ಕೊರೊನಾ ನಿಯಮ ವಿಧಿಸುವ ಸರ್ಕಾರದಿಂದಲೇ ನಿಯಮಗಳ ಉಲ್ಲಂಘನೆ: ಮಲ್ಲಿಕಾರ್ಜುನ್ ಖರ್ಗೆ ಕಿಡಿ
ನವದೆಹಲಿ, ಜುಲೈ 20: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ದೂಷಿಸಿದ್ದಾರೆ.
ರಾಜ್ಯಸಭೆಯಲ್ಲಿ ಕೊರೊನಾವೈರಸ್ ಸೋಂಕಿನ ಬಗ್ಗೆ ಚರ್ಚೆ ವೇಳೆ ಅವರು ಮಾತನಾಡಿದರು. ಕೊವಿಡ್-19 ನಿಯಂತ್ರಿಸುವುದಕ್ಕೆ ಹೋರಾಡಿದ ವೈದ್ಯರು, ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
"ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಹಿಂದೆ ಮೇಣದ ಬತ್ತಿ ಹಚ್ಚುವುದಕ್ಕೆ ಕರೆ ನೀಡಿದರು, ಜನರು ಅವರ ಮಾತಿನಂತೆ ನಡೆದುಕೊಂಡರು. ಪ್ರಧಾನಿ ಮೇಲೆ ವಿಶ್ವಾಸವಿಟ್ಟು ಹೇಳಿದಂತೆ ನಿಯಮವನ್ನು ಪಾಲಿಸಿದರು. ಆದರೆ ತಮ್ಮ ಆಶ್ವಾಸನೆಗಳನ್ನು ಈಡೇರಿಸದೇ ಪ್ರಧಾನಮಂತ್ರಿಗಳು ಅಂಥ ಜನರನ್ನು ನಿರಾಸೆಗೊಳಿಸಿದರು," ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.

ಪ್ರಧಾನಿ ಮೋದಿ ಸರ್ಕಾರಕ್ಕೆ ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನೆ
"ದೇಶದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕನಿಷ್ಠ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಮೂಲಕ ಆಗಾಗ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳಬೇಕು. ಹೀಗೆ ಸಾಲು ಸಾಲು ನಿಯಮಗಳನ್ನು ಸಾರ್ವಜನಿಕರಿಗಾಗಿ ಜಾರಿಗೊಳಿಸಲಾಯಿತು. ಹೀಗೆ ನಿಯಮಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರ ತಾನು ಮಾಡಿದ್ದೇನು," ಎಂದು ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಕೊವಿಡ್-19 ನಿಯಮಗಳನ್ನು ಉಲ್ಲಂಘಿಸಿದ ಸರ್ಕಾರ
"ಕೇಂದ್ರ ಸರ್ಕಾರವು ಜಾರಿಗೊಳಿಸಿದ ಕೊರೊನಾವೈರಸ್ ನಿಯಮಗಳನ್ನು ಸಾರ್ವಜನಿಕರು ಪಾಲಿಸುವುದಕ್ಕೆ ಆರಂಭಿಸಿದರು. ಆದರೆ ಸರ್ಕಾರ ಏನು ಮಾಡಿತು. ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸುವುದರ ಮೂಲಕ ತಮ್ಮ ನಿಯಮಗಳನ್ನು ತಾವೇ ಉಲ್ಲಂಘನೆ ಮಾಡಿದರು. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದರ ಬಗ್ಗೆ ಜಾಗೃತಿ ಮೂಡಿಸದೇ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಲಾಯಿತು. ಚುನಾವಣಾ ಪ್ರಚಾರ ಸಭೆಗಳ ಮೂಲಕ ಕೊವಿಡ್-19 ಸೋಂಕು ಹರಡುವುದಕ್ಕೆ ಸರ್ಕಾರವೇ ನೇರ ಹೊಣೆ," ಎಂದು ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದರು.

ಕೇಂದ್ರ ಆರೋಗ್ಯ ಸಚಿವರು ಬಲಿಪಶು ಆದರೇ?
"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಪಂಚರಾಜ್ಯ ಚುನಾವಣೆಗಳನ್ನು ನಡೆಸಲಾಯಿತು. ಈ ಚುನಾವಣಾ ಸಂದರ್ಭದಲ್ಲಿ ಸರ್ಕಾರ ನಿಯಮಗಳ ಸ್ಪಷ್ಟ ಉಲ್ಲಂಘನೆಗೆ ಕಾರಣವಾಯಿತು. ಹೀಗೆ ತಾನು ಮಾಡಿದ ತಪ್ಪಿಗೆ ಇನ್ಯಾರನ್ನೋ ಬಲಿಪಶು ಮಾಡಲಾಯಿತು," ಎನ್ನುವ ಮೂಲಕ ಮಾಜಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೆಸರು ಉಲ್ಲೇಘಿಸದೇ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.

ಬಂಗಾಳದಲ್ಲಿ ಕೊವಿಡ್-19 ನಿಯಂತ್ರಿಸಿದ ಸಿಎಂ
"ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಿತು. ಆದರೆ ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಸಲಾಯಿತು. ಮತದಾನಕ್ಕೂ ಮೊದಲು ರಾಜ್ಯದಲ್ಲಿ ಕೊವಿಡ್-19 ಸೋಂಕು ಹರಡುವಿಕೆ ಪ್ರಮಾಣ ಶೇ.2.3ರಷ್ಟಿತ್ತು. 8 ಹಂತಗಳ ಮತದಾನದ ಬಳಿಕ ರಾಜ್ಯದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣವು ಶೇ.33ಕ್ಕೆ ಏರಿಕೆಯಾಗಿದೆ. ನಮ್ಮ ಟಿಎಂಸಿ ಮುಖ್ಯಮಂತ್ರಿ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಇಂದು ಮತ್ತೆ ರಾಜ್ಯದಲ್ಲಿ ಹರಡುವಿಕೆ ಪ್ರಮಾಣ ಶೇ.1.8ಕ್ಕೆ ಇಳಿಕೆಯಾಗಿದೆ," ಎಂದು ರಾಜ್ಯಸಭೆಯಲ್ಲಿ ಟಿಎಂಸಿ ಸಂಸದ ಡಾ. ಸಂತಾನು ಸೇನ್ ಹೇಳಿದರು.












Click it and Unblock the Notifications