ಹಿಮಾಲಯ ಪರ್ವತ ಏರಲಿದ್ದಾರೆ ಬಂಡೀಪುರ, ನಾಗರಹೊಳೆ ಬುಡಕಟ್ಟು ಬಾಲಕಿಯರು
ಮೈಸೂರು, ಏಪ್ರಿಲ್ 29:ಕಾನನದಲ್ಲಿ ಕಾಡುಪ್ರಾಣಿಗಳನ್ನೇ ಸ್ನೇಹಿತರನ್ನಾಗಿಸಿಕೊಂಡು ಬೆಳೆಯುವ ಮಕ್ಕಳಿಗೆ ಅದೇ ಪ್ರಪಂಚ ಎಂಬ ಭಾವ. ಆದರೆ ಅಂತಹ ವಿದ್ಯಾರ್ಥಿಗಳಿಗೆ ಹಿಮಾಲಯ ಏರುವ ಭಾಗ್ಯ ಒಲಿದು ಬಂದಿದೆ.
ಹೌದು, ಆಗಸವನ್ನು ಚುಂಬಿಸುವ ಹಿಮಾವೃತ ಪ್ರದೇಶಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡು ಪರ್ವತ ಏರುವುದು ಸಾಹಸಮಯ ಮತ್ತು ರಮಣೀಯವಾದ ಅನುಭವ. ಕಾಡು - ಬೆಟ್ಟಗಳಲ್ಲಿ ಈಗಾಗಲೇ ತಮ್ಮ ಹೆಜ್ಜೆಗುರುತು ಮೂಡಿಸಿರುವ ಬಂಡೀಪುರ ಮತ್ತು ನಾಗರಹೊಳೆ ಬುಡಕಟ್ಟು ಬಾಲಕಿಯರು ಹಿಮಾಲಯದ ಪರ್ವತಗಳಲ್ಲಿಯೂ ತಮ್ಮ ಹೆಜ್ಜೆ ಗುರುತನ್ನು ದಾಖಲಿಸಲು ಸಜ್ಜಾಗಿದ್ದಾರೆ.
ಈ ಸಾಹಸಕ್ಕೆ ಮೈಸೂರಿನ ಟೈಗರ್ ಅಡ್ವೆಂಚರ್ ಫೌಂಡೇಶನ್ ಒತ್ತಾಸೆಯಾಗಿದೆ. ವಿಶ್ವ ಪರ್ವತಾರೋಹಿ ದಿನದ ಪ್ರಯುಕ್ತ ಟೈಗರ್ ಅಡ್ವೆಂಚರ್ ಫೌಂಡೇಶನ್ ಆಶಾ-2019 ಎಂಬ ಕಾರ್ಯಕ್ರಮದಡಿ ಬಂಡೀಪುರ ಮತ್ತು ನಾಗರಹೊಳೆ ವ್ಯಾಪ್ತಿಯಿಂದ 12 ಮಂದಿ ಬುಡಕಟ್ಟು ಬಾಲಕಿಯರು 14 ಸಾವಿರ ಅಡಿ ಎತ್ತರದ ಹಿಮಾಲಯ ಏರಲು ಸಿದ್ಧರಾಗಿದ್ದಾರೆ.

ಸಾಹಸಮಯ ಪ್ರವೃತ್ತಿಯ ಚಾರಣ ಆತ್ಮಸ್ಥೈರ್ಯ ವೃದ್ಧಿಸುವ ಸಾಧನೆ ಎಂದು ನಂಬಿರುವ ಟೈಗರ್ ಅಡ್ವೆಂಚರ್ ಫೌಂಡೇಶನ್ ಈ ವರ್ಷ ಬುಡಕಟ್ಟು ಬಾಲಕಿಯರನ್ನು ಹಿಮಾಲಯಕ್ಕೆ ಕರೆದುಕೊಂಡು ಹೋಗುತ್ತಿದೆ.
ಇವರ ಕಾರ್ಯಕ್ಕೆ 139 ಮಂದಿ 8.5 ಲಕ್ಷ ರೂ ಧನಸಹಾಯ ನೀಡಿ ಮಕ್ಕಳ ಚಾರಣಕ್ಕೆ ನೆರವಾಗಿದ್ದಾರೆ. ಮೇ 2 ರಿಂದ 17 ರವರೆಗೆ ಹಿಮಾಲಯದ 14 ಸಾವಿರ ಅಡಿ ಎತ್ತರಕ್ಕೆ ಚಾರಣ ಕೈಗೊಳ್ಳಲಾಗಿದೆ. ಚಾರಣದ ಹಿನ್ನೆಲೆಯಲ್ಲಿ ಕಬಿನಿ ಹಿನ್ನೀರಿನಲ್ಲಿ ಮೂರು ತಿಂಗಳಿಂದ ಸತತವಾಗಿ ದೈಹಿಕ ಸಾಮರ್ಥ್ಯ ವೃದ್ಧಿಸುವ ತರಬೇತಿ ನೀಡಲಾಗಿದೆ.

ಮೈಸೂರು ಕುಕ್ಕರಹಳ್ಳಿ ಕೆರೆ, ಚಾಮುಂಡಿ ಬೆಟ್ಟದಲ್ಲಿಯೂ ಕಠಿಣ ತರಬೇತಿ ನೀಡಲಾಗಿದೆ. 8 ಬಾರಿ ಹಿಮಾಲಯ ಚಾರಣ ಮಾಡಿರುವ ಒಂಬತ್ತನೇ ತರಗತಿ ವಿದ್ಯಾರ್ಥಿನಿ ರಿಯಾ ಸೋಲಂಕಿ ಈ ತಂಡವನ್ನು ಮುನ್ನಡೆಸಲಿದ್ದಾರೆ. ಬುಡಕಟ್ಟು ಮಕ್ಕಳೆಂದರೆ ಅವರೇನ್ರೀ ಸಾಧನೆ ಮಾಡ್ತಾರೆ ಎಂದು ಹೀಗಳೆಯುವ ಜನರಿಗೆ ಈ ದಿಟ್ಟ ಹೆಣ್ಣು ಮಕ್ಕಳ ಸಾಧನೆ ಮಾದರಿಯಾಗಲಿದೆ.












Click it and Unblock the Notifications