ಪಾಂಡವಪುರದಲ್ಲಿ ಯುವತಿ ಮೇಲೆ ಪುಂಡರ ಅತ್ಯಾಚಾರ
ಮಂಡ್ಯ, ಅಕ್ಟೋಬರ್ 11 : ಬೆಂಗಳೂರಿನಲ್ಲಿ ಬಿಪಿಓ ಉದ್ಯೋಗಿಯ ಸಾಮೂಹಿತ ಅತ್ಯಾಚಾರ ನಡೆದ ಕೆಲವೇ ದಿನಗಳಲ್ಲಿ, ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಯುವತಿಯೋರ್ವಳ ಮೇಲೆ ಮೂವರು ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಘಟನೆ ಜರುಗಿದ್ದು, ಕರ್ನಾಟಕದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ ಎಂಬ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.
ಮದುವೆಯಾಗುವುದಾಗಿ ನಂಬಿಸಿ ಆಕೆಯ ಸ್ನೇಹಿತ ಕೀರ್ತಿ ಗೌಡ ಎಂಬುವವ ಆಕೆಯನ್ನು ಬೇಬಿಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದಾನೆ. ತನ್ನಿಬ್ಬರು ಸ್ನೇಹಿತರಾದ ಕಿರಣ್ ಮತ್ತು ಮೋಹನ್ ಎಂಬಿಬ್ಬರನ್ನು ಫೋನ್ ಮಾಡಿ ಕರೆಸಿಕೊಂಡಿದ್ದಾನೆ. ಅಲ್ಲಿ ಮೂವರೂ ಸೇರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ನಡೆದಿರುವುದು ಅಕ್ಟೋಬರ್ 9ರಂದು. [ಕಾಲ್ ಸೆಂಟರ್ ಉದ್ಯೋಗಿ ಮೇಲೆ ಗ್ಯಾಂಗ್ ರೇಪ್]
ವಿದ್ಯಾರ್ಥಿನಿಯಾಗಿರುವ ಯುವತಿಯ ಮೇಲೆ ಮೈಸೂರಿನ ಕೀರ್ತಿ ಗೌಡ ಮೊದಲು ಅತ್ಯಾಚಾರವೆಸಗಿದ್ದಾನೆ. ನಂತರ ಬೈಕಿನ ಮೇಲೆ ಬಂದ ಕಿರಣ್ ಮತ್ತು ಮೋಹನ್ ಕೂಡ ಯುವತಿಯನ್ನು ರೇಪ್ ಮಾಡಿದ್ದಾರೆ. ಪೊಲೀಸರಿಗೆ ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಸಿದ್ದಾರೆ. ಬೆದರಿಕೆಗೆ ಜಗ್ಗದೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. [ವಿಡಿಯೋ ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?]
ಈ ಹೀನ ಕೃತ್ಯವೆಸಗಿದ ಮೂವರನ್ನೂ ಬಂಧಿಸುವಲ್ಲಿ ಪಾಂಡವಪುರ ಪೊಲೀಸರು ಯಶಸ್ವಿಯಾಗಿದ್ದು, ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೃತ್ಯಕ್ಕೆ ಬಳಸಲಾಗಿದ್ದ ಎರಡು ಬೈಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಘಾತಕ್ಕೊಳಗಾಗಿರುವ ಯುವತಿಯನ್ನು ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. [ಬಿಪಿಒ ಉದ್ಯೋಗಿ ರೇಪ್ ಕೇಸ್ : ಪೊಲೀಸ್ ಆಯುಕ್ತರು ಹೇಳಿದ್ದಿಷ್ಟು]