ಕೆಆರ್ ಎಸ್ ಡಿಸ್ನಿಲ್ಯಾಂಡ್ ಯೋಜನೆಗೆ ಮೈತ್ರಿ ಸರ್ಕಾರದಲ್ಲೇ ಭುಗಿಲೆದ್ದ ಅಸಮಾಧಾನ
ಮೈಸೂರು, ನವೆಂಬರ್. 22 : ಕೃಷ್ಣರಾಜ ಸಾಗರ ಜಲಾಶಯದ ಭದ್ರತೆ ಹಾಗೂ ರೈತರ ಹಿತದೃಷ್ಟಿಯಿಂದ ಕೆಆರ್ಎಸ್ ಉದ್ಯಾನವನದ ಬಳಿ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನ ಹಾಗೂ ಕಾವೇರಿ ಪ್ರತಿಮೆ ನಿರ್ಮಾಣ ಸಮಂಜಸವಲ್ಲ ಎಂದು ಜಾ.ದಳ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಯೋಜನೆಗೆ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ತಜ್ಞರು ಕೂಡ ವಿರೋಧಿಸಿದ್ದಾರೆ ಎಂದರು.
ರೈತರ ಹಿತದೃಷ್ಟಿಯಿಂದ ಯೋಜನೆ ಸೂಕ್ತವಲ್ಲ. ಕೆಆರ್ಎಸ್ ನಲ್ಲಿ ಡಿಸ್ನಿಲ್ಯಾಂಡ್, ಪ್ರತಿಮೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮರು ಪರಿಶೀಲನೆ ಮಾಡುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಅವರಿಗೆ ಸಲಹೆ ನೀಡುತ್ತೇನೆ.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಭಾರಿ ಉತ್ಸಾಹದಿಂದ ಡಿಸ್ನಿಲ್ಯಾಂಡ್ ನಿರ್ಮಾಣ ಮಾಡುವುದಕ್ಕೆ ಹೊರಟಿದ್ದಾರೆ. ಆದರೆ ಇದರ ಸಾಧ್ಯಾ ಸಾಧ್ಯತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು . ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸುತ್ತಿರುವ, ರಾಷ್ಟ್ರದ ಆಹಾರ ಸಂಪತ್ತು ಹೆಚ್ಚಿಸುತ್ತಿರುವ ಹಾಗೂ ಲಕ್ಷಾಂತರ ಜನರ ಬದುಕಾಗಿರುವ ಕೆಆರ್ಎಸ್ ಗೆ ಯಾವುದೇ ಸಮಸ್ಯೆಯಾಗಬಾರದು ಎಂದರು.
ಡಿಸ್ನಿಲ್ಯಾಂಡ್, ಕಾವೇರಿ ಪ್ರತಿಮೆ ಬದಲು 2014ರ ಆಯವ್ಯಯದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತರಲು ಮುಂದಾಗಿದ್ದ ಮೈಸೂರು ರಾಯಲ್ ಪ್ರಾದೇಶಿಕ ಪ್ರವಾಸೋದ್ಯಮ ಅಭಿವೃದ್ಧಿ (ರಾಯಲ್ ರೀಜನಲ್ ಟೂರಿಸಮ್ ಡೆವಲಪ್ ಮೆಂಟ್ ಮೈಸೂರು) ಯೋಜನೆಗೆ ಜೀವ ತುಂಬಿದರೆ ಮೈಸೂರು ಭಾಗಕ್ಕೆ ಹೆಚ್ಚಿನ ಲಾಭವಾಗಲಿದೆ.
ನಾಡಿನ ಜನತೆಗೆ ನಾಲ್ವಡಿ ಕೃಷ್ಣರಾಜಒಡೆಯರ್, ಸರ್.ಎಂ ವಿಶ್ವೇಶ್ವರಯ್ಯ ಕೊಡುಗೆ ಅಪಾರ. ಅವರು ನಿರ್ಮಾಣ ಮಾಡಿರುವ ಕೃಷ್ಣರಾಜಸಾಗರ ಜಲಾಶಯದ ಬೃಂದಾವನದಲ್ಲಿ ಯಾವುದೇ ಬದಲಾವಣೆ ಆಗಬಾರದು.
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಕ್ರೀಡಾ ಸಚಿವನಾಗಿದ್ದೆ. ಆಗ ಅಣೆಕಟ್ಟೆಯ ಮುಂಭಾಗ ವಿಸ್ತಾರವಾಗಿರುವ ನೀರಿನಲ್ಲಿ ಅಂತಾರಾಷ್ಟ್ರೀಯ ಪೋಲೋ ಕ್ರೀಡೆ ಮಾಡಲಿಕ್ಕೆ ಮುಂದಾಗಿದ್ದೆ. ಹಾಗಾಗಿ ಇದನ್ನು ಕಾರ್ಯಗತ ಮಾಡಿದರೆ ಮೈಸೂರಿಗೆ ಹೆಚ್ವಿನ ಆದಾಯ ವಾಗಲಿದೆ ಎಂದು .ವಿಶ್ವನಾಥ್ ತಿಳಿಸಿದರು.
ಡಿಸ್ನಿಲ್ಯಾಂಡ್ ಬದಲು ಈ ಯೋಜನೆಗಳು ಉತ್ತಮವಾಗಿದ್ದು, ಕೆಆರ್ಎಸ್ ಅಂದವನ್ನು ಹಾಗೂ ಆದಾಯವನ್ನು ಹೆಚ್ಚಿಸುತ್ತವೆ. ರೈತರ ಹಾಗೂ ಜನರ ಹಿತದೃಷ್ಟಿಯಿಂದ ಈ ಡಿಸ್ನಿ ಲ್ಯಾಂಡ್ ಸಮಂಜಸವಲ್ಲ ಎಂದು ಹೇಳಿದರು.












Click it and Unblock the Notifications