇ ತಡ ಗ್ರಾಮ ಪಂಚಾಯತಿ ಸದಸ್ಯರನ್ನು ತಡರಾತ್ರಿ ವೇಳೆಯೇ ದೂರದ ದಾಂಡೇಲಿ, ಗೋವಾ, ಬೆಂಗಳೂರು, ಧರ್ಮಸ್ಥಳ ಹಾಗೂ ಪಶ್ಚಿಮ ಘಟ್ಟದ ಪ್ರವಾಸಿ ಸ್ಥಳಗಳಿಗೆ ಕರೆದೊಯ್ಯಲಾಗಿದೆ. ಇನ್ನು ಕೆಲವು ಗ್ರಾಮ ಪಂಚಾಯತಿ ಸದಸ್ಯರನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯ ರೇಸಾರ್ಟ್ ಸೇರಿದಂತೆ ಇತರ ಕಡೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಅಲ್ಲದೇ ಸದಸ್ಯರ ಮೊಬೈಲ್ಗಳನ್ನು ಕಿತ್ತುಕೊಂಡು ಮೋಜು ಮಸ್ತಿ ಮಾಡುವಂತೆ ವ್ಯವಸ್ಥೆ ಕಲ್ಪಿಸಿದ್ದಾರೆ ಎನ್ನಲಾಗಿದೆ. ಬಹುತೇಕ ಮಹಿಳಾ ಗ್ರಾಮ ಪಂಚಾಯತಿ ಸದಸ್ಯರ ಬದಲಾಗಿ ಅವರ ಕುಟುಂಬದ ಗಂಡು ಮಕ್ಕಳಿಗೆ ಪ್ರವಾಸದ ಭಾಗ್ಯ ಸಿಕ್ಕಿದೆ. ಇನ್ನೂ ಕೆಲವು ಕಡೆ ಹೆಂಡತಿಯರ ಬದಲಾಗಿ ಗಂಡಂದಿರು ಪ್ರವಾಸಕ್ಕೆ ತೆರಳಿದ್ದಾರೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳೇ ಖರ್ಚು ವೆಚ್ಚ ಭರಿಸಿದ್ದಾರೆ. ಸಿಕ್ಕಿದ್ದೇ ಅವಕಾಶ ಎಂದು ಮಹಿಳಾ ಸದಸ್ಯರ ಗಂಡಂದಿರು ಫುಲ್ ಜಾಲಿ ಮೂಡ್ನಲ್ಲಿದ್ದಾರೆ ಎನ್ನಲಾಗಿದೆ.












Click it and Unblock the Notifications