ಸಿದ್ದರಾಮಯ್ಯನವರಿಗೆ ಹೊಗಳಿ ಬಿಜೆಪಿ ಬಗ್ಗೆ ವ್ಯಂಗ್ಯವಾಡಿದ ವಿಶ್ವನಾಥ್
ಮೈಸೂರು, ನವೆಂಬರ್. 2: ಉಪಚುನಾವಣೆಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಸಮರ್ಥವಾಗಿ ಎದುರಿಸಲಿದ್ದು, ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸ್ಥಿತಿ ತಲುಪಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಆಪರೇಷನ್ ಕಮಲ ಅವರಿಗೆ ತಿರುಗೇಟು ನೀಡಿದೆ. ಕೈ ಅಭ್ಯರ್ಥಿಯನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಈ ಹಿಂದೆ ಮಾಡಿತ್ತು. ಆದರೆ ಈಗ ಕೈ ಅಭ್ಯರ್ಥಿ ಮರಳಿ ತನ್ನ ಪಕ್ಷಕ್ಕೆ ಬಂದಿದ್ದಾರೆ. ರಾಷ್ಟ್ರೀಯ ಪಕ್ಷ ಬಿಜೆಪಿ ದಯನೀಯ ಸ್ಥಿತಿಯಲ್ಲಿ ಇದೆ.
ಸಿದ್ದರಾಮಯ್ಯನವರ ಮಗನ ಸಾವನ್ನು ರೆಡ್ಡಿಗಳು ವೈಭವೀಕರಿಸಿದ್ದಾರೆ. ಸಿದ್ದರಾಮಯ್ಯನವರ ಕುಟುಂಬದ ಸಾವಿನ ಶೋಕವನ್ನು ಮತ್ತೆ ನೆನಪಿಸಿದ್ದಾರೆ. ಬಿಜೆಪಿಗೆ ಮನುಷ್ಯತ್ವ ಇಲ್ಲ ಎಂದು ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಮನಗರದ ರಾಜಕೀಯ ಬೆಳವಣಿಗೆ ಕುರಿತು ಬಿಜೆಪಿ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರತಾಪ್ ಸಿಂಹಗೆ 2014ರ ಲೋಕಸಭೆ ಚುನಾವಣೆಯನ್ನು ನೆನಪಿಸಿ. ಯಾರಿಂದ ಗೆದ್ದರು ಅಂತ ಗೊತ್ತಾಗುತ್ತದೆ ಎಂದು ತಿಳಿಸಿದರು. ಮುಂದೆ ಓದಿ...

ಸಿದ್ದರಾಮಯ್ಯನವರ ಮೇಲೆ ಮುನಿಸಿಲ್ಲ
"ಸಿದ್ದರಾಮಯ್ಯನವರ ಮೇಲೆ ನನಗೇನೂ ಮುನಿಸಿಲ್ಲ. ನಾವೇನೂ ಶತ್ರುಗಳಲ್ಲ. ಒಳ್ಳೆಯ ಆಡಳಿತ ಕೊಟ್ಟವರ ಸಾಲಿನಲ್ಲಿ ಸಿದ್ದರಾಮಯ್ಯ ಅವರಿದ್ದಾರೆ. ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ, ಎಸ್.ಎಂ.ಕೃಷ್ಣ, ಎಚ್.ಡಿ ಕುಮಾರಸ್ವಾಮಿ ಇವರೆಲ್ಲಾ ಒಳ್ಳೆಯ ಆಡಳಿತ ಕೊಟ್ಟವರು" ಎಂದು ವಿಶ್ವನಾಥ್ ಪ್ರಶಂಸಿಸಿದರು.

ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸುತ್ತೇವೆ
ಈ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಯಲಿದೆ ಎಂದ ವಿಶ್ವನಾಥ್ ಈಗಾಗಲೇ ಸೀಟು ಹಂಚಿಕೆ ಬಗ್ಗೆಯೂ ಚರ್ಚೆಯೂ ಆಗಿದೆ. ಈ ಉಪಚುನಾವಣೆಯ ಫಲಿತಾಂಶ ಏನೇ ಬಂದರೂ ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸುತ್ತೇವೆ. ಕೋಮುವಾದಿ ಪಕ್ಷಗಳ ವಿರುದ್ಧ ಹೋರಾಟಕ್ಕಾಗಿ ನಮ್ಮ ಮೈತ್ರಿ ಇರಲಿದೆ ಎಂದರು.

ಮೋದಿ ಭಾರತ ಒಡೆಯುತ್ತಿದ್ದಾರೆ
ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದಕ್ಕೆ ಆಕ್ಷೇಪಿಸಿದ ವಿಶ್ವನಾಥ್ ಹಿಂದಿ, ಹಿಂದೂ, ಹಿಂದೂಸ್ತಾನದ ಹೆಸರಲ್ಲಿ ಭಾರತವನ್ನು ಮೋದಿ ಒಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಮೆ ಅನಾವರಣಗೊಳಿಸಿರುವುದು ವ್ಯಂಗ್ಯದಂತಿದೆ
ಭಾರತಕ್ಕೆ ಏಕತೆ ರೂಪ ನೀಡಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಅನಾವರಣಗೊಳಿಸುವುದು ವ್ಯಂಗ್ಯದಂತಿದೆ. ಮೋದಿ ದೇಶವನ್ನು ಒಗ್ಗೂಡಿಸುವ ಯಾವ ಕೆಲಸವನ್ನೂ ಮಾಡಿಲ್ಲ. ಅಂಥವರು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಅನಾವರಣ ಮಾಡಿದ್ದಾರೆ ಎಂದು ವಿಶ್ವನಾಥ್ ಟೀಕಿಸಿದರು.












Click it and Unblock the Notifications