ದೆಹಲಿಯಿಂದ ಬಿಜೆಪಿ ಟಿಕೆಟ್ ಬಯಸಿದ ಗೌತಂ ಗಂಭೀರ್: ಅಡ್ಡಗಾಲು ಯಾರು?
ಆಯಾಯ ರಾಜ್ಯಗಳ ಬಿಜೆಪಿ ಮುಖಂಡರನ್ನು ಭೇಟಿಯಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಗೊಳಿಸುವಲ್ಲಿ ನಿರತರಾಗಿದ್ದಾರೆ. ಜೊತೆಜೊತೆಗೆ, ಬೂತ್ ಮಟ್ಟದ ಕಾರ್ಯಕರ್ತರ ಜೊತೆಯೂ ಮಾತುಕತೆ ನಡೆಸುತ್ತಿದ್ದಾರೆ.
ಬಿಜೆಪಿ ಪಾಲಿಗೆ ಪ್ರಮುಖವಾದದ್ದು ದೆಹಲಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಏಳು ಲೋಕಸಭಾ ಕ್ಷೇತ್ರಗಳು. ಕಳೆದ ಬಾರಿ, ಏಳಕ್ಕೆ ಏಳೂ ಸ್ಥಾನವನ್ನು ಗೆದ್ದು ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ, ಈಗಿನ ಪರಿಸ್ಥಿತಿ 2014ರಂತೆ ಇಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಶೇ. 32.90% ಮತವನ್ನು ಪಡೆದಿದ್ದರೂ, ಒಂದೇ ಒಂದು ಸೀಟು ಗೆದ್ದುಕೊಳ್ಳುವಲ್ಲಿ ವಿಫಲವಾಗಿತ್ತು. ಅತ್ಯಂತ ನಿರಾಶಾದಾಯಕ ಪ್ರದರ್ಶನವನ್ನು ಕಾಂಗ್ರೆಸ್ ಇಲ್ಲಿ ನೀಡಿತ್ತು.
ಈ ಬಾರಿಯ ಚುನಾವಣೆಯಲ್ಲಿ ದೆಹಲಿ ವ್ಯಾಪ್ತಿಯ ತನ್ನ ಆಯ್ಕೆಯ ಕ್ಷೇತ್ರವೊಂದರಲ್ಲಿ ಮಾಜಿ ಕ್ರಿಕೆಟಿಗ ಗೌತಂ ಗಂಭೀರ್, ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಲು ಬಯಸಿದ್ದಾರೆ. ಪಕ್ಷದ ವರಿಷ್ಠರಿಗೆ ತಮ್ಮ ಇಂಗಿತವನ್ನೂ ತಿಳಿಸಿದ್ದಾರೆ.. ಆದರೆ, ಅವರು ಬಯಸಿರುವ ಸೀಟಿಗೆ ಇನ್ನೊಬ್ಬರು ಟವೆಲ್ ಹಾಕಿದ್ದಾರೆ.

ಕಾಂಗ್ರೆಸ್-ಆಪ್ ಹೊಂದಾಣಿಕೆ ಮಾಡಿಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ
ಚುನಾವಣಾ ಹೊಸ್ತಿಲಲ್ಲಿ ದೆಹಲಿಗೆ ರಾಜ್ಯದ ಸ್ಥಾನಮಾನ ನೀಡಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತಿರುವುದು ಒಂದೆಡೆ. ಮೋದಿ ಖಟ್ಟರ್ ವಿರೋಧಿಯಾಗಿ ತಮ್ಮನ್ನು ಗುರುತಿಸಿಕೊಂಡಿರುವ ಅರವಿಂದ್ ಕೇಜ್ರಿವಾಲ್ ಹೆಚ್ಚಾಗಿ ಕಾಂಗೆಸ್ಸಿಗೆ ಆಪ್ತರಾಗುವತ್ತ ಹೆಜ್ಜೆಯನ್ನಿಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಪ್ರತ್ಯೇಕವಾಗಿ ಸ್ಪರ್ಧಿಸಿದರೆ, ದೆಹಲಿಯಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಡಲಿದೆ. ಇದು ಮತ ವಿಭಜೆನೆಗೆ ಕಾರಣವಾಗುತ್ತದೆ. ಹಾಗಾಗಿ, ಕಾಂಗ್ರೆಸ್-ಆಪ್ ಕೊನೆಯ ಕ್ಷಣದಲ್ಲಿ ಹೊಂದಾಣಿಕೆ ಮಾಡಿಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ.

