ದೆಹಲಿ ಚುನಾವಣೆ; ಕೇಜ್ರಿವಾಲ್ ಗೆಲುವಿಗೆ ಪ್ರಮುಖ 10 ಕಾರಣಗಳು

ನವದೆಹಲಿ, ಫೆಬ್ರವರಿ 11; ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ದೊಡ್ಡ ಸದ್ದು ಮಾಡಿದ್ದಾರೆ. ಈ ಮೂಲಕ ಚುನಾವಣೆ ತಂತ್ರ ಹೆಣೆಯುವಲ್ಲಿ ನಿಪುಣರಾಗಿದ್ದ ಅಮಿತ್ ಶಾ ಆದಿಯಾಗಿ ಬಿಜೆಪಿ ಪಾಳಯಕ್ಕೆ ಬಹುದೊಡ್ಡ ಆಘಾತ ನೀಡಿದ್ದಾರೆ.

ಆಮ್ ಆದ್ಮಿ ಪಕ್ಷದ ನೇತೃತ್ವ ವಹಿಸಿರುವ ಅರವಿಂದ್ ಕೇಜ್ರಿವಾಲ್ ಕೇವಲ ದೆಹಲಿ ಜನಕ್ಕೆ ಅಷ್ಟೇ ಅಲ್ಲದೇ, ಇಡೀ ಭಾರತಕ್ಕೆ ತಾವು ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಶೀಲಾ ದೀಕ್ಷೀತ್ ನಂತರ ಕಾಂಗ್ರೆಸ್ ದೆಹಲಿಯಲ್ಲಿ ನೆಲ ಕಚ್ಚಿದ್ದರೇ, ಬೆಲೆ ಏರಿಕೆ ನಿಯಂತ್ರಿಸದೇ ಮತದಾರರ ತಾತ್ಸಾರಕ್ಕೆ ಒಳಗಾಗಿ 1998 ರಲ್ಲಿ ದೆಹಲಿ ಗದ್ದುಗೆ ಕಳೆದುಕೊಂಡಿದ್ದ ಬಿಜೆಪಿ ಅಲ್ಲಿಂದ ಮತ್ತೆ ಅಧಿಕಾರ ಹಿಡಿಯಲಾಗದೆ ಹಪಹಪಿಸುತ್ತಿದೆ.

ಈ ನಿಟ್ಟಿನಲ್ಲಿ ಇಂದಿನ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮಹತ್ತರ ಸಾಧನೆ (70 ರಲ್ಲಿ 63) ಮಾಡಿರುವ ಹಿಂದೆ ಇರುವ ಪ್ರಮುಖ ಹತ್ತು ಕಾರಣಗಳು ಇಲ್ಲಿವೆ.

ಅರವಿಂದ ಕೇಜ್ರಿವಾಲ್ ಚಾರ್ಮಿಂಗ್

ಅರವಿಂದ ಕೇಜ್ರಿವಾಲ್ ಚಾರ್ಮಿಂಗ್

ಒಂದು ಕಡೆ ಸೋತು ಸುಣ್ಣವಾಗಿರುವ ಕಾಂಗ್ರೆಸ್‌, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ಗೆ ಯಾವುದೇ ಪೈಪೋಟಿ ಒಡ್ಡಲಿಲ್ಲ. ಇನ್ನು ಬಿಜೆಪಿ ಕೂಡ ಅರವಿಂದ್ ಕೇಜ್ರಿವಾಲ್ ಸಮನಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿಲ್ಲ. ಇದನ್ನೆ ಬಲ ಮಾಡಿಕೊಂಡ ಆಪ್ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ "There Is No Alternative' TINA ಎಂದು ಸಾರಿದರು. ಹೀಗಾಗಿ ಜನಪ್ರಿಯ ಯೋಜನೆಗಳನ್ನು ಕೊಟ್ಟ "ಕೇಜ್ರಿವಾಲ್ ನಮ್ಮ ಸಿಎಂ' ಎಂದು ದೆಹಲಿ ಜನ ನಿರ್ಧಾರ ಮಾಡಿ ಆಪ್‌ಗೆ ಮತ ನೀಡಿದರು.

ಕೈ ಹಿಡಿದ ಜನಪ್ರಿಯ ಯೋಜನೆಗಳು

ಕೈ ಹಿಡಿದ ಜನಪ್ರಿಯ ಯೋಜನೆಗಳು

ಕಳೆದ ಐದು ವರ್ಷದಲ್ಲಿ ಕೇಜ್ರಿವಾಲ್ ಬಡ ಮತ್ತು ಮಧ್ಯಮ ವರ್ಗದ ಸಮಸ್ಯೆಗಳನ್ನು ಮನಗಂಡು ಅವುಗಳನ್ನು ಹಂತ ಹಂತವಾಗಿ ಬಗೆಹರಿಸುವಲ್ಲಿ ಹೆಚ್ಚು ತೊಡಗಿಸಿಕೊಂಡರು. ಹೆಚ್ಚು ವಿವಾದಾತ್ಮಕ ರಾಜಕೀಯ ಮಾಡಲು ಹೋಗಲಿಲ್ಲ. ಹೀಗಾಗಿ ಕೇಜ್ರಿವಾಲ್ ಮೊದಲ ಐದು ವರ್ಷದ ಅವಧಿಯಲ್ಲೇ ದೆಹಲಿ ಜನಕ್ಕೆ ಇಷ್ಟವಾದರು. ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, 2 ನೂರು ಯುನಿಟ್‌ವರೆಗೆ ಉಚಿತ ವಿದ್ಯುತ್, ಹತ್ತನೇ ತರಗತಿಯವರೆಗೆ ಉಚಿತ ಶಿಕ್ಷಣ, ಐದು ಲಕ್ಷ ರುಪಾಯಿವರಗೆ ಉಚಿತ ಆರೋಗ್ಯ ಸೇವೆ ಜಾರಿಗೆ ತಂದರು. ಈ ಯೋಜನೆಗಳು ದೆಹಲಿ ಮತದಾರರಿಗೆ ಹೆಚ್ಚು ಇಷ್ಟವಾದವು. ಬೆಲೆ ಏರಿಕೆ, ಆರ್ಥಿಕ ಕುಸಿತ, ಉದ್ಯೋಗ ಕಡಿತದ ವಿಷಯಗಳು ಬಿಜೆಪಿ ಮೇಲೆ ಪರಿಣಾಮ ಬೀರಿತು.

ಪರಿಣಾಮ ಬೀರದ ಮೋದಿ ಅಲೆ

ಪರಿಣಾಮ ಬೀರದ ಮೋದಿ ಅಲೆ

ದೆಹಲಿಯಲ್ಲಿ ಚುನಾವಣೆಗೆ ಬಿಜೆಪಿ ಪ್ರಬಲ ಅಸ್ತ್ರವಾಗಿದ್ದ "ಮೋದಿ ಅಲೆ' ನಡೆಯಲಿಲ್ಲ. "ದೇಶಕ್ಕೆ ಮೋದಿ, ದೆಹಲಿಗೆ ಕೇಜ್ರಿವಾಲ್' ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡರು. ಇದಕ್ಕೆ ಮುಖ್ಯ ಕಾರಣ ಕೇಜ್ರಿವಾಲ್ ಮೋದಿಗಿಂತ ಅಲ್ಲಿನ ಜನಕ್ಕೆ ಹತ್ತಿರವಾಗಿದ್ದು. ಇದಕ್ಕೆ ತಕ್ಕ ಹಾಗೆಯೇ ಕೇಜ್ರಿವಾಲ್ ಚುನಾವಣಾ ತಂತ್ರ ಹೆಣೆದಿದ್ದು ಆಪ್ ಗೆಲುವಿಗೆ ಕಾರಣವಾಯಿತು. ಅಲ್ಲದೇ ಮೋದಿ ಕೂಡ ದೆಹಲಿ ಚುನಾವಣೆಯಲ್ಲಿ ಈ ಸಾರಿ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ.

ಹಿಂದೂತ್ವದ ದಾಳ ಉರುಳಿಸಿದ್ದ ಕೇಜ್ರಿವಾಲ್

ಹಿಂದೂತ್ವದ ದಾಳ ಉರುಳಿಸಿದ್ದ ಕೇಜ್ರಿವಾಲ್

ಬಿಜೆಪಿ ಬಹುದೊಡ್ಡ ಯಶಸ್ಸಿಗೆ ಕಾರಣವಾಗುತ್ತಿದ್ದ ಹಿಂದುತ್ವದ ಬಗ್ಗೆ ಕೇಜ್ರಿವಾಲ್ ಈ ಸಾರಿ ಗಂಭೀರವಾಗಿದ್ದರು. ಹಾಗಾಗಿ ಬಹುಸಂಖ್ಯಾತರ ಮನ ಸೆಳೆಯುವಲ್ಲಿ ತಂತ್ರ ಹೆಣೆದರು. ಇದಕ್ಕಾಗಿ "ಮುಖ್ಯಮಂತ್ರಿ ತೀರ್ಥಯಾತ್ರಾ ಯೋಜನೆ' ಜಾರಿಗೆ ತಂದರು. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಪ್ರತಿ ವರ್ಷ 1,100 ಹಿರಿಯ ನಾಗರಿಕರಿಗೆ ದೇಶದ ಪ್ರಸಿದ್ದ ಯಾತ್ರಾ ಸ್ಥಳ ತೋರಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಹಿಂದೂಗಳು ಕೇಜ್ರಿವಾಲ್ ಕೈ ಹಿಡಿದರು ಎನ್ನಲಾಗಿದೆ. ಇದು ಬಿಜೆಪಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿತು.

ಬಿಜೆಪಿಯ ವೈಯಕ್ತಿಕ ಟೀಕೆ

ಬಿಜೆಪಿಯ ವೈಯಕ್ತಿಕ ಟೀಕೆ

ಈ ಸಾರಿಯ ಚುನಾವಣೆಯಲ್ಲಿ ಕೇಜ್ರಿವಾಲ್ ಅವರು ಪ್ರಬಲವಾಗಿ ಬೆಳೆದಿದ್ದನ್ನು ಅರಿತ ಬಿಜೆಪಿ, ಅವರ ಮೇಲೆ ವೈಯಕ್ತಿ ಟೀಕೆಗಳನ್ನು ಮಾಡಲು ಪ್ರಾರಂಭಿಸಿತು. ಜೆಎನ್‌ಯು, ಎನ್‌ಆರ್‌ಸಿ ಇಟ್ಟುಕೊಂಡು ಕೇಜ್ರಿವಾಲ್ "ಒಬ್ಬ ಭಯೋತ್ಪಾದಕ' ಎಂದು ಬಿಜೆಪಿ ಮುಖಂಡರು ಟೀಕೆ ಮಾಡಿದರು. ಆದರೆ, ಆಪ್ ಕಾರ್ಯಕರ್ತರು ಮಾತ್ರ ವಿಷಯಾಧಾರಿತವಾಗಿ ಚುನಾವಣೆ ಎದುರಿಸಲು ಮುಂದಾಗಿ, ಯಶಸ್ವಿಯಾದರು.

ಕೆಲವು ವಿಷಯದಲ್ಲಿ ಜಾಣ ನಡೆ

ಕೆಲವು ವಿಷಯದಲ್ಲಿ ಜಾಣ ನಡೆ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370ನೇ ವಿಧಿ ರದ್ದು ವಿಚಾರಕ್ಕೆ ಕೇಜ್ರಿವಾಲ್ ಬೆಂಬಲ ಸೂಚಿಸಿದ್ದರು. ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯವನ್ನೂ ಕೋರಿದ್ದರು. ಸಿಎಎ ಎನ್‌ಆರ್‌ಸಿ ವಿರುದ್ಧ ದೆಹಲಿಯಲ್ಲಿ ಕೇಂದ್ರ ಸರ್ಕಾರ ವಿರೋಧಿಸಿ ದೊಡ್ಡ ಪ್ರತಿಭಟನೆಗಳು ನಡೆಯುತ್ತಿದ್ದರೂ ಕೇಜ್ರಿವಾಲ್ ಈ ವಿಚಾರದಲ್ಲಿ ಮೌನ ವಹಿಸಿ, ರಾಷ್ಟ್ರವಾದಿಗಳ ಮೆಚ್ಚುಗೆ ಗಳಿಸಿಕೊಂಡರು.

ಸಾಮಾಜಿಕ ಜಾಲತಾಣಗಳ ಯಶಸ್ವಿ ಬಳಕೆ

ಸಾಮಾಜಿಕ ಜಾಲತಾಣಗಳ ಯಶಸ್ವಿ ಬಳಕೆ

ಸ್ವತಃ ಐಐಟಿ ಪದವೀಧರರಾಗಿರುವ (ಬಿ ಟೇಕ್) ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಐಟಿ ಸೆಲ್ ಬಗ್ಗೆ ಬಹಳ ತಿಳಿದುಕೊಂಡಿದ್ದಾರೆ. ವಿರೋಧ ಪಕ್ಷಗಳನ್ನು ಹಣೆಯುವಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಮುಂದೆ ಇರುವ ಬಿಜೆಪಿ ಐಟಿ ಸೆಲ್ ಗೆ ತಕ್ಕ ಉತ್ತರ ಕೊಡಲು ಆಪ್ ಐಟಿ ಸೆಲ್‌ನ್ನು ಸಜ್ಜುಗೊಳಿಸಿ, ಅದರ ಲಾಭ ಪಡೆದುಕೊಂಡರು.

