ಸೂತಕದ ಛಾಯೆಯ ನಡುವೆ ಅರಮನೆಯಲ್ಲಿ ವಿಜಯದಶಮಿ ಆಚರಣೆ
Recommended Video

ಮೈಸೂರು, ಅಕ್ಟೋಬರ್.22: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ನಾದಿನಿ ವಿಶಾಲಾಕ್ಷಿ ಅವರ ನಿಧನದಿಂದ ಸ್ಥಗಿತಗೊಂಡಿದ್ದ ವಿಜಯದಶಮಿ ಕಾರ್ಯಕ್ರಮಗಳು ಅರಮನೆಯಲ್ಲಿ ಇಂದು ಸಂಪನ್ನಗೊಂಡಿದೆ.
ಬೆಳಗ್ಗೆ 8ಕ್ಕೆ ಉತ್ತರ ಪೂಜೆ , ವಜ್ರಮುಷ್ಟಿ ಕಾಳಗ , ಬನ್ನಿಮರ ಪೂಜೆ ಇನ್ನಿತರ ಧಾರ್ಮಿಕ ಕಾರ್ಯಗಳು ನಡೆದವು. ಈ ನಡುವೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಕೇವಲ ಒಳಾಂಗಣದ ಪ್ರವೇಶಕ್ಕೆ ಮಾತ್ರ ನಿರ್ಬಂಧವಿತ್ತು.
ಇತಿಹಾಸದಲ್ಲಿ ಮೊದಲ ಬಾರಿಗೆ ಎನ್ನುವಂತೆ ವಿಜಯದಶಮಿಯ ಕಾರ್ಯಕ್ರಮಗಳು ಒಮ್ಮೆ ನಿಂತು, ಮತ್ತೊಂದು ದಿನದಂದು ನಡೆದಿದ್ದು, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಮುಂದೆ ಓದಿ...

ಆಯುಧಗಳಿಗೆ ಪೂಜೆ
ಚಿನ್ನದ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ ಇಟ್ಟು ಪೂಜೆ ಸಲ್ಲಿಸಿದ್ದು, ಅರಮನೆಯ ಪಟ್ಟದ ಆನೆ , ಹಸು , ಕುದುರೆ , ಒಂಟೆಗಳಿಗೆ ಪೂಜೆ ಸಲ್ಲಿಸಲಾಯಿತು. ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಪೂಜೆ ನೆರವೇರಿಸಿದ ಯದುವೀರ್ ಒಡೆಯರ್ ರಾಜಪುರೋಹಿತರ ಮಾರ್ಗದರ್ಶನದಲ್ಲಿ ಎಲ್ಲ ಕಾರ್ಯವನ್ನು ಸಾಂಗೋಪಾಂಗವಾಗಿ ನೆರವೇರಿಸಿದರು.

ಕಾದಾಟ ಆರಂಭ
ಬಳಿಕ ಜಟ್ಟಿ ಕಾಳಗಕ್ಕೆ ಸೂಚನೆ ಸಿಗುತ್ತಿದ್ದಂತೆ ನಾಲ್ವರು ಜಟ್ಟಿಗಳು ಕಾದಾಟ ಆರಂಭಿಸಿದರು. ಬೆಂಗಳೂರಿನ ರಾಘವೇಂದ್ರ ಜೆಟ್ಟಿ, ಮೈಸೂರಿನ ಮಂಜುನಾಥ ಜಟ್ಟಿ , ವಿದ್ಯಾಧರ ಶೆಟ್ಟಿ , ಚನ್ನಪಟ್ಟಣದ ಚಾಮರಾಜನಗರದ ಪುರುಷೋತ್ತಮ ಶೆಟ್ಟಿ ಈ ಬಾರಿ ವಜ್ರಮುಷ್ಟಿ ಕಾಳಗದಲ್ಲಿ ಪಾಲ್ಗೊಂಡಿದ್ದರು.

1 ನಿಮಿಷದ ಅವಧಿಯಲ್ಲಿ ಮುಕ್ತಾಯ
ಕರಿಕಲ್ಲು ತೊಟ್ಟಿಯಲ್ಲಿ ವಜ್ರಮುಷ್ಟಿ ಕಾಳಗ ಪ್ರೇಕ್ಷಕರ ಅನುಪಸ್ಥಿತಿಯ ನಡುವೆ ಕೇವಲ ಒಂದು ನಿಮಿಷದ ಅವಧಿಯಲ್ಲಿ ಮುಕ್ತಾಯಗೊಂಡಿತು. ಪ್ರತಿ ವರ್ಷ ಜನಜಂಗುಳಿಯಿಂದ ತುಂಬಿ ತುಳಿಕುತ್ತಿದ್ದ ಈ ಕಾರ್ಯಕ್ರಮಕ್ಕೆ ಈ ಬಾರಿ ಜನರಿಲ್ಲದೆ ವಜ್ರಮುಷ್ಟಿ ಕಾಳಗ ಖಾಸಗಿ ಕಾರ್ಯಕ್ರಮವಾಗಿ ಏರ್ಪಟ್ಟಿತ್ತು.

ಬೇಸರದ ಸಂಗತಿ
ಬೆಂಗಳೂರಿನ ರಾಘವೇಂದ್ರ ಜಟ್ಟಿ ಅವರು ಚಾಮರಾಜನಗರದ ಪುರುಷೋತ್ತಮ ಶೆಟ್ಟಿ ಮೇಲೆ ಆಕ್ರಮಣ ಮಾಡಿದರು. ಈ ವೇಳೆ ಪುರುಷೋತ್ತಮ ಶೆಟ್ಟಿ ಅವರ ತಲೆಯಿಂದ ರಕ್ತ ಚಿಮ್ಮಿದ್ದು, ಈ ಮೂಲಕ ವಜ್ರಮುಷ್ಟಿ ಕಾಳಗ ಸಮಾಪ್ತಿಗೊಂಡಿತು. ಒಟ್ಟಾರೆ ಇಂದಿನ ವಿಜಯದಶಮಿ ಕಾರ್ಯಕ್ರಮವು ಒಂದೆಡೆ ಸೂತಕದ ಛಾಯೆಯ ನಡುವೆ ನಡೆದಿದ್ದು ಮಾತ್ರ ಬೇಸರದ ಸಂಗತಿ.












Click it and Unblock the Notifications