ಇಬ್ಬರು ಆಟಗಾರರು ಮೈಸೂರು ವಾರಿಯರ್ಸ್ ಗೆ ಆಯ್ಕೆ
ಮೈಸೂರು, ಜುಲೈ 31: ಮೈಸೂರು ವಾರಿಯರ್ಸ್ ಮಾಲೀಕ ಸಂಸ್ಥೆ ಎನ್ಆರ್ ಗ್ರೂಪ್ ನ 2019ನೇ ಸಾಲಿನ ಕೆಪಿಎಲ್ ಗೆ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಇಬ್ಬರು ಆಟಗಾರರು ಆಯ್ಕೆಯಾಗಿದ್ದಾರೆ. ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಉತ್ತಮ ಕ್ರಿಕೆಟ್ ಆಟಗಾರರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಎರಡು ಹಂತಗಳ ಪ್ರತಿಭಾನ್ವೇಷಣೆ ನಡೆಸಲಾಗಿತ್ತು.
ಇದರಲ್ಲಿ ಉತ್ತಮ್ ಅಯ್ಯಪ್ಪ ಮತ್ತು ಚೇತನ್ ಎಲ್.ಆರ್. ಅವರನ್ನು ಮೈಸೂರು ವಾರಿಯರ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಈ ಇಬ್ಬರು ಆಟಗಾರರು ಈ ಸೀಸನ್ ಕೆಪಿಎಲ್ ನಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಮೈಸೂರಿನ ಜೋ ಜೋ ಕ್ರಿಕೆಟ್ ಕ್ಲಬ್ ನ ಗ್ರೂಪ್ 1 ಅನ್ನು ಪ್ರತಿನಿಧಿಸುತ್ತಿರುವ ಉತ್ತಮ್ ಅಯ್ಯಪ್ಪ ಅವರು ಆಲ್ರೌಂಡರ್ ಆಗಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ತಂಡದ ಸದಸ್ಯರೂ ಆಗಿರುವ ಉತ್ತಮ್, ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮತ್ತು ಅಖಿಲ ಭಾರತ ರೋಹಿಂಟನ್ ಬಾರಿಯಾ ಟ್ರೋಫಿಯ ರನ್ನರ್ ಅಪ್ ಆಗಿದ್ದಾರೆ. ಚೇತನ್ ಎಲ್.ಆರ್. ಅವರು ಸರಸ್ವತಿಪುರಂ ಕ್ರಿಕೆಟ್ ನ ಸದಸ್ಯರಾಗಿದ್ದು, ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್ ಮನ್ ಆಗಿದ್ದಾರೆ.

ಮೈಸೂರು ವಾರಿಯರ್ಸ್ ನಡೆಸಿದ ಪ್ರತಿಭಾನ್ವೇಷಣೆಯಲ್ಲಿ 535ಕ್ಕೂ ಹೆಚ್ಚು ಯುವ ಕ್ರಿಕೆಟ್ ಆಕಾಂಕ್ಷಿಗಳು ಪಾಲ್ಗೊಂಡಿದ್ದರು. ಮೈಸೂರು ಆವೃತ್ತಿಯಲ್ಲಿ 215 ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಇವರಲ್ಲಿ 35 ಬ್ಯಾಟ್ಸ್ ಮನ್ ಗಳು, 58 ಆಲ್ರೌಂಡರ್ ಗಳು, 32 ಸ್ಪಿನ್ನರ್ ಗಳು, 85 ವೇಗದ ಬೌಲರ್ ಗಳು ಮತ್ತು 5 ಮಂದಿ ವಿಕೆಟ್ ಕೀಪರ್ ಗಳು ಇದ್ದರು.
ಬೆಂಗಳೂರಿನ ಯಲಹಂಕದಲ್ಲಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಪ್ರತಿಭಾನ್ವೇಷಣೆಯಲ್ಲಿ 300ಕ್ಕೂ ಹೆಚ್ಚು ಯುವ ಆಟಗಾರರು ಪಾಲ್ಗೊಂಡಿದ್ದರು. ಇವರಲ್ಲಿ 70 ಮಧ್ಯಮ ವೇಗದ ಬೌಲರ್ ಗಳು, 50 ಸ್ಪಿನ್ ಬೌಲರ್ ಗಳು, 75 ಬ್ಯಾಟ್ಸ್ ಮನ್ ಗಳು, 80 ಆಲ್ರೌಂಡರ್ ಗಳು ಮತ್ತು 25 ವಿಕೆಟ್ ಕೀಪರ್ ಗಳಿದ್ದರು.

ಈ ಎಲ್ಲಾ ಆಟಗಾರರ ಪೈಕಿ 50 ಯುವ ಪ್ರತಿಭೆಗಳು ಮಂಡ್ಯದ ಪಿಇಟಿ ಗ್ರೌಂಡ್ಸ್ ನಲ್ಲಿ 2019ರ ಜುಲೈ 23ರಂದು ನಡೆದ ಎರಡು ಹಂತಗಳ ಪರೀಕ್ಷಾರ್ಥ ಪಂದ್ಯದಲ್ಲಿ ಆಟ ಪ್ರದರ್ಶಿಸಿದರು. ಪಂದ್ಯವನ್ನು ಆಡಿದ 50 ಜನರ ಪೈಕಿ ಅಂತಿಮವಾಗಿ 2019ನೇ ಸಾಲಿನ ಕೆಪಿಎಲ್ ಗೆ ಮೈಸೂರು ವಾರಿಯರ್ಸ್ ತಂಡಕ್ಕೆ ಆಯ್ಕೆ ಮಾಡಲಾಯಿತು.












Click it and Unblock the Notifications