ಪ್ರವಾಸಿಗರ ಸೆಳೆಯುವ ಮೈಸೂರಿನ ಪ್ರವಾಸಿತಾಣಗಳು
ಮೈಸೂರು, ಅಕ್ಟೋಬರ್ 07: ಮೈಸೂರಿಗೆ ಭೇಟಿ ನೀಡಿದ ಪ್ರವಾಸಿಗರು ದಸರಾ ಮುಗಿಸಿಕೊಂಡು ಮನೆ ಹಾದಿ ಹಿಡಿದು ಬಿಟ್ಟರೆ ಏನೂ ಪ್ರಯೋಜನವಿಲ್ಲ. ಇಲ್ಲಿ ದಸರಾ ಮುಗಿದರೂ ಅದರ ಸಂಭ್ರಮ ಕಡಿಮೆಯಾಗಲ್ಲ. ಏಕೆಂದರೆ ಹೆಚ್ಚಿನ ಪ್ರವಾಸಿಗರು ದಸರಾ ಮುಗಿಸಿಕೊಂಡು ಅಷ್ಟು ಸುಲಭವಾಗಿ ವಾಪಾಸ್ ತೆರಳುವುದಿಲ್ಲ. ಬದಲಿಗೆ ಒಂದಷ್ಟು ದಿನ ವಾಸ್ತವ್ಯ ಹೂಡಿ ಮೈಸೂರು ನಗರ ಸೇರಿದಂತೆ ಸುತ್ತಮುತ್ತಲಿರುವ ಪ್ರವಾಸಿ ತಾಣಗಳಿಗೆ ಭೇಟಿ ಸಂಭ್ರಮಿಸುತ್ತಾರೆ.
ಮೈಸೂರೊಂದು ಸುತ್ತು ಹೊಡೆಯುವ ಪ್ರವಾಸಿಗರಿಗಾಗಿ ಇಲ್ಲಿ ಒಂದಷ್ಟು ಪ್ರವಾಸಿ ತಾಣಗಳು, ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮೊದಲಿಗೆ ಚಾಮುಂಡಿ ಬೆಟ್ಟ. ಮೈಸೂರಿನ ಅಧಿದೇವತೆ, ಯದುವಂಶದ ಕುಲದೈವ ಶ್ರೀ ಚಾಮುಂಡೇಶ್ವರಿಯ ನೆಲೆವೀಡು ಚಾಮುಂಡಿಬೆಟ್ಟವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ 1025 ಮೀ. ಎತ್ತರದಲ್ಲಿರುವ ಮೈಸೂರಿನ ಆಕರ್ಷಣೀಯ ಧಾರ್ಮಿಕ ಕ್ಷೇತ್ರ ಮತ್ತು ಹಸಿರಿನೈಸಿರಿಯಲ್ಲಿರುವ ಪ್ರೇಕ್ಷಣೀಯ ತಾಣವೂ ಹೌದು.
ಐತಿಹಾಸಿಕ 'ಮಹಾನವಮಿ ದಿಬ್ಬ'ದ ಕುರಿತು ಒಂದಷ್ಟು ಮಾಹಿತಿ
ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿಗೆ ಬೆಟ್ಟದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷವಾಗಿದ್ದು, ಆ ದಿನಗಳಲ್ಲಿ ವಿಶೇಷಪೂಜೆ ಇರುತ್ತದೆ. ಸಿಂಹವಾಹಿನಿ ಚತುರ್ಭುಜಧಾರಿಣಿಯಾದ ಇಲ್ಲಿನ ಚಾಮುಂಡೇಶ್ವರಿಯನ್ನು ನೋಡುವುದೇ ಭಕ್ತರಿಗೆ ಮಹದಾನಂದ.
ಸಮ್ಮರ್ ಪ್ಯಾಲೆಸ್ ರಾಜೇಂದ್ರ ವಿಲಾಸ ಅರಮನೆ
ಈ ಬೆಟ್ಟದಲ್ಲಿ ಮತ್ತೊಂದು ಆಕರ್ಷಣೀಯ ಸ್ಥಳವೆಂದರೆ ಸಮ್ಮರ್ ಪ್ಯಾಲೇಸ್ ಎಂದು ಕರೆಯಲ್ಪಡುವ ರಾಜೇಂದ್ರ ವಿಲಾಸ ಅರಮನೆ. ಹಾಗೆಯೇ ಬೆಟ್ಟದ 700 ಮೆಟ್ಟಿಲುಗಳ ಬಳಿ ದೊಡ್ಡದೇವರಾಜ ಒಡೆಯರ್ ಅವರಿಂದ ನಿರ್ಮಿಸಲ್ಪಟ್ಟಿರುವ 16 ಅಡಿ ಎತ್ತರ 26 ಅಡಿ ಉದ್ದದ ಕಲ್ಲಿನ ಬೃಹತ್ ನಂದಿ ಸೂಜಿಗಲ್ಲಿನಂತೆ ಸೆಳೆಯುತ್ತದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಶಂಕುಸ್ಥಾಪನೆ
