ರಾಜ್ಯಕ್ಕೆ ಮತ್ತೆ ಮಂಗಳಾರತಿ ಮಾಡಿಸುವಲ್ಲಿ ಜಯಾಲಲಿತಾ ಯಶಸ್ವಿ
ನವದೆಹಲಿ, ಸೆ 30: ತಮಿಳುನಾಡಿನಲ್ಲಿ ಸೆಲ್ವಿ ಜಯಲಲಿತಾ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ಒಂದಲ್ಲಾ ಒಂದು ರೀತಿಯಲ್ಲಿ ಮುಖಭಂಗ ಅನುಭವಿಸುವಂತಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ಬದಲಾಯಿಸಿದ ಕರ್ನಾಟಕ ಸರಕಾರದ ಆದೇಶವನ್ನು ಸುಪ್ರೀಂಕೋರ್ಟ್ ಅನೂರ್ಜಿತಗೊಳಿಸಿದೆ.
ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಭವಾನಿ ಸಿಂಗ್ ಅವರನ್ನು ಕರ್ನಾಟಕ ಸರಕಾರ ಬದಲಾಯಿಸಿತ್ತು. ಇದರಿಂದ ಸಿಟ್ಟಿಗೆದ್ದ ಜಯಲಲಿತಾ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಈ ಸಂಬಂಧ ವಾದವಿವಾದ ಆಲಿಸಿದ ಬಿ ಎಸ್ ಚೌಹಾಣ್ ಅವರನ್ನು ಒಳಗೊಂಡ ಸರ್ವೋಚ್ಚ ನ್ಯಾಯಾಲಯದ ಪೀಠ, ಭವಾನಿ ಸಿಂಗ್ ಅವರನ್ನು ಬದಲಾಯಿಸಿದ್ದು ತಪ್ಪು ಎಂದು ಕರ್ನಾಟಕ ಸರಕಾರಕ್ಕೆ ಚಾಟಿ ಬೀಸಿದೆ.
ನ್ಯಾ. ಬಾಲಕೃಷ್ಣ ಅವರ ಸೇವಾ ಅವಧಿಯನ್ನು ವಿಸ್ತರಿಸ ಬೇಕೆನ್ನುವ ಜಯಲಲಿತಾ ಅವರ ಮನವಿಗೆ, ಕರ್ನಾಟಕ ಸರಕಾರದ ಜೊತೆಗೆ ಮಾತುಕತೆ ನಡೆಸಿ ರಾಜ್ಯ ಹೈಕೋರ್ಟ್ ಈ ಬಗ್ಗೆ ನಿರ್ಧರಿಸಲಿ ಎಂದು ಆದೇಶ ನೀಡಿದ್ದಾರೆ.
ಜಯಲಲಿತಾ ಕರ್ನಾಟಕದ ವಿರುದ್ದ ಕ್ಯಾತೆ ತೆಗೆಯುವುದು ಇದೇನು ಹೊಸದೇನಲ್ಲ. ಕೆಲವೊಂದು ಝಲಕ್ ಸ್ಲೈಡಿನಲ್ಲಿದೆ ನೋಡಿ..

ಅರ್ಕಾವತಿ ಯೋಜನೆ
ಅರ್ಕಾವತಿ ಪುನಶ್ಚೇತನ ಯೋಜನೆಗೆ ಜಯಲಲಿತಾ ವಿರೋಧ ವ್ಯಕ್ತಪಡಿಸಿದ್ದರು. ಕಾವೇರಿ ನದಿ ಪಾತ್ರದಲ್ಲಿ ಯೋಜನೆ ಕೈಗೊಳ್ಳಲು ತಮ್ಮ ಒಪ್ಪಿಗೆ ಪಡೆದಿಲ್ಲ ಎಂದು ಆರೋಪಿಸಿ ಜಯಾ ಪ್ರಧಾನಿಗೆ ಪತ್ರ ಬರೆದಿದ್ದರು. ಕಾವೇರಿ ನದಿಯ ಸಹಜ ಹರಿವಿಗೆ ಅರ್ಕಾವತಿ ಹಾಗೂ ಹೇಮಾವತಿ ನದಿ ಕಾಲುವೆಗಳ ಆಧುನೀಕರಣದಿಂದ ಅಡಚಣೆ ಉಂಟಾಗಲಿದೆ. ಕಾವೇರಿ ನದಿ ಪಾತ್ರದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಕರ್ನಾಟಕ ತಮ್ಮ ಅನುಮತಿ ಪಡೆಯಬೇಕಿತ್ತು ಎಂದು ಕ್ಯಾತೆ ತೆಗೆದಿದ್ದರು.