ಗೌತಂ ಗಂಭೀರ್ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿತ್ತು
ಖಚಿತ ಮಾಹಿತಿಗಳ ಪ್ರಕಾರ, ಮಾಜಿ ಭಾರತೀಯ ಕ್ರಿಕೆಟಿನ ಓಪನಿಂಗ್ ಬ್ಯಾಟ್ಸ್ ಮ್ಯಾನ್ ಗೌತಂ ಗಂಭೀರ್ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿತ್ತು. ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲು ಗೌತಂ ಗಂಭೀರ್ ಬಯಸಿದ್ದರು. ದೆಹಲಿ ಮೂಲದವರೂ ಆಗಿರುವ ಗೌತಂ, ಇದೇ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಈಗಾಗಲೇ ಅಮಿತ್ ಶಾ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ರಾಷ್ಟ್ರೀಯತೆ, ಸೈನಿಕರು, ಪಾಕ್ ವಿರೋಧಿ ಮುಂತಾದ ವಿಚಾರದಲ್ಲಿ ಗಂಭೀರ್ ಕಠಿಣ ನಿಲುವನ್ನು ತಾಳಿದ್ದರು.

ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸುತ್ತಿರುವ ಗೌತಂ ಗಂಭೀರ್
ಆದರೆ, ಅವರಿಗೆ ಇಲ್ಲೊಂದು ತೊಡಕು ಎದುರಾಗಿದೆ. ಗಂಭೀರ್ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸುತ್ತಿದ್ದಂತೆಯೇ, ಕಳೆದ ಬಾರಿಯ ವಿಜೇತ ಅಭ್ಯರ್ಥಿ ಮೀನಾಕ್ಷಿ ಲೇಖಿ, ಅತ್ಯಂತ ಚುರುಕಾಗಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಆಶಿಶ್ ಖೇತಾನ್ ಅವರನ್ನು ಲೇಖಿ 162,708 ಮತಗಳ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ಸಿನ ಅಜಯ್ ಮೇಕನ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

ಮೀನಾಕ್ಷಿ ಲೇಖಿ, ವೃತ್ತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ವಕೀಲೆ
ಬಿಜೆಪಿಯ ವಕ್ತಾರೆಯಾಗಿರುವ ಮೀನಾಕ್ಷಿ ಲೇಖಿ, ವೃತ್ತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ವಕೀಲೆ. ಪಕ್ಷದ ನಿಲುವನ್ನು ಮತ್ತು ಪ್ರಧಾನಿ ಮೋದಿಯವರನ್ನು ಅತ್ಯಂತ ಸಮರ್ಥವಾಗಿ ಸಮರ್ಥಿಸಿಕೊಳ್ಳುವ ಮೀನಾಕ್ಷಿ, ಮತ್ತೆ ಬಿಜೆಪಿ ಟಿಕೆಟ್ ಅನ್ನು ಬಯಸಿದ್ದಾರೆ. ಕಳೆದ ಚುನಾವಣೆಯಲ್ಲಿ ಮೋದಿ ಹವಾದಿಂದಾಗಿ ಅನಾಯಾಸವಾಗಿ ಗೆದ್ದಿದ್ದ ಮೀನಾಕ್ಷಿ ಬಗ್ಗೆ, ಸ್ಥಳೀಯ ಕಾರ್ಯಕರ್ತರಲ್ಲಿ ಅಸಮಾಧಾನ ಇರುವುದನ್ನು ಅರಿತ, ಅಮಿತ್ ಶಾ, ಗೌತಂ ಗಂಭೀರ್ ಗೆ ಟಿಕೆಟ್ ನೀಡಲು ಬಯಸಿದ್ದರು. ಇದನ್ನು ಅರಿತ ಮೀನಾಕ್ಷಿ ಮತ್ತೆ ಕ್ಷೇತ್ರದಲ್ಲಿ ಅತ್ಯಂತ ಚುರುಕಾಗಿ ಕೆಲಸ ಮಾಡಲು ಆರಂಭಿಸಿದ್ದಾರೆ.

ಆಮ್ ಆದ್ಮಿ ಪಕ್ಷ ಎರಡನೇ ಸ್ಥಾನದಲ್ಲಿ ಇದ್ದದ್ದು ಮತ್ತು ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು
ದೆಹಲಿ ಮೆಟ್ರೋಪಾಲಿಟನ್ ವ್ಯಾಪ್ತಿಯಲ್ಲಿ ಬರುವ ಏಳು ಲೋಕಸಭಾ ಕ್ಷೇತ್ರಗಳೆಂದರೆ, ಚಾಂದ್ನಿ ಚೌಕ್, ಪೂರ್ವ ದೆಹಲಿ, ನವದೆಹಲಿ, ದೆಹಲಿ ಈಶಾನ್ಯ, ದೆಹಲಿ ವಾಯುವ್ಯ, ದಕ್ಷಿಣ ದೆಹಲಿ ಮತ್ತು ಪಶ್ಚಿಮ ದೆಹಲಿ. ಕಳೆದ ಚುನಾವಣೆಯಲ್ಲಿ ಎಲ್ಲಾ ಏಳು ಕ್ಷೇತ್ರವನ್ನು ಬಿಜೆಪಿ ಗೆದ್ದಿತ್ತು. ಗಮನಿಸಬೇಕಾದ ಅಂಶವೇನಂದರೆ, ಎಲ್ಲಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಎರಡನೇ ಸ್ಥಾನದಲ್ಲಿ ಇದ್ದದ್ದು ಮತ್ತು ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು.












Click it and Unblock the Notifications