ಕಾರ್ಮಿಕ ವರ್ಗಕ್ಕೆ ಗುಡ್ ನ್ಯೂಸ್: ಶೀಘ್ರದಲ್ಲೇ ಕನಿಷ್ಠ ವೇತನ ಹೆಚ್ಚಳ
ಮೈಸೂರು, ಅಕ್ಟೋಬರ್ 26: ರಾಜ್ಯದಲ್ಲಿ ಕಾರ್ಮಿಕರ ಕನಿಷ್ಠ ವೇತನವನ್ನು ಶೀಘ್ರದಲ್ಲೇ ಹೆಚ್ಚಿಸಲಾಗುವುದು ಎಂದು ರಾಜ್ಯ ಕಾರ್ಮಿಕ ಇಲಾಖೆಯ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ಕಾರ್ಮಿಕ ವರ್ಗಕ್ಕೆ ಭರವಸೆ ನೀಡಿದ್ದಾರೆ.
ವಿದ್ಯಾರಣ್ಯಪುರಂನ ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಕಾರ್ಮಿಕ ಕಾಯ್ದೆಗಳು ಹಾಗೂ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಕನಿಷ್ಠ ವೇತನ ಹೆಚ್ಚಿಸುವ ಭರವಸೆ ನೀಡಿದರು.

ವೇತನ ಪರಿಷ್ಕರಣೆ 5 ವರ್ಷಗಳ ಹಿಂದೆ ನಡೆದಿತ್ತು. ಈಗ ವೈಜ್ಞಾನಿಕವಾಗಿ ನಿಗದಿಪಡಿಸಲಾಗುವುದು. ಪ್ರಸ್ತುತ 14 ಸಾವಿರ ರೂಪಾಯಿ ಕೊಡಲಾಗುತ್ತಿದ್ದು, ಅದರಲ್ಲಿ ಜೀವನ ನಡೆಸುವುದು ಕಷ್ಟ. ಹಾಗೆಂದು ಸಂಘಟನೆಗಳು ಕೇಳಿದಂತೆ 35 ಸಾವಿರ ರೂಪಾಯಿ ಕೊಡುವುದಕ್ಕೂ ಆಗುವುದಿಲ್ಲ. ಎಲ್ಲರಿಗೂ ಒಮ್ಮತವಾದ ಕನಿಷ್ಠ ವೇತನ ನಿಗದಿಪಡಿಸಲಾಗುವುದು ಎಂದು ಹೇಳಿದರು.
೨೫ ಕಾರ್ಮಿಕ ಕಾಯ್ದೆಗಳನ್ನು ಕ್ರೋಡೀಕರಿಸಿ 4 ಕಾರ್ಮಿಕ ಸಂಹಿತೆಗಳು ಮುಂದಿನ ಆರ್ಥಿಕ ವರ್ಷದಿಂದ ಜಾರಿಗೆ ಬರಬಹುದು. ಇದಕ್ಕಾಗಿ ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ನಡೆಯುತ್ತಿದೆ . ರಾಜ್ಯದಲ್ಲಿ 38 ಲಕ್ಷ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿದ್ದಾರೆ. ವರ್ಷಕ್ಕೆ ಸರಾಸರಿ 1 ಸಾವಿರ ಕೋಟಿ ಕಾರ್ಮಿಕ ಸೆಸ್ ಸಂಗ್ರಹವಾಗುತ್ತಿದೆ. ಅದರಲ್ಲಿ ಕಾರ್ಮಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಲೇಬರ್ ವೆಲ್ಫೇರ್ ಬೋರ್ಡ್ನಿಂದ ಏಳು ಯೋಜನೆ ಜಾರಿಗೊಳಿಸಲಾಗಿದೆ. ಉದ್ಯೋಗದಾತರು ಮಂಡಳಿಗೆ ಪಾವತಿಸಬೇಕಾದ ಪಾಲನ್ನು ನಿಯಮಿತವಾಗಿ ಕಟ್ಟಬೇಕು. ಹೋದ ವರ್ಷ 57 ಕೋಟಿ ವೆಚ್ಚವಾಗಿದ್ದು, 29 ಸಾವಿರ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಒದಗಿಸಿದ್ದೇವೆ ಎಂದರು.
ಅಸಂಘಟಿತ ವಲಯದವರು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಪಡೆದುಕೊಳ್ಳಲು ಕೇಂದ್ರದ ಇ-ಶ್ರಮ್ ಪೋರ್ಟಲ್ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬೇಕು. 398 ವರ್ಗದ ಅಸಂಘಟಿತ ಕಾರ್ಮಿಕರಿಗೆ ಅವಕಾಶವಿದೆ. ಈವರೆಗೆ 99.87 ಲಕ್ಷ ಮಂದಿ ಮಾತ್ರ ನೋಂದಾಯಿಸಿದ್ದಾರೆ. ಉಳಿದವರೂ ಮುಂದಾಗಬೇಕು ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಗಿಗ್ ಕ್ಷೇತ್ರದ ಕಾರ್ಮಿಕರು (ಸ್ವತಂತ್ರ ಕಾರ್ಮಿಕರು) 2.39 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಅವರಿಗೆ ವಿಮೆ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಈವರೆಗೆ 10ಸಾವಿರ ಮಂದಿ ಮಾತ್ರವೇ ನೋಂದಾಯಿಸಿದ್ದಾರೆ. ಅವರಿಗಾಗಿಯೇ ಪ್ರತ್ಯೇಕ ಮಂಡಳಿ ರಚಿಸುವ ಚಿಂತನೆಯೂ ನಡೆದಿದೆ. ದಿನಪತ್ರಿಕೆ ಹಾಕುವ 40ಸಾವಿರದಿಂದ 50 ಸಾವಿರ ಮಂದಿ ಇದ್ದು, ಅವರಿಗೂ ವಿಮೆ ದೊರೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಕೆ.ಎಂ.ಗಾಯಿತ್ರಿ ಸೇರಿದಂತೆ ಹಲವರು ಭಾಗವಹಿಸಿದ್ದರು.












Click it and Unblock the Notifications