ಕರ್ನಾಟಕದ ಕರೆಂಟ್ ಮೇಲೆ ಕಣ್ಣು
ಕೇಂದ್ರದಿಂದ ಕರ್ನಾಟಕ ಪಾಲಿಗೆ ಸಿಗಬೇಕಾದ ವಿದ್ಯುತ್ ಮೇಲೂ ಜಯಾ ಕಣ್ಣು ಹಾಕಿದ್ದಾರೆ. ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಸೆಂಟ್ರಲ್ ಪವರ್ ಗ್ರಿಡ್ನಿಂದ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣದಿಂದ ತನಗೆ ಸಿಂಹಪಾಲು ಬೇಕೆಂದು ಆಗ್ರಹಿಸಿ ಪ್ರಧಾನಿ ಮನಮೋಹನಸಿಂಗ್ ಅವರಿಗೆ ಜಯಲಲಿತಾ ಪತ್ರ ಬರೆದಿದ್ದರು.

ಜಲ ವಿದ್ಯುತ್ ಯೋಜನೆ
ಕಾವೇರಿ ಜಲಾನಯನ ಪ್ರದೇಶದಲ್ಲಿ ಕರ್ನಾಟಕ ಜಲವಿದ್ಯುತ್ ಯೋಜನೆ ಪ್ರಾರಂಭಿಸದಂತೆ ನಿರ್ದೇಶನ ನೀಡಬೇಕೆಂದು ಪ್ರಧಾನಿಗೆ ಜಯಾ ಪತ್ರ ಬರೆದಿದ್ದರು. ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವ ಜಯಲಲಿತಾ, ಕಾವೇರಿ ಜಲಾನಯದ ಪ್ರದೇಶದಲ್ಲಿ ಜಲ ವಿದ್ಯುತ್ ಯೋಜನೆ ಆರಂಭಿಸುವ ಮೂಲಕ ಕರ್ನಾಟಕ ನ್ಯಾಯಮಂಡಳಿ ತೀರ್ಪು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದರು.

ಬೆಳೆ ನಷ್ಟ ತುಂಬಿ ಕೊಡ ಬೇಕು
ಕರ್ನಾಟಕಕ್ಕೆ ಮುಂಗಾರು ಪ್ರವೇಶಕ್ಕೂ ಮುನ್ನವೇ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ತಮಿಳುನಾಡು ಸರ್ಕಾರ ಮತ್ತೆ ನಾಂದಿ ಹಾಡಿತ್ತು. ನ್ಯಾಯಮಂಡಳಿ ಆದೇಶದ ಪ್ರಕಾರ, ಕರ್ನಾಟಕ ನೀರು ಬಿಡದೆ 2,500 ಕೋಟಿ ರೂ. ಬೆಳೆ ನಷ್ಟವಾಗಿದ್ದು, ಇದನ್ನು ತುಂಬಿಕೊಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಿಎಂ ಜಯಲಲಿತಾ ಅವರು ಮತ್ತೆ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದಾರೆ.

ಪರಪ್ಪನ ಅಗ್ರಹಾರ
ಬೆಂಗಳೂರಿನ ಕೋರ್ಟ್ ವಿಚಾರಣೆ ಹಾಜರಾತಿ ವಿನಾಯತಿ ಕೋರಿ ಸುಪ್ರೀಂಕೋರ್ಟ್ ಗೆ ಜಯಲಲಿತಾ ಪರ ವಕೀಲರು ಮನವಿ ಸಲ್ಲಿಸಿದ್ದರು. NSG ಪಡೆ ಕರೆಸಿಕೊಂಡು ಸೂಕ್ತ ಭದ್ರತೆ ಒದಗಿಸಿದರೆ ಮಾತ್ರ ನ್ಯಾಯಾಲಯಕ್ಕೆ ಬರುವುದಾಗಿ ಜಯಾ ಪರ ವಕೀಲರು ಕರ್ನಾಟಕ ಸರ್ಕಾರಕ್ಕೆ ತಾಕೀತು ಮಾಡಿದ್ದರು.












Click it and Unblock the Notifications