ವಿಡಿಯೋ; ಹೊಸ ವರ್ಷದಂದು ಭಕ್ತರಿಗೆ ಹಂಚಲು 2.5 ಲಕ್ಷ ಲಡ್ಡು ತಯಾರಿ
ಮೈಸೂರು, ಡಿಸೆಂಬರ್ 26; ಹೊಸ ವರ್ಷದ ಸಂಭ್ರಮವನ್ನು ಸಿಹಿ ಹಂಚುವ ಮೂಲಕ ಸ್ವಾಗತಿಸುವುದು ವಾಡಿಕೆ. ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ತಿರುಪತಿ ಮಾದರಿಯ ಲಡ್ಡು ವಿತರಿಸುವ ಮೂಲಕ ಹೊಸ ವರ್ಷವನ್ನ ಸ್ವಾಗತಿಸುವ ಸಂಪ್ರದಾಯ ಬೆಳೆದು ಬಂದಿದೆ.
ಈ ವರ್ಷವೂ ಸಹ ಭಕ್ತರಿಗೆ ಲಡ್ಡು ವಿತರಿಸುವ ಮೂಲಕ ಹೊಸ ವರ್ಷ ಸ್ವಾಗತಿಸಲು ದೇವಸ್ಥಾನದ ಆಡಳಿತ ಮಂಡಳಿ ಸಜ್ಜಾಗುತ್ತಿದೆ. ಹೊಸ ವರ್ಷದ ಮೊದಲ ದಿನ ಭಕ್ತರಿಗೆ ಲಡ್ಡು ವಿತರಿಸಲು ತಯಾರಿ ನಡೆಯುತ್ತಿದೆ. ಈ ಬಾರಿ 2.5 ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಿಸಲು ಉದ್ದೇಶಿಸಿದ್ದು ಲಡ್ಡು ತಯಾರಿ ಭರದಿಂದ ಸಾಗುತ್ತಿದೆ.
ದೇವಸ್ಥಾನದ ಆವರಣದಲ್ಲಿ 60ಕ್ಕೂ ಹೆಚ್ಚು ಬಾಣಸಿಗರು ಲಡ್ಡು ತಯಾರಿಯಲ್ಲಿ ನಿರತರಾಗಿದ್ದಾರೆ. 2 ಕೆಜಿ ತೂಕದ 10,000 ಲಡ್ಡು, 200 ಗ್ರಾಂ ತೂಕದ 2.5 ಲಕ್ಷ ಲಡ್ಡು ತಯಾರಿ ಕಾರ್ಯ ಭರದಿಂದ ಸಾಗುತ್ತಿದೆ. ಲಡ್ಡು ತಯಾರಿಕೆಗಾಗಿ 50 ಕ್ವಿಂಟಾಲ್ ಕಡ್ಲೆ ಹಿಟ್ಟು,100 ಕ್ವಿಂಟಾಲ್ ಸಕ್ಕರೆ, 4000 ಲೀಟರ್ ಖಾದ್ಯ ತೈಲ, 200 ಕೆಜಿ ಗೋಡಂಬಿ, 200 ಕೆಜಿ ಒಣದ್ರಾಕ್ಷಿ, 100 ಕೆಜಿ ಬಾದಾಮಿ, 200 ಕೆಜಿ ಡ್ರೈ ಫ್ರೂಟ್ಸ್, 500 ಕೆಜಿ ಬೂರಾ ಸಕ್ಕರೆ, 100 ಕೆಜಿ ಪಿಸ್ತಾ, 20 ಕೆಜಿ ಏಲಕ್ಕಿ, 20 ಕೆಜಿ ಜಾಕಾಯಿ ಜಾಪತ್ರೆ, 100 ಕೆಜಿ ಲವಂಗ ಹಾಗೂ 5 ಕೆಜಿ ಪಚ್ಚ ಕರ್ಪೂರ ಬಳಕೆಯಾಗಲಿದೆ.

ಡಿಸೆಂಬರ್ 20ರಿಂದ ಆರಂಭವಾದ ಲಡ್ಡು ತಯಾರಿಕಾ ಕಾರ್ಯ ಡಿಸೆಂಬರ್ 31ರವರಗೆ ನಡೆಯಲಿದೆ. ಹೊಸ ವರ್ಷದ ದಿನ ಬೆಳಗ್ಗೆ 4 ಗಂಟೆಗೆ ಯೋಗಾ ನರಸಿಂಹಸ್ವಾಮಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನಂತರ ಭಕ್ತರಿಗೆ ಲಡ್ಡು ಪ್ರಸಾದ ವಿತರಣೆ ಮಾಡಲಾಗುತ್ತದೆ.
ಲೋಕ ಕಲ್ಯಾಣಾರ್ಥವಾಗಿ, ಯಾವುದೇ ಜಾತಿ ಮತ ಭೇಧವಿಲ್ಲದೆ ಸರ್ವಧರ್ಮ ಸಮನ್ವಯತೆಗಾಗಿ ಪ್ರಾರ್ಥಿಸಿ ಭಕ್ತರಿಗೆ ಲಡ್ಡು ಪ್ರಸಾದ ವಿತರಣೆ ಮಾಡಲಾಗುತ್ತದೆ. ಅಂದು ಪ್ರೊ. ಭಾಷ್ಯಂ ಸ್ವಾಮೀಜಿಯವರು ಹಾಗೂ ಶ್ರೀನಿವಾಸ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿದೆ. ಪ್ರೊ. ಭಾಷ್ಯಂ ಸ್ವಾಮೀಜಿಯವರು ಭಕ್ತರಿಗೆ ಲಡ್ಡು ವಿತರಿಸಿ ಆಶೀರ್ವದಿಸಲಿದ್ದಾರೆ.












Click it and Unblock the Notifications