ಮಾತುಕತೆ ಬಾಕಿ ಇದೆ ಎಂದ ಕಾಂಗ್ರೆಸ್: ಸರ್ಕಾರ ರಚನೆ ಇನ್ನೂ ಅತಂತ್ರ
ನವದೆಹಲಿ, ನವೆಂಬರ್ 11: ಶಿವಸೇನಾ-ಎನ್ಸಿಪಿ ನೇತೃತ್ವದ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಮಾಹಿತಿ ಬಂದ ಕೂಡಲೇ ಶಿವಸೇನಾ ಸರ್ಕಾರ ರಚನೆಗೆ ಸಿದ್ಧತೆ ನಡೆಸಿತ್ತು. ಆದರೆ ಕಾಂಗ್ರೆಸ್ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಮಾತ್ರವಲ್ಲ, ಸರ್ಕಾರ ರಚನೆಗೆ ಬೆಂಬಲ ನೀಡುವ ಸಂಬಂಧ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎನ್ನುವ ಮೂಲಕ ಶಿವಸೇನಾದ ಸರ್ಕಾರ ರಚನೆಯ ಉತ್ಸಾಹಕ್ಕೆ ತಣ್ಣೀರು ಹಾಕಿದೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಕುರಿತಂತೆ ತನ್ನ ಮಿತ್ರಪಕ್ಷ ಎನ್ಸಿಪಿ ಜತೆ ಮಾತುಕತೆ ನಡೆಸಬೇಕಿದೆ ಎಂದು ಕಾಂಗ್ರೆಸ್ ಹೇಳಿದೆ. ಮಂಗಳವಾರ ಎನ್ಸಿಪಿ ನಾಯಕ ಶರದ್ ಪವಾರ್ ಅವರೊಂದಿಗೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ನ ಇತರೆ ನಾಯಕರು ಮಾತುಕತೆ ನಡೆಸಲಿದ್ದಾರೆ. ಶಿವಸೇನಾಗೆ ಬೆಂಬಲ ನೀಡುವುದರಿಂದ ಉಂಟಾಗುವ ಸಮಸ್ಯೆಗಳು ಮತ್ತು ಪ್ರಯೋಜನಗಳ ಬಗ್ಗೆ ಚರ್ಚಿಸಲಿದ್ದಾರೆ. ಬಳಿಕವೇ ಸರ್ಕಾರ ರಚನೆಗೆ ತಮ್ಮ 44 ಶಾಸಕರ ಬೆಂಬಲ ಇದೆ ಎಂಬ ಪತ್ರ ರಾಜ್ಯಪಾಲರಿಗೆ ರವಾನಿಸಲು ತೀರ್ಮಾನಿಸಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಸೋಮವಾರ ಬೆಳಿಗ್ಗೆ ಸಭೆ ನಡೆಸಿದ್ದು, ಮಹಾರಾಷ್ಟ್ರದ ಸ್ಥಿತಿಗತಿಯ ಕುರಿತು ವಿಸ್ತೃತ ಚರ್ಚೆ ನಡೆಸಿದೆ. ಬಳಿಕ ಮಹಾರಾಷ್ಟ್ರದ ನಾಯಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷರು ಶರದ್ ಪವಾರ್ ಅವರೊಂದಿಗೆ ಚರ್ಚಿಸಿದ್ದು, ಎನ್ಸಿಪಿ ಜತೆ ಮಾತುಕತೆ ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.

ಮುಖಂಡರು ಮತ್ತು ಶಾಸಕರ ಅಭಿಪ್ರಾಯ ಪಡೆದ ಬಳಿಕ ಕಾಂಗ್ರೆಸ್ ಬೆಂಬಲದ ಪತ್ರ ರವಾನಿಸಲಿದೆ ಎನ್ನಲಾಗಿತ್ತು. ರಾಜ್ಯಪಾಲರನ್ನು ಭೇಟಿ ಮಾಡಿ ಕಾಲಾವಕಾಶ ಕೋರಿದ್ದ ಶಿವಸೇನಾ ಕೂಡ ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಲ್ಲಿತ್ತು. ಸದ್ಯಕ್ಕೆ ಕಾಂಗ್ರೆಸ್ ಅವಸರದ ತೀರ್ಮಾನ ತೆಗೆದುಕೊಳ್ಳುವುದು ಬೇಡ ಎಂದು ಚಿಂತನೆ ನಡೆಸಿದ್ದು, ಶಿವಸೇನಾದ ನಡೆಗೆ ಬ್ರೇಕ್ ಹಾಕಿದಂತಾಗಿದೆ.












Click it and Unblock the Notifications