ಅಯೋಧ್ಯೆ ತೀರ್ಪು: ಮೋದಿ ಟ್ವೀಟ್ ನಲ್ಲಿ ರಾಮಭಕ್ತಿ, ರಹೀಮಭಕ್ತಿ
ನವದೆಹಲಿ, ನವೆಂಬರ್ 09: "ಇದು ಯಾರ ಗೆಲುವೂ ಅಲ್ಲ, ಸೋಲೂ ಅಲ್ಲ. ರಾಮಭಕ್ತಿಯೇ ಇರಲಿ, ರಹೀಮ ಭಕ್ತಿಯೇ ಇರಲಿ ನಾವು ಭಕ್ತಿಯ ಭಾವವನ್ನು ದೃಢವಾಗಿರಿಸಿಕೊಳ್ಳುವುದು ಮುಖ್ಯ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
"ಇಂದು ಸುಪ್ರೀಂ ಕೋರ್ಟಿನಲ್ಲಿ ಪ್ರಕಟವಾದ ಐತಿಹಾಸಿಕ ತೀರ್ಪಿಗೆ ಪ್ರತಿಕ್ರಿಯೆ ನೀಡಿದ ಅವರು ಇಡಿ ದೇಶವೂ ಶಾಂತಿ, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ" ಎಂದರು.
ಅಯೋಧ್ಯೆ ವಿವಾದದ ಕುರಿತು ಇಂದು ತನ್ನ ಅಂತಿಮ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ರಾಮಜನ್ಮಭೂಮಿ ವಿವಾದಿತ ಜಾಗವನ್ನು ರಾಮಜನ್ಮಭೂಮಿ ನ್ಯಾಸ ಟ್ರಸ್ಟ್ ಗೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಸುನ್ನಿ ವಕ್ಫ್ ಬೋರ್ಡಿಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪರ್ಯಾಯ ಜಮೀನು ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.

ರಾಮಭಕ್ತಿ-ರಹೀಮಭಕ್ತಿ
"ಅಯೋಧ್ಯೆಯ ಕುರಿತು ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪನ್ನು ನೀಡಿದೆ. ಈ ತೀರ್ಪನ್ನು ನೋಡಿದರೆ ಇದು ಯಾರ ಗೆಲುವೂ ಅಲ್ಲ, ಸೋಲೂ ಅಲ್ಲ. ಅದು ರಾಮಭಕ್ತಿಯಿರಲಿ, ರಹೀಮಭಕ್ತಿಯಿರಲಿ, ಭಕ್ತಿಯ ಭಾವವನ್ನು ಗಟ್ಟಿಗೊಳಿಸುವುದು ನಮ್ಮ ಕರ್ತವ್ಯ. ದೇಶಬಾಂಧವರಲ್ಲಿ ನನ್ನ ವಿನಂತಿ ಏನಂದರೆ, ದಯವಿಟ್ಟು ಶಾಂತಿ, ಸೌಹಾರ್ದ ಮತ್ತು ಒಗ್ಗಟ್ಟನ್ನು ಕಾಪಾಡಿ"- ನರೇಂದ್ರ ಮೋದಿ

ಯಾಕೆ ಮಹತ್ವದ್ದು?
"ಸುಪ್ರೀಂ ಕೋರ್ಟ್ ನ ಈ ತೀರ್ಪು ಹಲವು ಕಾರಣಗಳಿಂದ ಮಹತ್ವದ್ದು. ಇದು ಒಂದು ವಿವಾದವನ್ನು ಬಗೆಹರಿಸಲು ಕಾನೂನಾತ್ಮಕ ಅಂಶಗಳು ಎಷ್ಟು ಮುಖ್ಯ ಎಂಬುದನ್ನು ತೋರಿಸಿದೆ. ತಮ್ಮ ತಮ್ಮ ವಾದವನ್ನು ಪ್ರಚುರಪಡಿಸಲು ಎರಡು ಕಡೆಯವರಿಗೂ ಸಾಕಷ್ಟು ಕಾಲ, ಅವಕಾಶ ನೀಡಲಾಗಿದೆ. ದಶಕಗಳಷ್ಟು ಹಳೆಯ ವಿವಾದವನ್ನು ನ್ಯಾಯಾಂಗದ ದೇವಾಲಯ ಸೌಹಾರ್ದಯುತವಾಗಿ ಬಗೆಹರಿಸಿದೆ"- ನರೇಂದ್ರ ಮೋದಿ

ನ್ಯಾಯಾಂಗದ ಮೇಲೆ ನಂಬಿಕೆ
"ಈ ತೀರ್ಪು ಸಾಮಾನ್ಯ ವ್ಯಕ್ತಿಗೆ ನ್ಯಾಯಾಂಗದ ಮೇಲಿನ ಭರವಸೆ ಹೆಚ್ಚುವಂತೆ ಮಾಡಿದೆ. ನಾವೆಲ್ಲರೂ ಭ್ರಾತೃತ್ವದ ಭಾವದಿಂದ ಈ ತೀರ್ಪನ್ನು ಸ್ವೀಕರಿಸಿ, 130 ಕೋಟಿ ಭಾರತೀಯರು ಶಾಂತಿಯನ್ನು ಪ್ರತಿಪಾದಿಸಬೇಕು. ಶಾಂತಿಯೇ ನಮ್ಮ ಸ್ಫೂರ್ತಿ" ನರೇಂದ್ರ ಮೋದಿ

ಕಾನೂನಿನ ಮುಂದೆ ಎಲ್ಲರೂ ಸಮಾನರು
ಈ ತೀರ್ಪು ಏಕೆ ಮಹತ್ವದ್ದು ಎಂದರೆ, ಕಾನೂನಿನ ಮೂಲಕ ಯಾವುದೇ ಕ್ಲಿಷ್ಟ ಸಮಸ್ಯೆಯನ್ನೂ ಪರಿಹರಿಸಬಹುದು ಎಂಬುದು ದೃಢವಾಗಿದೆ. ಇದು ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ನಮ್ಮ ನ್ಯಾಯಾಂಗದ ದೂರದೃಷ್ಟಿತ್ವವನ್ನು ತೋರಿಸಿಕೊಟ್ಟಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಇಂದು ಸ್ಪಷ್ಟವಾಗಿ ತಿಳಿಸಿದೆ- ನರೇಂದ್ರ ಮೋದಿ












Click it and Unblock the Notifications