ದೆಹಲಿ ಚುನಾವಣೆ : ಬಿಜೆಪಿಯಲ್ಲಾದ 10 ಪ್ರಮುಖ ಬೆಳವಣಿಗೆ
ನವದೆಹಲಿ, ಜ. 29: ದೇಶದ ರಾಜಧಾನಿ ನವದೆಹಲಿಯ ವಿಧಾನಸಭೆ ಚುನಾವಣೆ ಸಂಪೂರ್ಣ ಭಾರತದ ಗಮನ ಸೆಳೆದಿದೆ. ಕಾಂಗ್ರೆಸ್ನಂತಹ ಐತಿಹಾಸಿಕ ರಾಷ್ಟ್ರೀಯ ಪಕ್ಷವೇ ಬಿಜೆಪಿ ಎದುರು ಎದುಸಿರು ಬಿಡುತ್ತಿದೆ. ಆದರೆ, ಆಮ್ ಆದ್ಮಿ ಮಾತ್ರ ಅರವಿಂದ ಕೇಜ್ರಿವಾಲ್ ಎಂಬ ಚಾಣಾಕ್ಷ ಹೋರಾಟಗಾರನ ನೇತೃತ್ವದಲ್ಲಿ ನರೇಂದ್ರ ಮೋದಿ ವರ್ಚಸ್ಸಿಗೆ ಸೆಡ್ಡು ಹೊಡೆಯುತ್ತಿದೆ.
ಕೇಂದ್ರ ಸರ್ಕಾರದ ಗುಪ್ತಚರ ಸಂಸ್ಥೆ ಇಂಟೆಲಿಜೆನ್ಸ್ ಬ್ಯೂರೋ ಬಿಟ್ಟು ಉಳಿದೆಲ್ಲ ಖಾಸಗಿ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳಲ್ಲಿ ಆಮ್ ಆದ್ಮಿಯೇ ಮುಂಚೂಣಿಯಲ್ಲಿದೆ. ಇದೀಗ ದಿಢೀರ್ ಬೆಳವಣಿಗೆಯೊಂದರಲ್ಲಿ ಬಿಜೆಪಿ ಪ್ರಣಾಳಿಕೆ ಘೋಷಣೆಯನ್ನೇ ಕೈಬಿಟ್ಟಿದೆ. ಕೇವಲ ದೃಷ್ಟಿಕೋನವನ್ನೇ ಆಧಾರವಾಗಿಟ್ಟುಕೊಂಡು ಮುನ್ನಡೆಯುವುದಾಗಿ ತಿಳಿಸಿದೆ. [ದೆಹಲಿಯಲ್ಲಿ ಆಪ್ ಧೂಳಿಪಟ : ಐಬಿ]

ನವದೆಹಲಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪಡೆದಿರುವ ಬಿಜೆಪಿಯಲ್ಲಿ ನಡೆದ 10 ಪ್ರಮುಖ ಬೆಳವಣಿಗೆಗಳು ಹೀಗಿವೆ.
- ಬಿಜೆಪಿ ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಬೇಕಿತ್ತು. ಆದರೆ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್, "ನಾವು ಪ್ರಣಾಳಿಕೆ ಬಿಡುಗಡೆ ಮಾಡುವುದಿಲ್ಲ. ಪ್ರಧಾನಿ ಮೋದಿ ಹಾಗೂ ಕಿರಣ್ ಬೇಡಿ ಅವರ ಅಭಿವೃದ್ಧಿ ದೂರದೃಷ್ಟಿಕೋನವನ್ನೇ ಜನರ ಮುಂದಿಡುತ್ತೇವೆ" ಎಂದರು.
- ಬುಧವಾರ ರಾತ್ರಿ ಟ್ವೀಟ್ ಮಾಡಿದ್ದ ಕಿರಣ್ ಬೇಡಿ "ಕಿರಣ್ ನೀಲನಕ್ಷೆ" ಹೆಸರಿನಲ್ಲಿ ನವದೆಹಲಿಗಾಗಿ ತಮ್ಮ ಯೋಜನೆಗಳ ಕುರಿತು ಹೇಳಿಕೊಂಡಿದ್ದರು. [ದೆಹಲಿ ಗದ್ದುಗೆ ಮತ್ತೆ ಆಮ್ ಆದ್ಮಿಗೆ?]
