ನಿತೀಶ್ಗೆ ಇನ್ನು ಆಡಳಿತ ಮಾಡಲು ಶಕ್ತಿಯಿಲ್ಲ, ಅವರಿಗೆ ಬೀಳ್ಕೊಡುಗೆ ಖಚಿತ: ತೇಜಸ್ವಿ
ಪಟ್ನಾ, ನವೆಂಬರ್ 2: 'ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಇನ್ನು ಮುಂದೆ ಬಿಹಾರದ ಆಡಳಿತವನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಅವರ ಬೀಳ್ಕೊಡುಗೆ ಖಾತರಿಯಾಗಿದೆ' ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ.
ಕ್ರಿಕೆಟ್ ಕ್ಷೇತ್ರದಲ್ಲಿನ ತಮ್ಮ ಚಟುವಟಿಕೆ ಕುರಿತು ಅಣಕಿಸಿದ್ದಕ್ಕಾಗಿಯೂ ನಿತೀಶ್ ಕುಮಾರ್ ಅವರಿಗೆ ತೇಜಸ್ವಿ ತಿರುಗೇಟು ನೀಡಿದ್ದಾರೆ.
'ನಿತೀಶ್ ಕುಮಾರ್ ಅವರಿಗೆ ಬಿಹಾರವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಅವರು ತೀರಾ ಬಳಲಿದ್ದಾರೆ. ಶಿಕ್ಷಣ, ಆರೋಗ್ಯ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕ್ಷೇತ್ರಗಳಲ್ಲಿ ಉದ್ಯೋಗಗಳು ಖಾಲಿ ಇವೆ. ಬಿಹಾರದ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಕೇವಲ 77 ಮಂದಿ ಪೊಲೀಸರಿದ್ದಾರೆ. ಮಣಿಪುರವೂ ಲಕ್ಷ ಜನಸಂಖ್ಯೆಗೆ ಹೆಚ್ಚು ಪೊಲೀಸರನ್ನು ಹೊಂದಿದೆ. ಇದು ಹೇಗೆ ಸಾಧ್ಯ? ನಮಗೆ ಒಂದು ಅವಕಾಶ ನೀಡಿ ಎಂದು ಜನರಿಗೆ ಕೇಳುತ್ತಿದ್ದೇವೆ. ನಿತೀಶ್ 15 ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಮಾಡಿ ತೋರಿಸುತ್ತೇವೆ. ಅವರ ಬೀಳ್ಕೊಡುಗೆ ಖಚಿತವಾಗಿದೆ. ಮಹಾಘಟಬಂಧನ ಸರ್ಕಾರ ಬರುತ್ತಿದೆ' ಎಂದು ತೇಜಸ್ವಿ ಹೇಳಿದ್ದಾರೆ.

'ನಿತೀಶ್ ಕುಮಾರ್ ಅವರಿಗೆ ಏನಾಗಿದೆ? ಅಷ್ಟು ಅನುಭವಿ ಇರುವ ರಾಜಕಾರಣಿಯಾಗಿ ಹೀಗೆಲ್ಲ ಮಾತನಾಡುತ್ತಾರೆಯೇ? ಕ್ರಿಕೆಟ್ ಮತ್ತು ಸಿನಿಮಾಗಳಿಂದ ನಾವು ರಾಜಕೀಯಕ್ಕೆ ಬರಬಾರದೇ? ವೈದ್ಯರು, ಎಂಜಿನಿಯರ್ಗಳು ಕೂಡ ರಾಜಕೀಯಕ್ಕೆ ಬರಬಾರದು ಎಂದು ಹೇಳುತ್ತಾರೆಯೇ?' ಎಂದು ಕಿಡಿಕಾರಿದ್ದಾರೆ.
'ಕ್ರೀಡಾಸ್ಫೂರ್ತಿ, ನಾಯಕತ್ವದ ಗುಣಗಳು, ತಂಡದ ಕಾರ್ಯ, ಇದೆಲ್ಲವನ್ನೂ ನಾನು ಕ್ರಿಕೆಟ್ನಿಂದ ಕಲಿತಿದ್ದೇನೆ. ಮುಖ್ಯವಾಗಿ ನಾನು ಕ್ರಿಕೆಟ್ನಿಂದ ಅತಿ ದೊಡ್ಡ ಅವಕಾಶವನ್ನು ಪಡೆದುಕೊಂಡಿದ್ದೆ' ಎಂದಿದ್ದಾರೆ.
ಭಾನುವಾರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಿತೀಶ್, ತಮ್ಮ ಯುವ ಎದುರಾಳಿಗಳಾದ ತೇಜಸ್ವಿ ಯಾದವ್ ಮತ್ತು ಚಿರಾಗ್ ಪಾಸ್ವಾನ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. 'ಒಬ್ಬ ಕ್ರಿಕೆಟ್ನಿಂದ ಬಂದರೆ, ಇನ್ನೊಬ್ಬ ಸಿನಿಮಾದಿಂದ ಬಂದಿದ್ದಾರೆ. ಇದರಲ್ಲೇನು ಮುಖ್ಯ ವಿಷಯವಿದೆ? ಅವರು ತಮ್ಮ ಪ್ರಚಾರ ಪಡೆದುಕೊಳ್ಳಲಿ' ಎಂದು ಟೀಕಿಸಿದ್ದರು.












Click it and Unblock the Notifications