ದೇಶವನ್ನು ಉದ್ದೇಶಿಸಿ 'ನಮೋ' ಮಾತು: ಐಕ್ಯತೆಯ ಸಂದೇಶ ಸಾರಿದ ಪ್ರಧಾನಿ
ದೆಹಲಿ, ನವೆಂಬರ್ 09: ದೇಶದ ಜನತೆಯ ಕುತೂಹಲ ಕೆರಳಿಸಿದ್ದ ಆಯೋಧ್ಯೆಯ ರಾಮ ಜನ್ಮಭೂಮಿ ಭೂ ವಿವಾದ ಇತ್ಯರ್ಥಗೊಂಡಿದೆ. ಇದೇ ವೇಳೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 09ರಂದು ಭಾರತದ ಪಾಲಿಗೆ ಹೊಸ ಇತಿಹಾಸ ಸೃಷ್ಟಿಯಾಗಿದೆ ಎಂದರು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ನ್ಯಾಯಪೀಠವು ಇಂದು ಅಂತಿಮ ತೀರ್ಪು ಪ್ರಕಟಿಸಿತು. ವಿವಾದಿತ ಭೂಮಿ ಮಂದಿರಕ್ಕೆ, ಮಸೀದಿಗೆ ಪ್ರತ್ಯೇಕ ಜಾಗ ಹಂಚಿಕೆ ಮಾಡಿ ತೀರ್ಪು ನೀಡಲಾಗಿತ್ತು. ವರ್ಷಾನುವರ್ಷದಿಂದ ಕಗ್ಗಂಟಾಗಿದ್ದ ಈ ಸಿವಿಲ್ ಕೇಸಿಗೆ ಸಂಬಂಧಿಸಿದಂತೆ ತಕರಾರು ಅರ್ಜಿ ಸಲ್ಲಿಸಿದ್ದ ಅಯೋಧ್ಯಾ ನಿವಾಸಿ ದರ್ಜಿ ಕುಟುಂಬಸ್ಥರು ಸಹ ಸುಪ್ರೀಂಕೋರ್ಟಿನ ತೀರ್ಪನ್ನು ಸ್ವಾಗತಿಸಿದ್ದಾರೆ.

ಶಾಂತಿ-ಸೌಹಾರ್ದತೆ ಸಂಕೇತ ಎಂದ ಪ್ರಧಾನಿ
ದೆಹಲಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿದರು. ದಶಕಗಳಿಂದ ನಡೆಯುತ್ತಿದ್ದ ವಿಚಾರಣೆ ಇಂದು ಮುಕ್ತಾಯವಾಗಿದೆ. ವಿಭಿನ್ನ ಪಥದಲ್ಲಿದ್ದ ಎರಡು ಸಮುದಾಯಗಳು ಒಂದಾಗಿವೆ. ಅಯೋಧ್ಯೆ ತೀರ್ಪು ಶಾಂತಿ ಮತ್ತು ಸೌಹಾರ್ದತೆಯ ಸಂಕೇತ ಎಂದರು.

ಐಕ್ಯತೆಯ ಸಂದೇಶ ಸಾರಿದ ಪ್ರಧಾನಿ ಮೋದಿ
ಈ ಹಿಂದೆ ನವೆಂಬರ್,09ರಂದು ಬರ್ಲಿನ್ ಗೋಡೆಯನ್ನು ಕೆಡವಲಾಗಿತ್ತು. ಇಂದು ಕೂಡಾ ನವೆಂಬರ್.09 ಆಗಿದ್ದು, ಭಾರತವನ್ನು ಕಟ್ಟಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ. ಭವಿಷ್ಯದ ಭಾರತಕ್ಕಾಗಿ ಈಗ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ. ದೇಶದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು.

ಐತೀರ್ಪಿಗೆ ತುಂಬು ಹೃದಯದ ಸ್ವಾಗತ ಎಂದ ಎಲ್.ಕೆ.ಅಡ್ವಾಣಿ
ಅಯೋಧ್ಯೆಯ ರಾಮಮಂದಿರದ ಕುರಿತು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ಹಿನ್ನೆಲೆ ತೀರ್ಪನ್ನು ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಸ್ವಾಗತಿಸಿದ್ದಾರೆ. ನಾನು ಕೋರ್ಟ್ ತೀರ್ಪನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ದೇಶದ ಎಲ್ಲರೂ ಕೋರ್ಟ್ ತೀರ್ಪನ್ನು ಸ್ವಾಗತಿಸಬೇಕು ಎಂದು ಎಲ್.ಕೆ.ಅಡ್ವಾಣಿ ಮನವಿ ಮಾಡಿಕೊಂಡರು.

ಐತೀರ್ಪನ್ನು ಸ್ವಾಗತಿಸಿದ ಸಿಎಂ ಯೋಗಿ ಆದಿತ್ಯನಾಥ್
ಐತಿಹಾಸಿಕ ತೀರ್ಪು ಹೊರಬೀಳುತ್ತಿದ್ದಂತೆ ದೇಶದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗುವ ಆತಂಕವಿತ್ತು. ಅದಕ್ಕಾಗಿ ದೇಶಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ದೇಶದ ಬಹುತೇಕ ಕಡೆಗಳಲ್ಲಿ ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಲಾಗಿತ್ತು. ಇದರ ಮಧ್ಯೆ ಸುಪ್ರೀಂಕೋರ್ಟ್ ತೀರ್ಪು ಹೊರಡಿಸಿದಾಗಲೂ ದೇಶದಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆದಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದ ಎಲ್ಲರಿಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧನ್ಯವಾದ ಆರ್ಪಿಸಿದರು.












Click it and Unblock the Notifications