'ಸೂಕ್ಷ್ಮ ಮಾಹಿತಿ ಬಹಿರಂಗ ಕಳವಿಗೆ ಸಮ, ರಾಷ್ಟ್ರೀಯ ಭದ್ರತೆ ಅಪಾಯದಲ್ಲಿ'
ನವದೆಹಲಿ, ಮಾರ್ಚ್ 13: ರಫೇಲ್ ಪ್ರಕರಣದಲ್ಲಿ ಸೂಕ್ಷ್ಮ ದಾಖಲೆಗಳನ್ನು ನಕಲು ಮಾಡಿ, ಸೋರಿಕೆ ಮಾಡಿರುವುದು ಕಳವಿಗೆ ಸಮಾನವಾದುದು ಮತ್ತು ಇದರಿಂದ ರಾಷ್ಟ್ರೀಯ ಭದ್ರತೆ ಅಪಾಯಕ್ಕೆ ಸಿಲುಕಿದಂತೆ ಎಂದು ಬುಧವಾರ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ಹೇಳಿದೆ. ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ ಅಫಿಡವಿಟ್ ನಲ್ಲಿ, ಸೂಕ್ಷ್ಮ ಮಾಹಿತಿಗಳನ್ನು ಸೋರಿಕೆ ಮಾಡಿದ ಅಪರಾಧ ಅರ್ಜಿದಾರರ ಮೇಲಿದೆ ಎಂದಿದೆ.
ಯಾರು ಈ ಸೋರಿಕೆಯ ಸಂಚಿನ ಹಿಂದೆ ಇದ್ದಾರೋ ಅವರು ಶಿಕ್ಷಾರ್ಹ ಅಪರಾಧ ಮಾಡಿದ್ದಾರೆ. ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುವಂಥ ಅಧಿಕೃತ ದಾಖಲೆಗಳನ್ನು ಅನುಮತಿ ಇಲ್ಲದೆ ನಕಲು ಹಾಗೂ ಕಳವು ಮಾಡಿದ ಅಪರಾಧ ಅದು. ಇದೀಗ ಈ ವಿಚಾರದ ಬಗ್ಗೆ ಆಂತರಿಕ ತನಿಖೆ ಆಗಬೇಕಿದ್ದು, ಫೆಬ್ರವರಿ ಇಪ್ಪತ್ತೆಂಟರಿಂದ ಆರಂಭವಾಗಿದೆ ಎಂದಿದೆ.
ರಫೇಲ್ ದಾಖಲೆಗಳನ್ನು ಕಳ್ಳ ವಾಪಸ್ ಕೊಟ್ಟನೆ?: ಚಿದಂಬರಂ ವ್ಯಂಗ್ಯ
ಅರ್ಜಿದಾರರಾದ ಯಶವಂತ್ ಸಿನ್ಹಾ, ಅರುಣ್ ಶೌರಿ, ಪ್ರಶಾಂತ್ ಭೂಷಣ್ ವಿರುದ್ಧ ಸೂಕ್ಷ್ಮ ಮಾಹಿತಿಗಳನ್ನು ಸೋರಿಕೆ ಮಾಡಿದ ಅಪರಾಧ ಇದೆ ಎಂದು ಕೇಂದ್ರ ಸರಕಾರ ಹೇಳಿದೆ. ಭಾರತದ ಯುದ್ಧ ಸಾಮರ್ಥ್ಯದ ಬಗ್ಗೆ ತಿಳಿಸುತ್ತಾ ವಾಯು ಸೇನೆಯಲ್ಲಿನ ಯುದ್ಧ ವಿಮಾನಗಳ ಬಗ್ಗೆ ರಫೇಲ್ ಖರೀದಿಗೆ ಸಂಬಂಧಿಸಿದ ತೀರ್ಪು ಮೇಲ್ಮನವಿಯಲ್ಲಿ ಮಾಹಿತಿಯ ದಾಖಲೆ ಒದಗಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಪುನರ್ ಪರಿಶೀಲನಾ ಅರ್ಜಿಯಲ್ಲಿನ ದಾಖಲೆಗಳು ಸೂಕ್ಷ್ಮವಾದವು. ನಮ್ಮ ಯುದ್ಧ ವಿಮಾನಗಳ ಬಗ್ಗೆ ತಿಳಿಸುವುದರಿಂದ ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದಂತೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.
ಆಯ್ದ, ಅಪೂರ್ಣ ವಾಸ್ತವಗಳು ಮತ್ತು ದಾಖಲೆಗಳನ್ನು ಅರ್ಜಿದಾರರು ನೀಡಿರುವುದು ಕೋರ್ಟ್ ನ ದಾರಿ ತಪ್ಪಿಸುವಂತಿದ್ದು, ರಾಷ್ಟ್ರೀಯ ಭದ್ರತೆಗೆ ಅಪಾಯ ಆಗಲಿದೆ ಎಂದು ಕೂಡ ಹೇಳಲಾಗಿದೆ.