- ಆದರೆ, ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿ ರಾಜಾಧ್ಯಕ್ಷ ಸತೀಶ ಉಪಾಧ್ಯಾಯ "ಪ್ರಣಾಳಿಕೆ ಹಾಗೂ ದೂರದೃಷ್ಟಿಕೋನ ದಾಖಲೆ"ಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.
- ಆದರೆ, ಪಕ್ಷದ ಉನ್ನತ ಮೂಲಗಳ ಪ್ರಕಾರ ನವದೆಹಲಿಯ ಅಗತ್ಯಗಳನ್ನು ಗುರುತಿಸಿ ಸಿದ್ಧಪಡಿಸಿದ ಪ್ರಣಾಳಿಕೆಗೆ ಮುಖಂಡರಿಂದ ಸಮ್ಮತಿ ಸಿಗಲಿಲ್ಲ.
- ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿರುವ ಡಾ. ಹರ್ಷವರ್ಧನ್ ಬಿಜೆಪಿ ಬೇಡಿಕೆಯನ್ನು ಪ್ರಣಾಳಿಕೆಯಲ್ಲಿಟ್ಟರೆ, ಕಿರಣ್ ಬೇಡಿ ತಮ್ಮದೇ ವಾದ ಮುಂದಿಟ್ಟರು.
- ಪ್ರಮುಖವಾಗಿ ಪೊಲೀಸ್ ಇಲಾಖೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೊಪ್ಪಿಸುವುದು. ಪ್ರಸ್ತುತ ಪೊಲೀಸರು ಕೇಂದ್ರ ಸರ್ಕಾರದ ಸುಪರ್ದಿಯಲ್ಲಿದ್ದು, ರಾಜ್ಯ ಸರ್ಕಾರದ ನೇತೃತ್ವಕ್ಕೆ ವಹಿಸಬೇಕೆಂಬ ಬೇಡಿಕೆ ಬಲವಾಗಿ ಕೇಳಿಬರುತ್ತಿದೆ. [ಬಿಜೆಪಿ ಗೆಲ್ಲದಿದ್ದರೆ ಮೋದಿಗೆ ಮುಖಭಂಗ]
- ಒಂದು ವೇಳೆ ಪ್ರಣಾಳಿಕೆಯು ಜನರ ನೈಜ ಬೇಡಿಕೆಯನ್ನು ಪ್ರತಿಫಲಿಸದಿದ್ದರೆ ವಿರೋಧ ಪಕ್ಷಗಳಿಂದ ಭಾರೀ ವಾಗ್ದಾಳಿ ಎದುರಿಸುವ ಭೀತಿ ಬಿಜೆಪಿ ಮುಖಂಡರಲ್ಲಿದೆ.
- ಅಲ್ಲದೆ, ಬಿಜೆಪಿ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಅರವಿಂದ ಕೇಜ್ರಿವಾಲ್ ಬಂದಾಗ ಸೇರುವ ಜನಸಂಖ್ಯೆ ಕಿರಣ್ ಬೇಡಿ ಸಮಾವೇಶದಲ್ಲಿ ಕಂಡುಬರದಿರುವುದು.
- ಸುಮಾರು 250 ಸಾರ್ವಜನಿಕ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಲ್ಕು ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರುವುದಕ್ಕೆ ಹಲವರಲ್ಲಿ ಅಸಮಾಧಾನ ಇರುವ ಕಾರಣ ಕೇಂದ್ರದ ವಿತ್ತ ಸಚಿವ ಅರುಣ್ ಜೈಟ್ಲಿ ಅವರನ್ನು ಕಣಕ್ಕಿಳಿಸಲಾಗಿದೆ. [ಕಿರಣ್ ಬೇಡಿಗೆ ಶಾಂತಿಭೂಷಣ್ ಬೆಂಬಲ]
- ನವದೆಹಲಿ ಚುನಾವಣೆ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ 13 ರಾಜ್ಯಗಳಿಂದ 120 ಸಂಸದರನ್ನು ಪ್ರಚಾರಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.












Click it and Unblock the Notifications