ಇನ್ನು ಗಗನವನ್ನು ಚುಂಬಿಸಿ ಬಿಡುತ್ತವೇನೋ ಎಂಬಂತಿರುವ ಎರಡು ಬೃಹತ್ ಗೋಪುರಗಳುಳ್ಳ ಗೋತಿಕ್ ಮಾದರಿಯಲ್ಲಿ ನಿರ್ಮಿಸಲ್ಪಟ್ಟ ಕಲಾನೈಪುಣ್ಯದ ಕಟ್ಟಡ ಮೈಸೂರಿನ ಸಂತ ಫಿಲೋಮಿನಾ ಚರ್ಚ್. 1933ರಲ್ಲಿ ಈ ಕ್ರೈಸ್ತ ದೇವಾಲಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಶಂಕುಸ್ಥಾಪನೆ ಮಾಡಿದ್ದರು. ಇಲ್ಲಿನ ಬೋಧನಾ ಮಂದಿರದಲ್ಲಿರುವ ಸಂತ ಫಿಲೋಮಿನಾಳ ವಿಗ್ರಹ ಅತ್ಯಂತ ಆಕರ್ಷಣೀಯವಾಗಿದೆ. ಈ ಚರ್ಚ್ ತನ್ನ ಕಲಾತ್ಮಕ ಚೆಂದದಿಂದಲೇ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮಕ್ಕಳ ಮನರಂಜನೆ, ಜ್ಞಾನಾರ್ಜನೆಗೆ ಹಲವು ಸ್ಥಳಗಳಿವೆ
ಪ್ರಾಣಿ-ಪಕ್ಷಿಗಳ ವೀಕ್ಷಣೆಗೆ ಕರ್ನಾಟಕದಲ್ಲೇ ಅತಿದೊಡ್ಡದೆನಿಸಿರುವ ಚಾಮರಾಜೇಂದ್ರ ಮೃಗಾಲಯವಿದೆ. ದೋಣಿ ವಿಹಾರಕ್ಕೆ ಕಾರಂಜಿ ಕೆರೆ ಇದೆ. ವಾಯುವಿಹಾರಕ್ಕೆ ಕುಕ್ಕರಹಳ್ಳಿ ಕೆರೆ ಏರಿ ಇದೆ. ಮಕ್ಕಳ ಮನೋರಂಜನೆಗೆ ರೈಲ್ ಮ್ಯೂಸಿಯಂ ಮತ್ತು ಜವಾಹರ್ ಬಾಲಭವನ, ಗಾಂಧಿವನ ಹಾಗೂ ಜಿ.ಆರ್.ಎಸ್. ಫ್ಯಾಂಟಸಿ ಪಾರ್ಕ್ ಇದೆ.
ರುಚಿ-ರುಚಿ ತಿನಿಸು, ಆಟ-ನೋಟಕ್ಕೆ ದಸರಾ ವಸ್ತುಪ್ರದರ್ಶನ
ರುಚಿ ರುಚಿ ತಿನಿಸು, ಜೊತೆ ಜೊತೆಯಲ್ಲಿ ನಲಿವಿನ ಆಟ, ಸೊಗಸಿನ ನೋಟಕೆ ದಸರಾ ವಸ್ತು ಪ್ರದರ್ಶನವಿದೆ. ಹೀಗೆ ಎಲ್ಲವೂ ಇದ್ದು ಇವೆಲ್ಲವೂ ದಸರಾ ಮಹೋತ್ಸವದಲ್ಲಿ ಮತ್ತಷ್ಟು ರಂಗುರಂಗಾಗಿ ರಂಜಿಸುತ್ತವೆ. ಇನ್ನು ಮೈಸೂರು ನಗರದಿಂದ ಸ್ವಲ್ಪ ದೂರಕ್ಕೆ ಹೋಗುವ ಮನಸ್ಸು ಮಾಡಿದರೆ ಅಂದದ ಅಣೆಕಟ್ಟು ಕೆ.ಆರ್.ಎಸ್ ಜಲಾಶಯವಿದೆ.
ಮೈಸೂರಿನ ಅಕ್ಕ-ಪಕ್ಕ ಹಲವು ಪ್ರೇಕ್ಷಣಿಯ ಸ್ಥಳಗಳಿವೆ
ಮೈಸೂರು ದಸರಾ ದರ್ಶನದ ಜೊತೆಜೊತೆಗೆ ದಕ್ಷಿಣದ ಶ್ರೀಶೈಲ ಮುಡುಕುತೊರೆ ಬೆಟ್ಟ, ದಕ್ಷಿಣಕಾಶಿ ನಂಜನಗೂಡು ನಂಜುಂಡೇಶ್ವರ, ಇತಿಹಾಸ ಪ್ರಸಿದ್ಧ ಸೋಮನಾಥಪುರದ ಶ್ರೀ ಚನ್ನಕೇಶವ, ತಲಕಾಡು ಪಂಚಲಿಂಗೇಶ್ವರ, ತಿರುಮಕೂಡಲಿನ ತ್ರಿವೇಣಿ ಸಂಗಮ, ಶ್ರೀರಂಗಪಟ್ಟಣದ ಪಕ್ಷಿಧಾಮ, ಶ್ರೀರಂಗನಾಥ ದೇಗುಲ, ದರಿಯಾದೌಲತ್, ಗಂಜಾಂನ ನಿಮಿಷಾಂಬ ದೇವಿ, ಬೆಳಗೊಳದ ಬಲಮುರಿ ಹಾಗೂ ಎಡಮುರಿ ಹೀಗೆ ಹತ್ತು ಹಲವು ತಾಣಗಳು ಪ್ರವಾಸಿಗರಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ.