ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ನೀಡ್ತೀವಿ ಎಂದ ಕಾಂಗ್ರೆಸ್
ನವದೆಹಲಿ, ನವೆಂಬರ್ 9: ಅಯೋಧ್ಯಾ ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶನಿವಾರ ನೀಡಿದ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, 'ಸುಪ್ರೀಂಕೋರ್ಟ್ ತೀರ್ಪು ಹೊರಬಂದಿದೆ. ನಾವು ರಾಮಮಂದಿರ ನಿರ್ಮಾಣದ ಪರವಾಗಿದ್ದೇವೆ. ಈ ತೀರ್ಪು ಮಂದಿರ ನಿರ್ಮಾಣಕ್ಕೆ ಬಾಗಿಲು ತೆರೆದಿರುವುದು ಮಾತ್ರವಲ್ಲ, ಈ ವಿವಾದವನ್ನು ರಾಜಕೀಯಗೊಳಿಸುತ್ತಿದ್ದ ಬಿಜೆಪಿ ಮತ್ತು ಇತರರಿಗೆ ಬಾಗಿಲನ್ನು ಮುಚ್ಚಿದೆ' ಎಂದು ಬಿಜೆಪಿ ವಿರುದ್ಧ ಕೂಡ ಹರಿಹಾಯ್ದರು.
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ರಾಮಮಂದಿರ ನಿರ್ಮಾಣದ ಪರವಾಗಿ ನಿರ್ಣಯ ಕೈಗೊಂಡಿದೆ. ಎಲ್ಲ ಪಕ್ಷಗಳು ಮತ್ತು ಸಮುದಾಯಗಳು ಜಾತ್ಯತೀತ ನಿಲುವಿಗೆ ಬದ್ಧರಾಗಿ ಹಾಗೂ ಸಂವಿಧಾನಾತ್ಮಕ ನಿಯಮಗಳಿಗೆ ಅನುಗುಣವಾಗಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವಂತೆ ಕಾಂಗ್ರೆಸ್ ಮನವಿ ಮಾಡಿತು.

ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಯಾವುದೇ ವ್ಯಕ್ತಿ, ಗುಂಪು, ಸಮುದಾಯ ಅಥವಾ ರಾಜಕೀಯ ಪಕ್ಷಕ್ಕೆ ಶ್ರೇಯಸ್ಸು ನೀಡುವ ಅಥವಾ ಅಪಕೀರ್ತಿ ಉಂಟುಮಾಡುವ ವಿಚಾರವಲ್ಲ ಎಂದು ಪ್ರಶ್ನೆಯೊಂದಕ್ಕೆ ಸುರ್ಜೇವಾಲಾ ಪ್ರತಿಕ್ರಿಯೆ ನೀಡಿದರು.
ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತದೆಯೇ ಎಂಬ ಪ್ರಶ್ನೆಗೆ ಅವರು, ಕಾಂಗ್ರೆಸ್ ರಾಮಮಂದಿರ ನಿರ್ಮಾಣದ ಪರವಾಗಿ ಇದೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications