ಆನೆ ಪುತ್ಥಳಿ ಸ್ಥಾಪಿಸಿದ ಸಾರ್ವಜನಿಕ ಹಣ ಮಾಯಾವತಿ ಹಿಂತಿರುಗಿಸಲಿ: ಸುಪ್ರೀಂ
ನವದೆಹಲಿ, ಫೆಬ್ರವರಿ 8: ಲಖನೌ ಹಾಗೂ ನೋಯ್ಡಾದಲ್ಲಿ ತಮ್ಮ ಬಹುಜನ ಸಮಾಜ ಪಕ್ಷದ ಚಿಹ್ನೆ ಆನೆಯ ಪುತ್ಥಳಿಯನ್ನು ಸಾರ್ವಜನಿಕ ಹಣದಲ್ಲಿ ಸ್ಥಾಪನೆ ಮಾಡಿದ್ದ ಮಾಯಾವತಿ, ಆ ಹಣವನ್ನು ಹಿಂತಿರುಗಿಸಬೇಕು ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ.
ತಮ್ಮ ಸ್ವಂತ ಪುತ್ಥಳಿ ಹಾಗೂ ಯಾವುದೇ ಪಕ್ಷದ ಚಿಹ್ನೆಯನ್ನು ಸಾರ್ವಜನಿಕ ಹಣದಲ್ಲಿ ನಿರ್ಮಿಸಬಾರದು ಎಂದು ವಕೀಲರೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು. ಆ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತು.
"ನಮ್ಮ ಸದ್ಯದ ದೃಷ್ಟಿಕೋನದ ಪ್ರಕಾರ ಮಾಯಾವತಿ ತಮ್ಮ ಹಾಗೂ ಪಕ್ಷದ ಚಿಹ್ನೆಯ ಪುತ್ಥಳಿಯನ್ನು ನಿರ್ಮಿಸಿ, ರಾಜ್ಯ ಸರಕಾರಕ್ಕೆ ಹೊರೆಯಾಗುವಂತೆ ಮಾಡಿದ್ದಾರೆ. ಆ ಸಾರ್ವಜನಿಕ ಹಣವನ್ನು ವಾಪಸ್ ನೀಡಬೇಕು" ಎಮ್ದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಹೇಳಿದೆ.

ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ, ಸಂಜೀವ್ ಖನ್ನಾ ಕೂಡ ಇದ್ದಾರೆ. ಈ ಅರ್ಜಿಯ ಮುಂದಿನ ವಿಚಾರಣೆ ಏಪ್ರಿಲ್ ಎರಡರಂದು ನಡೆಯುವುದು. ಸದ್ಯಕ್ಕೆ ವ್ಯಕ್ತವಾಗಿರುವ ಈ ಅಭಿಪ್ರಾಯವನ್ನು ಮತ್ತೆ ವಿಚಾರಣೆ ಮಾಡಲಾಗುವುದು ಎಂದು ಕೋರ್ಟ್ ಹೇಳಿದೆ.
ಈ ಅರ್ಜಿಯ ಅಂತಿಮ ವಿಲೇವಾರಿ ಏಪ್ರಿಲ್ ಎರಡನೇ ತಾರೀಕು ಮಾಡಲಾಗುವುದು ಎಂದು ಹೇಳಲಾಗಿದೆ. ಲೋಕಸಭಾ ಚುನಾವಣೆ ಪೂರ್ಣಗೊಂಡ ನಂತರ ಮೇ ತಿಂಗಳಲ್ಲಿ ವಿಚಾರಣೆ ನಡೆಸಲು ಸಾಧ್ಯವೇ ಎಂದು ಬಹುಜನ ಸಮಾಜ ಪಕ್ಷದ ವಕೀಲರಾದ ಸತೀಶ್ ಮಿಶ್ರಾ ಕೇಳಿಕೊಂಡರು.












Click it and Unblock the Notifications