ಡಿಸೈನರ್ ಶಿಪ್ರಾ ನಿಗೂಢ ನಾಪತ್ತೆ ರಹಸ್ಯ ಬಯಲು
ನೋಯ್ಡಾ, ಮಾರ್ಚ್ 04: ಸ್ನಾಪ್ ಡೀಲ್ ನ ಉದ್ಯೋಗಿ ದೀಪ್ತಿ ನಾಪತ್ತೆ ಪ್ರಕರಣಕ್ಕೆ ಒಂದು ರೀತಿ ಸಿನಿಮಾ ಲಿಂಕ್ ಇದ್ದರೆ, ಫ್ಯಾಷನ್ ವಿನ್ಯಾಸಕಿ ಶಿಪ್ರಾ ಅಪಹರಣಕ್ಕೆ ಟಿವಿಯಲ್ಲಿ ಬಂದ ಕ್ರೈಂ ಶೋ ಸ್ಫೂರ್ತಿಯಾಗಿತ್ತಂತೆ. ಡಿಸೈನರ್ ಶಿಪ್ರಾ ನಿಗೂಢ ನಾಪತ್ತೆ ರಹಸ್ಯ ಕೊನೆಗೂ ಬಯಲಾಗಿದೆ. ಗುರ್ ಗಾಂವ್ ನಲ್ಲಿ ಶಿಪ್ರಾ ಪತ್ತೆಯಾಗಿದ್ದಾರೆ.
ನೋಯ್ಡಾದ ಸೆಕ್ಟರ್ 37 ಪ್ರದೇಶದಿಂದ ಸೋಮವಾರದಂದು ನಾಪತ್ತೆಯಾದ ಶಿಪ್ರಾ ಮಲಿಕ್ ಸುಳಿವು ಸಿಕ್ಕಿರಲಿಲ್ಲ. ಆದರೆ, ನೋಯ್ಡಾ ಮೂಲದ ಫ್ಯಾಷನ್ ಡಿಸೈನರ್ ಶುಕ್ರವಾರ ಬೆಳಗ್ಗೆ ಗುರ್ಗಾಂವ್ನಲ್ಲಿ ಪತ್ತೆಯಾಗಿದ್ದಾರೆ. [ಸ್ನಾಪ್ ಡೀಲ್ ಉದ್ಯೋಗಿ ನಂತರ ಫ್ಯಾಷನ್ ವಿನ್ಯಾಸಕಿ ನಾಪತ್ತೆ]
ಶಿಪ್ರಾ ಅವರನ್ನು ಯಾರೂ ಕಿಡ್ನಾಪ್ ಮಾಡಿರಲಿಲ್ಲ. ಬದಲಿಗೆ ತಮ್ಮ ಕಿಡ್ನಾಪ್ ಕಥೆಗೆ ಅವರೇ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕಳೆದ ತಿಂಗಳು 25ರ ಹರೆಯದ ಸ್ನ್ಯಾಪ್ ಡೀಲ್ ಉದ್ಯೋಗಿ ಕಣ್ಮರೆಯಾಗಿ, 40 ತಾಸಿನ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದರು.
ಪತಿಯ ರಿಯಲ್ ಎಸ್ಟೇಟ್ ವ್ಯವಹಾರ ಏನಾದರೂ ಶಿಪ್ರಾ ಅವರಿಗೆ ಮುಳುವಾಯಿತೇ? ಶಿಪ್ರಾರನ್ನು ಯಾರಾದರೂ ಅಪಹರಿಸಿದ್ದರೆ? ಎಂಬ ಶಂಕೆ ವ್ಯಕ್ತವಾಗಿತ್ತು. ಪೊಲೀಸ್ ಕಂಟ್ರೋಲ್ ರೂಮಿಗೆ ಬಂದಿದ್ದ ಕರೆ ಆಧಾರಿಸಿ ಪೊಲೀಸರು ಹುಡುಕಾಟ ನಡೆಸಿ ಗುರ್ ಗಾವ್ ನಲ್ಲಿ ಪತ್ತೆ ಹಚ್ಚಿದ್ದಾರೆ. ಮುಂದೇನಾಯ್ತು? ಓದಿ...