ದೆಹಲಿಗೆ ಕೇಜ್ರಿವಾಲ್, ದೇಶಕ್ಕೆ ಮೋದಿ

ದೆಹಲಿಗೆ ಕೇಜ್ರಿವಾಲ್, ದೇಶಕ್ಕೆ ಮೋದಿ

ಕಳೆದ ಲೋಸಭೆ ಚುನಾವಣೆಯಲ್ಲಿ ಬಿಜೆಪಿ ಶೇ.56.58ರಷ್ಟು ಮತ ಪಡೆದು ದೆಹಲಿಯ ಎಲ್ಲ ಏಳು ಕ್ಷೇತ್ರಗಳನ್ನು ಗೆದ್ದಿತ್ತು. ಕಾಂಗ್ರೆಸ್ ಶೇ.22.46ರಷ್ಟು ಮತ ಪಡೆದು ಎರಡನೇ ಸ್ಥಾನದಲ್ಲಿ ನಿಂತರೆ, ಆಪ್ ಕೇವಲ ಶೇ.18ರಷ್ಟು ಮತಗಳನ್ನು ಮಾತ್ರ ಪಡೆದಿತ್ತು. ಲೋಕಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಆಪ್ ಬಿಜೆಪಿಯನ್ನು ಮಣಿಸಿ, ತಾನೊಂದು ದೆಹಲಿ ಮತದಾರರ ಸಮರ್ಥ ಪ್ರತಿನಿಧಿ ಎಂದು ತೋರಿಸಿ ಕೊಟ್ಟಿದೆ.

ಆಡಳಿತ ವಿರೋಧಿ ಅಲೆ ಬಳಸಿಕೊಳ್ಳಲಿಲ್ಲ

ಆಡಳಿತ ವಿರೋಧಿ ಅಲೆ ಬಳಸಿಕೊಳ್ಳಲಿಲ್ಲ

ಈ ಸಾರಿಯ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತಕ್ಕಮಟ್ಟಿಗೆ ಆಡಳಿತ ವಿರೋಧಿ ಅಲೆ ಇತ್ತು. ಆದರೆ, ಇದನ್ನು ಪ್ರತಿಪಕ್ಷ ಬಿಜೆಪಿ ಸಮರ್ಥವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂದು ರಾಜಕೀಯ ತಜ್ಞರು ವಿಶ್ಲೇಸಿಸುತ್ತಿದ್ದಾರೆ. ಅದಾಗ್ಯೂ ಕಳೆದ ಚುನಾವಣೆಗಿಂತ ಮೂರು ಸ್ಥಾನಗಳನ್ನು ಹೆಚ್ಚು ಪಡೆದಿದ್ದಲ್ಲದೇ ಮತಗಳಿಕೆಯನ್ನೂ ಈ ಸಾರಿ ಬಿಜೆಪಿ ಹೆಚ್ಚಿಸಿಕೊಂಡಿರುವುದೇ ಅದರ ಸಾಧನೆಯಾಗಿದೆ.

ಪ್ರಬಲ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು

ಪ್ರಬಲ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು

ಮೆಟ್ರೊಪಾಲಿಟಿನ್ ನಗರವಾದ ದೆಹಲಿಯಲ್ಲಿ ಎಲ್ಲಾ ತರದ ಮತದಾರರನ್ನು ಸೆಳೆದು 70 ಕ್ಷೇತ್ರಗಳಲ್ಲಿ 63 ಸ್ಥಾನಗಳನ್ನು ಪಡೆಯುವುದು ಸಣ್ಣ ಮಾತೇನಲ್ಲ. ಅದು ಬಿಜೆಪಿ ಹಾಗೂ ಕಾಂಗ್ರೆಸ್‌ನಂತಹ ಎರಡು ಪ್ರಬಲ ರಾಷ್ಟ್ರೀಯ ಪಕ್ಷಗಳನ್ನು ಪಕ್ಕಕ್ಕೆ ಸರಿಸಿ, ತಾವೊಬ್ಬ ನಂಬರ್ 1 ರಾಜಕಾರಣಿ, ಆಡಳಿತಗಾರ ಎಂಬುದನ್ನು ತೋರಿಸಿದ್ದಾರೆ. ಈ ಸಾರಿಯ ಚುನಾವಣೆಯಲ್ಲಿ ಕೇಜ್ರಿವಾಲ್ ಬೆನ್ನಿಗೆ ಚುನಾವಣಾ ತಜ್ಞ ಪ್ರಶಾಂತ್ ಕಿಶೂರ್ ಬೆಂಬಲವೂ ಆಪ್ ಕೈ ಹಿಡಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+