ವಿಶ್ವನಾಥ್ ಬಿಜೆಪಿಗೆ ಸೇಲ್ ಆಗಿದ್ದಾರೆ: ಜೆಡಿಎಸ್ ರಾಜ್ಯ ವಕ್ತಾರ ರವಿಚಂದ್ರೇಗೌಡ
ಮೈಸೂರು, ಜುಲೈ 23 : "ಶಾಸಕ ಅಡಗೂರು ವಿಶ್ವನಾಥ್ ಬಿಜೆಪಿಗೆ ಮಾರಾಟವಾಗಿದ್ದಾರೆ" ಎಂದು ಜೆಡಿಎಸ್ ರಾಜ್ಯ ವಕ್ತಾರ ಎನ್ ಆರ್ ರವಿಚಂದ್ರೇಗೌಡ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯಿಂದ 28 ಕೋಟಿ ರೂಪಾಯಿಗಳ ಆಫರ್ ಇದೆ ಎಂದು ಸಚಿವ ಸಾ.ರಾ.ಮಹೇಶ್ ಅವರ ಬಳಿ ಹೇಳಿಕೊಂಡಿದ್ದರು. ಆದರೆ ತಮಗೆ ರಾಜಕೀಯ ಪುನರ್ ಜನ್ಮ ನೀಡಿದ ಜೆಡಿಎಸ್ ಅನ್ನು ಬಿಡುವುದಿಲ್ಲ ಎಂದಿದ್ದರು. ಇಂದು ಮುಂಬೈನಲ್ಲಿ ಕುಳಿತು ಪಕ್ಷ ಹಾಗೂ ಕ್ಷೇತ್ರದ ಮತದಾರರ ಬೆನ್ನಿಗೆ ಚೂರಿ ಹಾಕಿದ್ದಾರೆ" ಎಂದು ತಿಳಿಸಿದರು.
"ಕಾಂಗ್ರೆಸ್ ನಲ್ಲಿ ಅಸ್ತಿತ್ವ ಕಳೆದುಕೊಂಡಿದ್ದ ಅವರನ್ನು ಪಕ್ಷಕ್ಕೆ ಕರೆತಂದ ಸಚಿವ ಸಾ.ರಾ.ಮಹೇಶ್ ಅವರ ವಿರುದ್ಧವೂ ಮಾತನಾಡಿರುವುದು ನಾಚಿಕೆಗೇಡು. ಅವರು ನೀಡುತ್ತಿರುವ ಹೇಳಿಕೆಗಳು ಸ್ವಂತದಲ್ಲ. ಬಿಜೆಪಿ ಭಯದಿಂದ ಅಮಿತ್ ಶಾ ಅಣತಿಯಂತೆ ಹೇಳಿಕೆ ನೀಡುತ್ತಿದ್ದಾರೆ. ವಿಶ್ವನಾಥ್ ಅವರಿಗೆ ಹುಣಸೂರಿನಲ್ಲಿ ಟಿಕೆಟ್ ಕೊಡಿಸಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಅವರು ಚುನಾವಣೆಗೆ ನಿಲ್ಲದೇ ಇದ್ದಿದ್ದರೆ ಇಂದು ಪ್ರಜ್ವಲ್ ರೇವಣ್ಣ ಸ್ಪರ್ಧಿಸಿ ಶಾಸಕರಾಗುತ್ತಿದ್ದರು. ಆಗ ಮಾಜಿ ಪ್ರಧಾನಿ ದೇವೇಗೌಡರು ಹಾಸನದಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸಂಸದರಾಗುತ್ತಿದ್ದರು. ತಮಗೆ ಸ್ಥಾನ ಕೊಟ್ಟ ಪಕ್ಷಕ್ಕೆ ಸರಿಯಾದ ಪಾಠ ಕಲಿಸಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಇಂದು ಕ್ಷೇತ್ರದಲ್ಲಿ ಮಳೆಯಿಲ್ಲ. ಕುಡಿಯುವ ನೀರಿಗೆ ಹಾಹಾಕಾರವಿದೆ. ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಇವನ್ನೆಲ್ಲ ವಿಶ್ವನಾಥ್ ಕಡೆಗಣಿಸಿದ್ದಾರೆ. ಕ್ಷೇತ್ರದ ಮತದಾರರ ಬಗ್ಗೆಯಾಗಲಿ ಜೆಡಿಎಸ್ ಬಗ್ಗೆಯಾಗಲಿ ಕಿಂಚಿತ್ತು ಗೌರವವಿದ್ದರೆ ಸದನದಲ್ಲಿ ಪಾಲ್ಗೊಳ್ಳಬೇಕಿತ್ತು" ಎಂದು ಸಿಡಿಮಿಡಿಗೊಂಡಿದ್ದಾರೆ.












Click it and Unblock the Notifications