ಪೊಲೀಸರಿಗೆ ಸುಳಿವು ಕೊಟ್ಟಿದ್ದ ಶಿಪ್ರಾ
ಶಿಪ್ರಾ ಅವರ ಪತಿ ಚೇತನ್ ನೀಡಿರುವ ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರಿಗೆ ನೋಯ್ಡಾದಲ್ಲಿರುವ ಶಿಪ್ರಾ ಅವರ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಅವರ ಮಾರುತಿ ಸ್ವಿಫ್ಟ್ ಕಾರು ಪತ್ತೆಯಾಗಿತ್ತು. ಘಟನೆ ನಡೆದ ದಿನ ರಾತ್ರಿ ಪೊಲೀಸ್ ಕಂಟ್ರೋಲ್ ರೂಮಿಗೆ ಶಿಪ್ರಾ ಕರೆ ಮಾಡಿ ನೆರವು ಕೋರಿದ್ದರು. ಆದರೆ, ಇವೆಲ್ಲವೂ ಶಿಪ್ರಾ ಮಾಡಿದ ನಾಟಕದ ಭಾಗವಾಗಿತ್ತು.

ಕ್ರೈಂ ಪೆಟ್ರೋಲ್ ಕಾರ್ಯಕ್ರಮ ಪ್ರಭಾವಿತ
ಖಾಸಗಿ ವಾಹಿನಿಯಲ್ಲಿ ಬರುವ ಕ್ರೈಂ ಪೆಟ್ರೋಲ್ ಕಾರ್ಯಕ್ರಮದಿಂದ ಪ್ರಭಾವಿತರಾಗಿದ್ದ ಶಿಪ್ರಾ ಅವರು ಮನೆಯವರಿಗೆ ಪಾಠ ಕಲಿಸಲು ತಾನು ಕಿಡ್ನಾಪ್ ಆಗಿರುವಂತೆ ನಾಟಕ ಮಾಡಿದರು. ಆದರೆ, ಸಿಸಿಟಿವಿ ದೃಶ್ಯಗಳು, ಸಿಕ್ಕ ಸುಳಿವುಗಳಿಂದ ಇದು ಕಿಡ್ನಾಪ್ ಕೇಸ್ ಅಲ್ಲ ಎಂದು ತಕ್ಷಣಕ್ಕೆ ಪೊಲೀಸರಿಗೆ ತಿಳಿದು ಬಿಟ್ಟಿತು.

ಶಿಪ್ರಾ ಮಾನಸಿಕ ಅಸ್ವಸ್ಥೆ ಅಲ್ಲ
ಗುರ್ ಗಾಂವ್ ನಲ್ಲಿ ಶಿಪ್ರಾ ಪತ್ತೆಯಾದ ಬಳಿಕ ದೈಹಿಕ ಹಾಗೂ ಮಾನಸಿಕ ತಪಾಸಣೆ ಮಾಡಿಸಲಾಗಿದ್ದು, ಆಕೆ ಮಾನಸಿಕ ಅಸ್ವಸ್ಥೆ ಅಲ್ಲ. ಇದೆಲ್ಲವೂ ಉದ್ದೇಶಪೂರ್ವಕವಾಗಿ ಮಾಡಿದ ಯೋಜನೆ ಎಂದು ತಿಳಿದು ಬಂದಿದೆ. ಶಿಪ್ರಾ ಅವರ ಇಬ್ಬರು ಸೋದರರು, ತಂದೆ ಹಾಗೂ ಪತಿ ಚೇತನ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಶಿಪ್ರಾ ಕಣ್ಮರೆಗೆ ಸಾಲದ ಹೊರೆ ಕಾರಣವೇ?
ಸಾಲದ ವಿಷಯವಾಗಿ ಶಿಪ್ರಾ ಅವರು ತಮ್ಮ ಮನೆ ಮಂದಿ ಜೊತೆ ಜಗಳವಾಡಿಕೊಂಡಿದ್ದರು. ಪತಿಯಿಂದಲೂ ನೆರವು ಸಿಕ್ಕಿರಲಿಲ್ಲ. ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ಈ ರೀತಿ ನಾಟಕವಾಡಿರಬಹುದು ಎಂದು ಶಂಕಿಸಲಾಗಿದೆ. ಶಿಪ್ರಾ ಅವರ ಹೇಳಿಕೆ ಪ್ರಕಾರ ಮೂವರು ದುಷ್ಕರ್ಮಿಗಳು ಆಕೆಯನ್ನು ಕಿಡ್ನಾಪ್ ಮಾಡಿ ನೋಯ್ಡಾದಿಂದ ಗುರ್ ಗಾಂವ್ ಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ.












Click it and Unblock the Notifications